ರುದ್ರ ರಮಣೀಯ ಕೊಡಗಿನ ಜಲಪಾತಗಳು, ಪ್ರವಾಸಕ್ಕೆ ತೆರಳುವ ಮುನ್ನ ಹುಷಾರು!

ಮಡಿಕೇರಿ, ಜೂನ್ 26: ಒಂದೆರಡು ದಶಕಗಳ ಹಿಂದಿನ ಮಾತು. ಆಗ ಈಗಿನಷ್ಟು ಕೊಡಗಿಗೆ ಪ್ರವಾಸಿಗರು ಧಾವಿಸುತ್ತಿರಲಿಲ್ಲ. ಜತೆಗೆ ಬೆಟ್ಟಗುಡ್ಡ, ಕಾಫಿ ತೋಟಗಳ ನಡುವಿನ ತಾಣಗಳನ್ನು ಅದರಲ್ಲೂ ಜಲಪಾತಗಳನ್ನು ನೋಡುವ ಪ್ರಯತ್ನವನ್ನು ಹೆಚ್ಚಿನವರು ಮಾಡುತ್ತಿರಲಿಲ್ಲ. ಕೆಲವರು ಚಾರಣ ಬರುವವರಷ್ಟೆ ಜಲಪಾತಗಳನ್ನು ನೋಡಿ ಹಿಂತಿರುಗುತ್ತಿದ್ದರು.

ಆದರೆ ದಶಕದಿಂದೀಚೆಗೆ ಕೊಡಗು ಪ್ರವಾಸಿಗರನ್ನು ಸೆಳೆಯಲು ಆರಂಭಿಸಿದ ಬಳಿಕ ಮತ್ತು ಪ್ರವಾಸಿಗರ ಅನುಕೂಲಕ್ಕೆಂದೇ ಹೋಂಸ್ಟೇಗಳು ಅಸ್ಥಿತ್ವ ಕಂಡುಕೊಂಡ ಕಾರಣದಿಂದಾಗಿ ರಾಜ್ಯ ಹೊರರಾಜ್ಯಗಳಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕಾಡುಗಳ ನಡುವೆ ಜನ ವಿರಳ ತಾಣಗಳಲ್ಲಿಯೂ ಪ್ರವಾಸಿಗರು ಕಾಣಲು ಸಿಗುತ್ತಾರೆ. ಅಂತರ್ಜಾಲದ ಮೂಲಕ ಜಲಪಾತ ಸೇರಿದಂತೆ ಬೆಟ್ಟಗುಡ್ಡಗಳನ್ನು ಹುಡುಕಿಕೊಂಡು ಬರುವ ಪ್ರವಾಸಿಗರಿಗೆ ಮಾರ್ಗದರ್ಶನದ ಕೊರತೆಯಿಂದಾಗಿ ಹುಡುಗಾಟವಾಡಿ, ಸೆಲ್ಫಿ ತೆಗೆಯಲು ಹೋಗಿ ಅಥವಾ ನೀರಿನಲ್ಲಿ ಈಜಲು ಹೋಗಿ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ.

ಕೊಡಗಿನಲ್ಲಿ ಜಲಪಾತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇವುಗಳ ಪೈಕಿ ಕೆಲವೇ ಕೆಲವು ಮಾತ್ರ ಪಟ್ಟಣಗಳಿಗೆ ಹತ್ತಿರದಲ್ಲಿವೆ. ಉಳಿದಂತೆ ಹೆಚ್ಚಿನವು ಜನವಿರಳ ಪ್ರದೇಶಗಳಲ್ಲಿವೆ. ಇಲ್ಲಿಗೆ ಪ್ರವಾಸಿಗರಷ್ಟೆ ಬರಬೇಕೇ ವಿನಃ ಸ್ಥಳೀಯರು ಇದರತ್ತ ಸುಳಿಯುವುದು ಅಪರೂಪ. ಜತೆಗೆ ಈ ಜಲಪಾತಗಳು ಸುಂದರವಾಗಿದ್ದರೂ ಅದರ ಒಡಲೊಳಗೆ ಮೃತ್ಯುಕೂಪವೇ ಇದೆ ಎಂಬುದು ಸ್ಥಳೀಯರನ್ನು ಹೊರತು ಪಡಿಸಿ ದೂರದಿಂದ ಬರುವ ಪ್ರವಾಸಿಗರಿಗೆ ಗೊತ್ತೇ ಆಗುವುದಿಲ್ಲ.

ಈ ಬಗ್ಗೆ ಸ್ಥಳದಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಿದ್ದರೂ ಅದರ ಬಗ್ಗೆ ಗಮನಹರಿಸದೆ ನೀರಿನಲ್ಲಿ ಆಟವಾಡುವ ಉದ್ದೇಶದಿಂದ ನೀರಿಗಿಳಿಯುವ ಪ್ರವಾಸಿಗರು ಸುಳಿಗೆ ಸಿಲುಕಿ ಸಾವನ್ನಪ್ಪಿದರೆ, ಇನ್ನು ಕೆಲವರು ಜಲಪಾತದ ಪಕ್ಕ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಈ ವೇಳೆ ಕಡಿದಾದ ಜಾಗ ಮತ್ತು ಸದಾ ನೀರು ಬಿದ್ದು ಪಾಚಿಕಟ್ಟಿರುವ ಬಂಡೆಕಲ್ಲುಗಳ ಮೇಲೆ ಕಾಲಿಡುವ ಸಂದರ್ಭ ಹಿಡಿತ ಸಿಗದೆ ಜಾರಿ ಪ್ರಪಾತಕ್ಕೆ ಬಿದ್ದು ಭೋರ್ಗರೆದು ಧುಮುಕುವ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಾರೆ.

ಇಲ್ಲವೆ ಜಲಪಾತದೊಳಗಿರುವ ಬಂಡೆ ಕಲ್ಲುಗಳ ನಡುವಿನ ಕಂದಕಲ್ಲಿ ಸಿಲುಕಿಕೊಳ್ಳುತ್ತಾರೆ. ಹೀಗೆ ಸಿಕ್ಕಿಕೊಂಡವರ ಮೃತದೇಹವನ್ನು ಕಾರ್ಯಾಚರಣೆ ನಡೆಸಿ ಹೊರತೆಗೆಯುವುದು ಕೂಡ ಕಷ್ಟ ಸಾಧ್ಯವಾಗುತ್ತದೆ.

ಪ್ರವಾಸಿಗರೇ ಹುಷಾರು..!

ಪ್ರವಾಸಿಗರೇ ಹುಷಾರು..!

ಪ್ರವಾಸಿಗರು ದೂರದಿಂದ ಜಲಪಾತಗಳನ್ನು ನೋಡಲು ಬಂದು ಅದರ ಸೌಂದರ್ಯವನ್ನು ಕಣ್ತುಂಬಿಕೊಂಡು ಹೋಗುವುದು ಬಿಟ್ಟು ಶವವಾಗಿ ಹಿಂತಿರುಗುತ್ತಿರುವುದು ನಿಜಕ್ಕೂ ದುರಂತವೇ ಸರಿ. ಆದುದರಿಂದ ಜಲಪಾತಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರು ಸ್ಥಳೀಯರ ಮಾರ್ಗದರ್ಶನದಲ್ಲಿ ತೆರಳುವುದು, ಜತೆಗೆ ಇಲ್ಲಿ ಅಳವಡಿಸಲಾಗಿರುವ ಸೂಚನಾ ಫಲಕಗಳನ್ನು ಗಮನಿಸಿ ಅದರಂತೆ ನಡೆದುಕೊಳ್ಳುವುದು ಒಳ್ಳೆಯದು. ಕಳೆದ ಎರಡು ದಶಕಗಳ ಹಿಂದೆ ಮಡಿಕೇರಿ ಬಳಿಯಿರುವ ಅಬ್ಬಿ ಜಲಪಾತ ನೋಡಲು ಬರುವ ಪ್ರವಾಸಿಗರು ಅಲ್ಲಿ ತಲೆಕೊಟ್ಟು ಸ್ನಾನ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಮೇಲಿಂದ ಮೇಲೆ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾದಾಗ ಜಿಲ್ಲಾಡಳಿತ ಪೊಲೀಸರನ್ನು ನಿಯೋಜಿಸುವ ಮೂಲಕ ಮತ್ತು ನೀರಿಗೆ ಇಳಿಯದಂತೆ ನಿರ್ಬಂಧ ವಿಧಿಸಿತು. ಇದರಿಂದಾಗಿ ಇಲ್ಲಿ ಪ್ರಾಣಪಾಯ ಸಂಭವಿಸುವುದು ನಿಂತಿದೆ.

ಅಪಾಯದ ಬಗ್ಗೆ ಎಚ್ಚರಿಕೆಯಿರಲಿ

ಅಪಾಯದ ಬಗ್ಗೆ ಎಚ್ಚರಿಕೆಯಿರಲಿ

ಇನ್ನು ಇತ್ತೀಚೆಗಿನ ವರ್ಷಗಳಲ್ಲಿ ನಾಪೋಕ್ಲು ಬಳಿಯ ಚೆಯ್ಯಂಡಾಣೆಯ ಚೇಲಾವರ ಮತ್ತು ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಆಕಸ್ಮಿಕವಾಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಚೇಲಾವರ ಜಲಪಾತ ಧುಮುಕುವ ಜಾಗ ವಿಶಾಲವಾಗಿದ್ದು, ಮೇಲ್ನೋಟಕ್ಕೆ ಆಳವಿಲ್ಲವೇನೋ ಎಂಬಂತೆ ಕಾಣುತ್ತದೆ. ಹೀಗಾಗಿ ಇಲ್ಲಿ ಈಜುವ ಸಲುವಾಗಿ ಪ್ರವಾಸಿಗರು ಇಳಿಯುತ್ತಾರೆ. ಆದರೆ ಬಂಡೆಕಲ್ಲುಗಳ ನಡುವೆ ಕಂದಕಗಳಿದ್ದು ಇದರೊಳಗೆ ಸಿಲುಕಿ ಮೇಲೆ ಬರಲಾಗದೆ ಸಾವನ್ನಪ್ಪುತ್ತಾರೆ. ಮಲ್ಲಳ್ಳಿ ಜಲಪಾತದಲ್ಲಿ ಈಜಲು ಅವಕಾಶವಿಲ್ಲ. ಈ ಜಲಪಾತದ ಸೌಂದರ್ಯವನ್ನು ದೂರದಿಂದ ನೋಡಿ ಹಿಂತಿರುಗಬಹುದು. ಆದರೆ ಕೆಲವರು ಕೆಳಗಿಳಿದು ಅದರ ಸಮೀಪ ಹೋಗುತ್ತಾರೆ. ಈ ಜಾಗ ಕಡಿದಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಪ್ರಪಾತ ಸೇರುವುದು ಖಚಿತ. ಅದು ಗೊತ್ತಿದ್ದರೂ ಕೆಳಗಿಳಿದು ನೀರು ಧುಮುಕುವ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಈ ವೇಳೆ ಕಾಲು ಜಾರಿ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ.

ಹುಚ್ಚು ಸಾಹಸಕ್ಕೆ ಕೈಹಾಕಬೇಡಿ!

ಹುಚ್ಚು ಸಾಹಸಕ್ಕೆ ಕೈಹಾಕಬೇಡಿ!

ಚೇಲಾವರ ಮತ್ತು ಮಲ್ಲಳ್ಳಿ ಜಲಪಾತಗಳೆರಡು ಜನವಸತಿ ಪ್ರದೇಶದಿಂದ ದೂರವಿದ್ದು, ಪ್ರವಾಸಿಗರನ್ನು ಹೊರತು ಪಡಿಸಿ ಸ್ಥಳೀಯರು ಇತ್ತ ಸುಳಿಯುವುದು ಅಪರೂಪ. ತೋಟದ ಕೆಲಸಕ್ಕೋ ಇನ್ನಿತರ ಸಂದರ್ಭಗಳಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ಎಂಬಂತೆ ಕಾಣಲು ಸಿಗುತ್ತಾರೆಯಾದರೂ ಉಳಿದಂತೆ ಯಾರೂ ಇಲ್ಲಿ ಇರುವುದಿಲ್ಲ. ಚೇಲಾವರ ಜಲಪಾತದಲ್ಲಿ ಆಗಾಗ್ಗೆ ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣ ಹೆಚ್ಚಿದ್ದ ಕಾರಣ ಇಲ್ಲಿಯೂ ಕಾವಲಿಗೆ ಸಿಬ್ಬಂದಿಯನ್ನು ವ್ಯವಸ್ಥೆ ಮಾಡಲಾಗಿದೆ. ಆದರೆ ಮಲ್ಲಳ್ಳಿ ಜಲಪಾತ ಪುಷ್ಪಗಿರಿ ಶ್ರೇಣಿಯಂಚಿನಲ್ಲಿದ್ದು ಕಾನನದ ನಡುವೆಯಿದೆ. ಇಲ್ಲಿಗೆ ಎಲ್ಲ ದಿನಗಳಲ್ಲಿ ಪ್ರವಾಸಿಗರು ಬರುವುದಿಲ್ಲ. ಅಪರೂಪಕ್ಕೆ ಬರುತ್ತಾರೆ. ಹೀಗೆ ಬರುವವರು ದೂರದಿಂದಲೇ ನೋಡಿ ಹೋಗದೆ ತಳಭಾಗಕ್ಕೆ ಇಳಿಯುವ ಯತ್ನ ಮಾಡಿ ಪ್ರಾಣಕಳೆದುಕೊಳ್ಳುತ್ತಿದ್ದಾರೆ.

ಸಿಬ್ಬಂದಿ ನಿಯೋಜನೆ ಸುಲಭವಲ್ಲ!

ಸಿಬ್ಬಂದಿ ನಿಯೋಜನೆ ಸುಲಭವಲ್ಲ!

ಕಾನನದ ನಡುವೆ ಇರುವ ಇಲ್ಲಿ ಕಾವಲಿಗೆ ಸಿಬ್ಬಂದಿಯನ್ನು ನಿಯೋಜಿಸುವುದು ಸುಲಭದ ಕೆಲಸವಲ್ಲ. ಆದುದರಿಂದ ಅಲ್ಲಿಗೆ ತೆರಳುವ ಪ್ರವಾಸಿಗರೇ ಅದನ್ನು ಅರಿತು ಮುನ್ನಡೆಯಬೇಕು. ಇಲ್ಲದೆ ಹೋದರೆ ಅಪಾಯ ತಪ್ಪಿದಲ್ಲ. ಅಂದಾಜಿನ ಪ್ರಕಾರ ಅಬ್ಬಿ ಜಲಪಾತದಲ್ಲಿ ಸುಮಾರು 52, ಚೇಲಾವರದಲ್ಲಿ 12, ಮಲ್ಲಳ್ಳಿಯಲ್ಲಿ 10ಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಮುಂದೆಯಾದರೂ ಜನ ಇದನ್ನು ಅರಿತು ಮುನ್ನಡೆಯುವ ಮೂಲಕ ಮೃತ್ಯುಕೂಪ ಜಲಪಾತಗಳೆಂಬ ಹೆಸರನ್ನು ತೊಡೆದು ಹಾಕಲಿ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+