ಯಡಿಯೂರಪ್ಪ ನಮ್ಮ ನಾಯಕರು, ಬದಲಾವಣೆಯಿಲ್ಲ: ಸಚಿವ ನಾರಾಯಣ ಗೌಡ
ಮಡಿಕೇರಿ, ನವೆಂಬರ್ 29: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನಮ್ಮ ನಾಯಕರು, ಸಿಎಂ ಸ್ಥಾನದಲ್ಲಿ ಅವರೇ ಉಳಿಯಲ್ಲಿದ್ದು, ಬದಲಾವಣೆಯ ಮಾತಿಲ್ಲ ಎಂದು ಪೌರಾಡಳಿತ ಸಚಿವ ನಾರಾಯಣ ಗೌಡ ಹೇಳಿದರು.
ಪೊನ್ನಂಪೇಟೆಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರ ಸೂಚನೆ ದೊರೆತ ಬಳಿಕ ಸಂಪುಟ ವಿಸ್ತರಿಸಲಾಗುವುದು. ನುಡಿದಂತೆ ಸಿಎಂ ನಡೆದುಕೊಳ್ಳುತ್ತಾರೆ. ಶೇ.80 ರಷ್ಟು ಸಚಿವ ಸಂಪುಟ ಭರ್ತಿಯಾಗಿದ್ದು, ಉಳಿದ ಸ್ಥಾನಗಳನ್ನು ವಿಸ್ತರಿಸಲಾಗುತ್ತದೆ ಎಂದರು.
ಸಿಎಂ ಆಪ್ತ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಮೆಡಿಸನ್ ವ್ಯತಿರಿಕ್ತ ಪರಿಣಾಮದಿಂದ ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಕೆ ಕಂಡಿದ್ದಾರೆ. ಪಕ್ಷದಿಂದಾಗಿ ಅವರು ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದರು.

ಗೊಂದಲ ಬಗೆಹರಿಸುತ್ತೇನೆ: ಎಸ್.ಟಿ.ಎಸ್
ಮೈಸೂರು ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳೊಂದಿಗೆ ಇರುವ ಕೆಲ ಗೊಂದಲಗಳನ್ನು ಪರಿಹರಿಸುವ ಕೆಲಸ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ಪೊನ್ನಂಪೇಟೆಯಲ್ಲಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಗ್ರಾಮ ಸ್ವರಾಜ್ ಸಮಾವೇಶಕ್ಕೆ ಆಗಮಿಸಿದ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆಡಿಪಿ ಸಭೆಯಲ್ಲಿ ಕೆಲ ಗೊಂದಲ ಸೃಷ್ಠಿಯಾಗಿದ್ದು, ಮೈಸೂರಿಗೆ ತೆರಳಿ ಜನಪ್ರತಿನಿಧಿ ಮತ್ತು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಪರಸ್ಪರ ಹೊಂದಾಣಿಕೆಯಲ್ಲಿರುವಂತೆ ಹೇಳಲಾಗುತ್ತದೆ ಎಂದರು.

ಬಿಜೆಪಿ ರಾಷ್ಟ್ರಾಧ್ಯಕ್ಷರ ಸೂಚನೆ ದೊರೆತ ಬಳಿಕ ಸಂಪುಟ ವಿಸ್ತರಿಸಲಾಗುವುದು. ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅನ್ಯಾಯ ಮಾಡಿಲ್ಲ. ಇದುವರೆಗೂ ನುಡಿದಂತೆ ನಡೆದಿದ್ದಾರೆ. ಸೋತವರಿಗೆ ಎಂಎಲ್ಸಿ ಸ್ಥಾನ ನೀಡಿದ್ದಾರೆ. ಯಡಿಯೂರಪ್ಪ ಅವರು ನಮ್ಮ ನಾಯಕ, ಅವರನ್ನು ಸಿಎಂ ಸ್ಥಾನದಿಂದ ಬದಲಾಯಿಸುವ ಪ್ರಶ್ನೆಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications