ಪಾಕ್ ಪರ ಹೇಳಿಕೆ : ರಮ್ಯಾ ವಿರುದ್ಧ ದೂರು ದಾಖಲು
ಕೊಡಗು, ಆಗಸ್ಟ್ 22 : ಪಾಕಿಸ್ತಾನದ ಬಗ್ಗೆ ನಟಿ ರಮ್ಯಾ ನೀಡಿರುವ ಹೇಳಿಕೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಪಾಕ್ ಹೊಗಳಿದ ರಮ್ಯಾ ಅವರ ವಿರುದ್ಧ ದೂರು ದಾಖಲಾಗಿದೆ.
ಕೊಡಗು ಪ್ರಗತಿ ರಂಗದ ಜಿಲ್ಲಾಧ್ಯಕ್ಷ, ವಕೀಲ ವಿಠಲ ಗೌಡ ಅವರು ಜೆಎಂಎಫ್ಸಿ ಕೋರ್ಟ್ನಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದಾರೆ. ದೂರನ್ನು ಅಂಗೀಕರಿಸಿರುವ ಕೋರ್ಟ್ ಆಗಸ್ಟ್ 27ಕ್ಕೆ ವಿಚಾರಣೆಯನ್ನು ಮುಂದೂಡಿದೆ.[ಮಂಡ್ಯ : ರಮ್ಯಾ ಭಾವಚಿತ್ರ ದಹಿಸಿ ಆಕ್ರೋಶ]
ರಮ್ಯಾ ಹೇಳಿದ್ದೇನು? : ಶನಿವಾರ ಮಂಡ್ಯದಲ್ಲಿ ಮಾತನಾಡಿದ್ದ ರಮ್ಯಾ ಅವರು, 'ಪಾಕಿಸ್ತಾನಕ್ಕೆ ಹೋದರೆ ನರಕಕ್ಕೆ ಹೋದಂತೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ. ಆದರೆ, ಪಾಕಿಸ್ತಾನದಲ್ಲಿ ನಡೆದ ಸಾರ್ಕ್ ಯುವ ಸಂಸದರ ಹಾಗೂ ತಜ್ಞರ ಸಮ್ಮೇಳನದಲ್ಲಿ ಭಾಗವಹಿಸಿದ ನನ್ನ ಅನುಭವ ಚೆನ್ನಾಗಿಯೇ ಇತ್ತು. ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನ ಇಲ್ಲ. ಅಲ್ಲಿಯೂ ಒಳ್ಳೆಯವರಿದ್ದಾರೆ' ಎಂದು ಹೇಳಿದ್ದರು.
ಭಾರೀ ವಿರೋಧ : ಮಾಜಿ ಸಂಸದೆ ರಮ್ಯಾ ಅವರು ಪಾಕಿಸ್ತಾನದ ಪರ ನೀಡಿರುವ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಬಿಜೆಪಿ ನಾಯಕರು ರಮ್ಯಾ ಹೇಳಿಕೆಯನ್ನು ಖಂಡಿಸಿದ್ದಾರೆ.[ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ : ರಮ್ಯಾ]
'ಎಂಟಾಣೆ ಅಕ್ಷರ ಜ್ಞಾನ ಇಲ್ಲದವರು ಮಾತ್ರ ಪಾಕಿಸ್ತಾನವನ್ನು ಹೊಗಳುತ್ತಾರೆ. ನಾನೊಬ್ಬ ಭಾರತೀಯ. ನಮ್ಮ ದೇಶದ ಶತ್ರುಗಳನ್ನು ಹೊಗಳುವುದನ್ನು ನಾನು ಸಹಿಸುವುದಿಲ್ಲ. ಕೇವಲ ಮತ ಗಳಿಗಾಗಿ ಏನೇನೋ ಹೇಳಬೇಡಿ' ಎಂದು ಜಗ್ಗೇಶ್ ರಮ್ಯಾ ಹೇಳಿಕೆಗೆ ತಿರುಗೇಟು ನೀಡಿದ್ದರು.[ಪಾಕ್ ಬಗ್ಗೆ ಹೇಳಿಕೆ ವಿವಾದ: ಟ್ವಿಟ್ಟರ್ ನಲ್ಲಿ ಮೌನ ಮುರಿದ ರಮ್ಯಾ]