ಸಮಾಜವಾದಿ ಪಕ್ಷದ 'ಸೈಕಲ್' ಪಂಕ್ಚರ್ ಮಾಡಿ 'ಬೈ ಬೈ' ಎಂದ ಮಾಯಾವತಿ
ಲಕ್ನೋ, ಜೂನ್ 4: ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ನಿರೀಕ್ಷಿತ ಯಶಸ್ಸು ಪಡೆಯುವಲ್ಲಿ ವಿಫಲವಾದ ಬಹುಜನ ಸಮಾಜಪಕ್ಷದ ನಾಯಕಿ ಮಾಯಾವತಿ ಎಸ್ಪಿಯೊಂದಿಗಿನ ಮೈತ್ರಿಗೆ ಬೈ ಬೈ ಹೇಳಿದ್ದಾರೆ.
ಆದರೆ, ಈ ಮೈತ್ರಿ ಕಡಿತ ಶಾಶ್ವತವಲ್ಲ ಎಂದೂ ಸಮಜಾಯಿಷಿ ನೀಡಿದ್ದಾರೆ. ಸದ್ಯಕ್ಕೆ ಉತ್ತರ ಪ್ರದೇಶದಲ್ಲಿ ಮುಂದೆ ನಡೆಯಲಿರುವ 11 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮಾಯಾವತಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆದರೆ, ಹಾಗೆಂದು ಈ ಬೇರ್ಪಡುವಿಕೆ ಶಾಶ್ವತವೇನಲ್ಲ ಎನ್ನುವ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಒಂದಾದರೂ ಆಗಬಹುದು ಎಂಬ ಸುಳಿವು ನೀಡಿದ್ದಾರೆ.
'ಇದು ಶಾಶ್ವತ ಬೇರ್ಪಡುವಿಕೆ ಅಲ್ಲ. ಸಮಾಜವಾದಿ ಪಕ್ಷದ ಮುಖ್ಯಸ್ಥರು ಭವಿಷ್ಯದಲ್ಲಿ ತಮ್ಮ ರಾಜಕೀಯ ಕಾರ್ಯದಲ್ಲಿ ಯಶಸ್ವಿಯಾಗುತ್ತಾರೆ ಎಂದು ನಮಗೆ ಅನಿಸಿದರೆ ನಾವು ಮತ್ತೆ ಜತೆಯಾಗಿ ಕೆಲಸ ಮಾಡುತ್ತೇವೆ. ಆದರೆ, ಅವರು ಯಶಸ್ವಿಯಾಗದೆ ಇದ್ದರೆ, ನಾವು ಪ್ರತ್ಯೇಕವಾಗಿಯೇ ಕೆಲಸ ಮಾಡುವುದು ನಮಗೆ ಒಳಿತು. ಹೀಗಾಗಿ ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಾವು ನಿರ್ಧರಿಸಿದ್ದೇವೆ' ಎಂದು ಮಾಯಾವತಿ ತಿಳಿಸಿದ್ದಾರೆ.
ಮತಗಳನ್ನು ಸೆಳೆದುಕೊಳ್ಳಲು ಮೈತ್ರಿ ಪಕ್ಷಗಳನ್ನು ಅವಲಂಬಿಸಬೇಡಿ ಮತ್ತು ಪಕ್ಷದ ಸಂಘಟನೆಯನ್ನು ಸುಧಾರಿಸುವತ್ತ ಕೆಲಸ ಮಾಡಿ ಎಂದು ತಮ್ಮ ಶಾಸಕರು ಹಾಗೂ ನೂತನವಾಗಿ ಆಯ್ಕೆಯಾದ ಸಂಸದರಿಗೆ ಮಾಯಾವತಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕೆಲವು ಮೂಲಗಳ ಪ್ರಕಾರ ಮಾಯಾವತಿ ಇಲ್ಲಿ ನಾಜೂಕಿನ ನಡೆ ಅನುಸರಿಸುತ್ತಿದ್ದಾರೆ. ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಅವರು ಎಸ್ಪಿಗೆ ಸಂಪೂರ್ಣವಾಗಿ ಕೈಕೊಡಲಿದ್ದಾರೆ ಎನ್ನಲಾಗಿದೆ.

ಯಾದವರೇ ಮತ ಹಾಕಲಿಲ್ಲ
'ನಾವು ರಾಜಕೀಯ ನಿರ್ಬಂಧಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಉತ್ತರ ಪ್ರದೇಶದ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮೂಲ ಮತಗಳಾದ ಯಾದವ ಸಮುದಾಯದವರು ಪಕ್ಷವನ್ನು ಬೆಂಬಲಿಸಲಿಲ್ಲ. ಸಮಾಜವಾದಿ ಪಕ್ಷದ ಅತ್ಯಂತ ಪ್ರಬಲ ಮುಖಂಡರೂ ಸೋಲು ಅನುಭವಿಸಿದ್ದಾರೆ' ಎಂದು ಹೇಳಿದ್ದಾರೆ.

ಎಂದೆಂದಿಗೂ ಸಂಬಂಧ ಮುಂದುವರಿಯಲಿದೆ
'ಎಸ್ಪಿ-ಬಿಎಸ್ಪಿ ಮೈತ್ರಿ ನಡೆದಾಗಿನಿಂದ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ನನಗೆ ತುಂಬಾ ಗೌರವ ನೀಡಿದ್ದಾರೆ. ದೇಶದ ಹಿತಾಸಕ್ತಿಗಾಗಿ ನಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ನಾನು ಕೂಡ ಮರೆತಿದ್ದೇನೆ. ಅವರಿಗೆ ಗೌರವ ನೀಡುತ್ತೇನೆ. ನಮ್ಮ ಸಂಬಂಧ ರಾಜಕೀಯಕ್ಕಷ್ಟೇ ಅಲ್ಲ, ಅದು ಎಂದೆಂದಿಗೂ ಮುಂದುವರಿಯಲಿದೆ' ಎಂದಿದ್ದಾರೆ.

ಸಂಸದರ ಆಯ್ಕೆಯಿಂದ ಕ್ಷೇತ್ರಗಳು ಖಾಲಿ
ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಹಾಲಿ ಶಾಸಕರ ರಾಜೀನಾಮೆಯಿಂದಾಗಿ ಉತ್ತರ ಪ್ರದೇಶದಲ್ಲಿ 11 ವಿಧಾನಸಭಾ ಕ್ಷೇತ್ರಗಳು ಖಾಲಿಯಾಗಿವೆ. ಬಿಜೆಪಿಯ 9 ಮತ್ತು ಬಿಎಸ್ಪಿ ಹಾಗೂ ಎಸ್ಪಿಯ ತಲಾ ಒಬ್ಬ ಶಾಸಕರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ.

ಹೆಂಡತಿಯನ್ನೇ ಗೆಲ್ಲಿಸಲಾಗಿರಲಿಲ್ಲ
ಸುದ್ದಿಗೋಷ್ಠಿಗೂ ಮುನ್ನ ಮಾತನಾಡಿದ್ದ ಮಾಯಾವತಿ, "ತಮ್ಮ ಪತ್ನಿ ಡಿಂಪಲ್ ಯಾದವ್ ಅವರನ್ನೇ ಗೆಲ್ಲಿಸಲಾಗದ ಅಖಿಲೇಶ್ ಯಾದವ್ ಇನ್ನೇನು ಮಾಡುವುದಕ್ಕೆ ಸಾಧ್ಯ? ಬಿಎಸ್ಪಿ ಮತಗಳು ಡಿಂಪಲ್ ಅವರಿಗೆ ವರ್ಗಾವಣೆಯಾಗಿವೆ. ಆದರೆ ಯಾದವರ ಮತಗಳೇ ಬಿದ್ದಿಲ್ಲ" ಎಂದು ಆರೋಪಿಸಿದ್ದರು.

ನೆಂಟರಿಷ್ಟರ ಸೋಲು
ಲೋಕಸಭೆ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್, ಕನೌಜ್ ಕ್ಷೇತ್ರದಿಂದ 12,000 ಮತಗಳಿಂದ ಸೋಲು ಅನುಭವಿಸಿದ್ದರು. ಅವರ ಇಬ್ಬರು ಸಂಬಂಧಿಕರಾದ ಅಕ್ಷಯ್ ಯಾದವ್ ಮತ್ತು ಧರ್ಮೇಂದ್ರ ಯಾದವ್ ಫಿರೋಜಾಬಾದ್ ಹಾಗೂ ಬದೂನ್ ಕ್ಷೇತ್ರಗಳಿಂದ ಸ್ಪರ್ಧಿಸಿ ಮುಖಭಂಗ ಅನುಭವಿಸಿದ್ದರು.












Click it and Unblock the Notifications