Get Updates
Get notified of breaking news, exclusive insights, and must-see stories!

ಹಣ ಕಟ್ಟಿದರಷ್ಟೇ ಚಿಕಿತ್ಸೆ: ವೈದ್ಯರ ಧನದಾಹಕ್ಕೆ ಹೋಯ್ತಾ ಮಗುವಿನ ಪ್ರಾಣ!?

ಲಕ್ನೋ, ಸಪ್ಟೆಂಬರ್ 13: ಉತ್ತರ ಪ್ರದೇಶದ ಫಿರೋಜಾಬಾದ್ ಆಸ್ಪತ್ರೆಗೆ ಡೆಂಗ್ಯೂ ಜ್ವರದಿಂದ ದಾಖಲಾದ 5 ವರ್ಷದ ಬಾಲಕಿಯು ತನ್ನ ಪೋಷಕರ ಎದುರಿನಲ್ಲೇ ಪ್ರಾಣ ಬಿಟ್ಟಿರುವ ಘಟನೆಯು ವರದಿಯಾಗಿದೆ. ಫಿರೋಜಾಬಾದ್ ಆಸ್ಪತ್ರೆಯಲ್ಲಿ ಡೆಂಗ್ಯೂ ಪ್ರಕರಣಗಳ ಬಗ್ಗೆ ವರದಿಗೆ ತೆರಳಿದ ಎನ್ ಡಿ ಟಿವಿ ವರದಿಗಾರನ ಎದುರಿನಲ್ಲೇ ಇಂಥ ಮನಕಲಕುವ ಘಟನೆ ನಡೆದಿದೆ ಎಂದು ಗೊತ್ತಾಗಿದೆ.

ಬೆಳಗ್ಗೆ 8 ಗಂಟೆ ವೇಳೆಗೆ ಸಾವಾನ್ಯ ಗುಪ್ತಾ ಎಂಬ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹಿತ ಮಧ್ಯಾಹ್ನದ ವೇಳೆಗೆ ಮಗುವನ್ನು ದಾಖಲಿಸಿಕೊಳ್ಳಲಾಗಿತ್ತು. "ನನ್ನ ಸಹೋದರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ದರೆ ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿರುತ್ತಿದ್ದಳು. ಆಕೆಯ ಆರೋಗ್ಯ ಸ್ಥಿತಿಯ ಬಗ್ಗೆ ನಾವು ವೈದ್ಯರಿಗೆ ವಿವರಿಸಿದೆವು ಆದರೆ ಆಸ್ಪತ್ರೆ ಸಿಬ್ಬಂದಿ ಲಕ್ಷ್ಯ ವಹಿಸಲಿಲ್ಲ," ಎಂದು ಮೃತ ಬಾಲಕಿಯ ಸಹೋದರ ಹೇಳಿದ್ದಾರೆ.

ತೀವ್ರ ಜ್ವರದಿಂದ ಬಳಲುತ್ತಿದ್ದ 5 ವರ್ಷದ ಬಾಲಕಿಯನ್ನು ತಕ್ಷಣ ದಾಖಲಿಸಿಕೊಂಡು ಚಿಕಿತ್ಸೆ ನೀಡುವುದಕ್ಕೆ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದರು ಎಂದು ಮೃತ ಬಾಲಕಿಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ವೈದ್ಯರು ಬಾಲಕಿ ಜೀವ ಉಳಿಸುವ ನಿಟ್ಟಿನಲ್ಲಿ ಯಾವುದೇ ರೀತಿ ಪ್ರಯತ್ನ ಮಾಡಲಿಲ್ಲ, ಅವರಿಗೆ ಹಣವೊಂದೇ ಮುಖ್ಯವಾಗಿತ್ತು ಎಂದು ಮತ್ತೊಬ್ಬ ಸಂಬಂಧಿಕರು ದೂಷಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ವೈರಲ್ ಜ್ವರ ಮತ್ತು ಡೆಂಗ್ಯೂ ಜ್ವರದಿಂದ ನಿತ್ಯ ಮಕ್ಕಳು ಸೇರಿದಂತೆ ನೂರಾರು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕೊವಿಡ್-19 ಭೀತಿ ನಡುವೆ ವೈರಲ್ ಜ್ವರ ಹಾಗೂ ಡೆಂಗ್ಯೂ ಜ್ವರ ಸೃಷ್ಟಿಸಿರುವ ಆತಂಕದ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಜ್ವರ

ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಜ್ವರ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಉತ್ತರ ಪ್ರದೇಶದಲ್ಲಿ ವೈರಲ್ ಫಿವರ್ ಮತ್ತು ಡೆಂಗ್ಯೂ ಜ್ವರದ ಭೀತಿ ಹೆಚ್ಚಾಗಿದೆ. ಫಿರೋಜಾಬಾದ್ ಜಿಲ್ಲೆಯೊಂದರಲ್ಲೇ ಈವರೆಗೂ 12,000ಕ್ಕೂ ಹೆಚ್ಚು ಮಂದಿಗೆ ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ ಮತ್ತೆ ನಾಲ್ವರು ತೀವ್ರ ಜ್ವರದಿಂದಲೇ ಪ್ರಾಣ ಬಿಟ್ಟಿದ್ದು, 88 ಮಕ್ಕಳು ಸೇರಿದಂತೆ ಈವರೆಗೂ 114 ಜನರು ಮಹಾಮಾರಿಯಿಂದ ಮೃತಪಟ್ಟಿದ್ದಾರೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಫಿರೋಜಾಬಾದ್ ಜಿಲ್ಲೆಯಲ್ಲಿ 578 ಡೆಂಗ್ಯೂ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಕೆಲವು ಮಲೇರಿಯಾ ಮತ್ತು ಇತರೆ ಬ್ಯಾಕ್ಟಿರಿಯಾ ಸಂಬಂಧಿತ ಕಾಲೋಚಿತ ಜ್ವರದ ಪ್ರಕರಣಗಳು ವರದಿಯಾಗಿವೆ. ಮಕ್ಕಳಲ್ಲಿ ಅತಿಸಾರ ಸಮಸ್ಯೆ ಮತ್ತು ತೀವ್ರ ಜ್ವರದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿವೆ.

ಫಿರೋಜಾಬಾದ್ ಜಿಲ್ಲೆಯಲ್ಲಿ ಮನೆಮನೆ ಸಮೀಕ್ಷೆ

ಫಿರೋಜಾಬಾದ್ ಜಿಲ್ಲೆಯಲ್ಲಿ ಮನೆಮನೆ ಸಮೀಕ್ಷೆ

ಕಳೆದ ವಾರ ಫಿರೋಜಾಬಾದ್ ಜಿಲ್ಲೆಗೆ ಭೇಟಿ ನೀಡಿದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಅಧಿಕಾರಿಗಳು ಡೆಂಗ್ಯೂ ಜ್ವರದ ಹರಡುವಿಕೆ ಬಗ್ಗೆ ಗುರುತಿಸಿದ್ದರು. ಜಿಲ್ಲೆಯಲ್ಲಿ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮನೆ ಮನೆ ಸಮೀಕ್ಷೆ ನಡೆಸಲು ಸೂಚನೆ ನೀಡಿದ್ದರು. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಗಳಿಗೆ ಹಾಸಿಗೆ ಕೊರತೆ ಸೃಷ್ಟಿಯಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚವನ್ನು ಹೆಚ್ಚಿಸಲಾಗುತ್ತಿದೆ.

"ಜಿಲ್ಲೆಯಲ್ಲಿ ರೋಗಿಗಳನ್ನು ಪತ್ತೆ ಮಾಡುವುದಕ್ಕೆ ಹಾಗೂ ಅಗತ್ಯ ಚಿಕಿತ್ಸೆ ನೀಡುವುದಕ್ಕಾಗಿ 100ಕ್ಕೂ ಹೆಚ್ಚು ವೈದ್ಯಕೀಯ ತಂಡಗಳು ಜಿಲ್ಲೆಯಲ್ಲಿ ಮನೆ ಮನೆ ಸಮೀಕ್ಷೆ ನಡೆಸುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳಲ್ಲಿ ಯಾವುದೇ ರೀತಿ ಕೊರತೆಗಳಿಲ್ಲ. ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕಾಗಿ ಹೆಚ್ಚುವರಿ ಆಂಬಹುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಕೊಳಚೆ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಗರಸಭೆ ಮತ್ತು ಪುರಸಭೆ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ವರದಿಯಾದ ಪ್ರತಿಯೊಂದು ಸಾವಿನ ಪ್ರಕರಣಗಳ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ," ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಎ ಕೆ ಸಿಂಗ್ ಹೇಳಿದ್ದಾರೆ.

ಹಣ ಕಟ್ಟದಿದ್ದರೆ ಚಿಕಿತ್ಸೆ ನೀಡುವುದಿಲ್ಲ ಎಂದ ವೈದ್ಯರು

ಹಣ ಕಟ್ಟದಿದ್ದರೆ ಚಿಕಿತ್ಸೆ ನೀಡುವುದಿಲ್ಲ ಎಂದ ವೈದ್ಯರು

ತನ್ನ 5 ವರ್ಷದ ಮಗುವನ್ನು ಕಳೆದುಕೊಂಡ ಭೀಮಾ ನಗರದ ನಿವಾಸಿ ವೀರ್ ಪಾಲ್ ಆಸ್ಪತ್ರೆಗಳಲ್ಲಿನ ದುಸ್ಥಿತಿ ಬಗ್ಗೆ ವಿವರಿಸಿದ್ದಾರೆ. "ಖಾಸಗಿ ಆಸ್ಪತ್ರೆಯಲ್ಲಿ ತನ್ನ ಮಗನಿಗೆ ಚಿಕಿತ್ಸೆ ನೀಡಲು ಆರಂಭಿಸುವುದಕ್ಕೆ ವೈದ್ಯರು 30,000 ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ.

"ನೀವು ಚಿಕಿತ್ಸೆಯನ್ನು ನೀಡಿ, ಹಣ ಹೊಂದಿಸುವುದಕ್ಕೆ ಸ್ವಲ್ಪ ಸಮಯಾವಕಾಶ ನೀಡುವಂತೆ ವೈದ್ಯರನ್ನು ನಾನು ಪರಿಪರಿಯಾಗಿ ಬೇಡಿಕೊಂಡೆನು. ಆದರೆ ಅವರು ಅದಕ್ಕೆ ನಿರಾಕರಿಸಿದರು. ಆನಂತರ ನಾನು ನನ್ನ ಮಗನನ್ನು ಫಿರೋಜಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋದೆನು. ಆದರೆ ಅಲ್ಲಿಯೂ ಚಿಕಿತ್ಸೆ ನೀಡುವುದಕ್ಕೆ ಸರಿಯಾದ ಬೆಡ್ ವ್ಯವಸ್ಥೆ ಸಿಗಲಿಲ್ಲ. ಆಗ್ರಾಗೆ ಕರೆದುಕೊಂಡು ಹೋಗುವುದಕ್ಕಾಗಿ ಖಾಸಗಿ ಟ್ಯಾಕ್ಸಿಯನ್ನು ಮಾಡಿಕೊಂಡು ಹೊರಟೆನು, ಆಗ ಮಾರ್ಗಮಧ್ಯದಲ್ಲೇ ನನ್ನ ಮಗ ಪ್ರಾಣ ಬಿಟ್ಟನು," ಎಂದು ನೊಂದ ತಂದೆ ವೀರ್ ಪಾಲ್ ತಮ್ಮ ನೋವು ತೋಡಿಕೊಂಡಿದ್ದಾರೆ.

ಜಿಲ್ಲಾಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ನೀಡಿದ ಸ್ಪಷ್ಟನೆ

ಜಿಲ್ಲಾಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ನೀಡಿದ ಸ್ಪಷ್ಟನೆ

ಫಿರೋಜಾಬಾದ್ ಜಿಲ್ಲಾ ಆಸ್ಪತ್ರೆಯಲ್ಲಿ ಬೆಡ್ ಕೊರತೆಯ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. "ನಿರಂತರವಾಗಿ ಹೆಚ್ಚುತ್ತಿರುವ ರೋಗಿಗಳ ಅನುಕೂಲಕ್ಕಾಗಿ ಪ್ರತಿನಿತ್ಯ ಹೆಚ್ಚುವರಿ ಬೆಡ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ," ಎಂದು ಫಿರೋಜಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮುಖ್ಯಾಧಿಕಾರಿ ಡಾ.ಹಂಸರಾಜ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲೆಯಲ್ಲಿ ತೀವ್ರ ಜ್ವರದಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ 64 ಸಕ್ರಿಯ ಶಿಬಿರಗಳನ್ನು ಹಾಕಲಾಗಿದ್ದು, 4,800ಕ್ಕೂ ಹೆಚ್ಚು ರೋಗಿಗಳು ಅಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಸಿಎಂಓ ದಿನೇಶ್ ಕುಮಾರ್ ಪ್ರೇಮಿ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+