ಹತ್ರಾಸ್ನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ
ಲಕ್ನೋ ಫೆಬ್ರವರಿ 21: ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಯಾದವ್ ಅವರನ್ನು ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಭಾನುವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಅವರ ಕೊಠಡಿಯಿಂದ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ಹತ್ರಾಸ್ನ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್, ಕೃಷ್ಣ ಯಾದವ್ ಎಂಬ ವ್ಯಕ್ತಿಗೆ ಗುಂಡು ಹಾರಿಸಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಸ್ಥಳವನ್ನು ತಲುಪಿದ ನಂತರ, ನಾವು ಅವರ ಕೋಣೆಯಲ್ಲಿ ರಕ್ತದ ಕಲೆಗಳನ್ನು ಕಂಡುಕೊಂಡಿದ್ದೇವೆ ಮತ್ತು ಪಿಸ್ತೂಲ್ ಮತ್ತು ಖಾಲಿ ಕಾರ್ಟ್ರಿಡ್ಜ್ ಅನ್ನು ವಶಪಡಿಸಿಕೊಂಡಿದ್ದೇವೆ.
"ಅವರನ್ನು ತಕ್ಷಣ ಅಲಿಘರ್ನಲ್ಲಿರುವ ತುರ್ತು ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸತ್ತಿದ್ದಾರೆ ಎಂದು ಘೋಷಿಸಿದರು. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಅವರು ಹೇಳಿದರು. ಇನ್ನೂ ಇತ್ತೀಚೆಗೆ ಹತ್ರಾಸ್ ನಲ್ಲಿ ಹಲವಾರು ಬೆಳವಣಿಗೆಗಳು ಕಂಡುಬಂದಿವೆ. ನಿನ್ನೆಯಷ್ಟೇ ಉತ್ತರಪ್ರದೇಶ ವಿಧಾನಸಭಾ ಕ್ಷೇತ್ರವಾದ ಹತ್ರಾಸ್ನಲ್ಲಿ ಚುನಾವಣೆ ನಡೆದಿದೆ.

ಉತ್ತರಪ್ರದೇಶದ ಏಳು ಹಂತದ ವಿಧಾನಸಭಾ ಚುನಾವಣೆಯಲ್ಲಿ ಮೂರು ಹಂತದ ಮತದಾನ ಪೂರ್ಣಗೊಂಡಿದ್ದು ಇನ್ನೂ ನಾಲ್ಕು ಹಂತದದ ಮತದಾನ ಬಾಕಿ ಉಳಿದಿದೆ. ಮೂರನೇ ಹಂತದ ಮತದಾನ ಇದೇ ಭಾನುವಾರ (ಫೆಬ್ರವರಿ 20) ನಡೆದಿದೆ. ಮೂರನೇ ಹಂತದ ಚುನಾವಣೆಗೆ ಬಿಜೆಪಿ ವಿರುದ್ಧ ದಾಳಿ ಮಾಡಲು ಹತ್ರಾಸ್ ಪ್ರಕರಣ ಮುನ್ನಲೆಗೆ ಬಂದಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಸಮಾಜವಾದಿ ಪಕ್ಷ (ಎಸ್ಪಿ) ನಡುವಿನ ನಿರಂತರ ವಾಗ್ವಾದದ ನಡುವೆ, ಹತ್ರಾಸ್ ಘಟನೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೂರನೇ ಹಂತದಲ್ಲಿ ಕೇಸರಿ ಪಕ್ಷಕ್ಕೆ ಮತ್ತೆ ಕಾಡಲು ಶುರುಮಾಡಿದೆ. ಸೆಪ್ಟೆಂಬರ್ 2020 ರಲ್ಲಿ ಹತ್ರಾಸ್ನಲ್ಲಿ 19 ವರ್ಷದ ದಲಿತ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ರಾಜಕೀಯ ಅಸ್ತ್ರವನ್ನಾಗಿ ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ.
ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ವಾಗ್ದಾಳಿ ಮಾಡುತ್ತಲೇ ಇದ್ದಾರೆ. ಹತ್ರಾಸ್ ಪ್ರಕರಣವನ್ನು ಪ್ರಸ್ತಾಪಿಸಿ ಯೋಗಿ ಆದಿತ್ಯನಾಥ್ ಆಡಳಿತ ವ್ಯವಸ್ಥೆಯ ವಿರುದ್ಧ ಅವರು ವಾಗ್ದಾಳಿ ಮಾಡಿದ್ದಾರೆ.
ಮೂರನೇ ಹಂತದ ಚುನಾವಣೆಗೂ ಮುನ್ನ ಹತ್ರಾಸ್ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಯಾದವ್, "ದುರದೃಷ್ಟಕರ ಹುಡುಗಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗಲಿಲ್ಲ ಮತ್ತು ಅವಳು ಸತ್ತಾಗ, ಆಕೆಯ ಕುಟುಂಬ ಸದಸ್ಯರು ಅವಳನ್ನು ಶವಸಂಸ್ಕಾರ ಮಾಡಲು ಅವಕಾಶ ನೀಡಲಿಲ್ಲ. ಅವರಿಗೆ ಅವಮಾನಿಸಿದರು. ಮಹಿಳೆಯ ಶವವನ್ನು ರಾತ್ರಿಯಲ್ಲಿ ಪೊಲೀಸರು ಬಲವಂತವಾಗಿ ಸುಟ್ಟುಹಾಕಿದರು. ಕುಟುಂಬದ ಆಶಯಗಳಿಗೂ ಕಡಿವಾಣ ಹಾಕಲಾಯಿತು" ಎಂದು ಯೋಗಿ ಆಡಳಿತದ ವಿರುದ್ಧ ಅಖಿಲೇಶ್ ಕಿಡಿ ಕಾರಿದ್ದರು.
ಫೆಬ್ರವರಿ 20 ರಂದು ಉತ್ತರ ಪ್ರದೇಶದ ಯಾದವರ ನಾಡಿನ 59 ಕ್ಷೇತ್ರಗಳಲ್ಲಿ ಮೂರನೇ ಸುತ್ತಿನ ಮತದಾನದಲ್ಲಿ ಬಿಜೆಪಿ ಮತ್ತು ಎಸ್ಪಿ ನಡುವೆ ಕಠಿಣ ಹೋರಾಟ ನಡೆದಿದೆ. ಮೊದಲ ಎರಡು ಸುತ್ತುಗಳಿಗಿಂತಲೂ ಇದು ಬಿಜೆಪಿಗೆ ಕಷ್ಟಕರವಾಗಿದೆ ಎನ್ನಲಾಗುತ್ತಿದೆ. ಈ ಪ್ರದೇಶದಲ್ಲಿ ಗಣನೀಯ ಯಾದವ ಸಮುದಾಯದ ಬೆಂಬಲವನ್ನು ಹೊಂದಿರುವ ಎಸ್ಪಿ, ಯಾದವೇತರ ಒಬಿಸಿಗಳ ನಡುವೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಯತ್ನಗಳನ್ನು ಮಾಡುತ್ತಿದೆ.
ಮೂರನೇ ಹಂತದ 16 ಜಿಲ್ಲೆಗಳ ಪೈಕಿ ಒಂಬತ್ತರಲ್ಲಿ ಯಾದವ ಸಮುದಾಯ ಚೆನ್ನಾಗಿ ಬೇರೂರಿದ್ದಾರೆ. ಹೀಗಾಗಿ ಬಿಜೆಪಿ ಹಾಗೂ ಎಸ್ಪಿ ನಡುವ ಇಲ್ಲಿ ತೀವ್ರ ಪೈಪೋಟಿ ನಡೆದಿದೆ. ಚುನಾವಣೆಯ ಬಳಿಕ ಈ ಕೊಲೆ ನಡೆದಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.












Click it and Unblock the Notifications