ಯುಪಿ+ಯೋಗಿ = ಉಪಯೋಗಿ: ಇದು ಮೋದಿ ಹೊಸ ವ್ಯಾಖ್ಯಾನ
ಲಕ್ನೋ, ಡಿಸೆಂಬರ್ 18: ಉತ್ತರ ಪ್ರದೇಶದಲ್ಲಿ ಅಕ್ರಮ ಕಾಮಗಾರಿಯಲ್ಲಿ ತೊಡಗಿರುವವರ ಪಾಲಿಗೆ ಹಾಗೂ ಅದನ್ನು ಬೆಂಬಲಿಸುತ್ತಿರುವವರ ಪಾಲಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಬುಲ್ಡೋಜರ್ ರೀತಿ ಆಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಾಖ್ಯಾನಿಸಿದ್ದಾರೆ.
ಲಕ್ನೋದಲ್ಲಿ 36,230 ಕೋಟಿ ಮೌಲ್ಯದ ಗಂಗಾ ಎಕ್ಸ್ ಪ್ರೆಸ್ ವೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮಾತನಾಡಿದರು. ಯುಪಿ + ಯೋಗಿ = ಉಪಯೋಗಿ ಎಂದು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಹೇಳಿದರು.
"ಈ ಮೊದಲು ಉತ್ತರ ಪ್ರದೇಶದಲ್ಲಿ ಜನರ ಹಣವನ್ನು ಹೇಗೆ ಮತ್ತು ಯಾವುದಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ನಿಮಗೆ ಗೊತ್ತಿದೆ. ನೀವು ಅದನ್ನು ನೋಡಿದ್ದೀರಿ. ಆದರೆ ಇಂದು ಜನರ ದುಡ್ಡು ಉತ್ತರ ಪ್ರದೇಶದ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಆಗುತ್ತಿದೆ. ಇದಕ್ಕೂ ಮೊದಲು ಯೋಜನೆಗಳು ಪತ್ರಿಕೆಗಳಲ್ಲಿ ಪ್ರಾರಂಭವಾಗುತ್ತಿದ್ದು, ಅವರ ಬೊಕ್ಕಸವನ್ನು ತುಂಬಿಸುತ್ತಿದ್ದವು. ಆದರೆ ಇಂದು ನಿಮ್ಮ ಹಣವು ಉಳಿತಾಯವಾಗಿದೆ, ಅಭಿವೃದ್ಧಿ ಕಾರ್ಯಗಳಿಗಾಗಿ ಬಳಕೆ ಆಗುತ್ತಿದೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಮ ಮಂದಿರ, ವಿಶ್ವನಾಥ ಧಾಮವೇ ಸಮಸ್ಯೆ
ಉತ್ತರ ಪ್ರದೇಶ ವಿದಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ವಿಪಕ್ಷ ನಾಯಕರು ನೀಡುವ ಹೇಳಿಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಿರುಗೇಟು ನೀಡಿದರು. "ದೇಶದ ಪರಂಪರೆ ಮತ್ತು ಪ್ರಗತಿ ವಿಷಯದಲ್ಲಿ ಕೆಲವು ರಾಜಕೀಯ ಪಕ್ಷಗಳು ಮತ್ತು ನಾಯಕರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರಗತಿ ಮತ್ತು ಪರಂಪರೆಯಿಂದ ಅವರ ವೋಟ್ ಬ್ಯಾಂಕಿಗೆ ತಲೆನೋವಾಗಿದೆ. ಸಮಸ್ಯೆ ಏನೆಂದರೆ ಅಂಥವರು ಸದಾ ಕಾಲ ಜನರು ಬಡವರಾಗಿಯೇ ಇರಬೇಕು ಹಾಗೂ ತಮ್ಮನ್ನೇ ಅವಲಂಬಿಸಿರಬೇಕು ಎಂದು ಎದುರು ನೋಡುತ್ತಿದ್ದಾರೆ. ಅಂಥ ಜನರಿಗೆ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ಅಭಿವೃದ್ಧಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಎಂದು ಪ್ರಧಾನಮಂತ್ರಿ ಮೋದಿ ದೂರಿದ್ದಾರೆ.

ಸಾಂಕ್ರಾಮಿಕ ಪಿಡುಗು ನಿರ್ವಹಣೆ ಬಗ್ಗೆ ಪ್ರಶ್ನೆ
ಭಾರತೀಯ ಸೇನಾ ಕಾರ್ಯಾಚರಣೆ, ಮೇಕ್ ಇನ್ ಇಂಡಿಯಾ ಹಾಗೂ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿರ್ವಹಣೆಯನ್ನು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಇದು ಸರ್ವಶ್ರೇಷ್ಠ ರಾಷ್ಟ್ರವಾಗಿದ್ದು, ಇಲ್ಲಿ ಸರ್ಕಾರಗಳು ಬರುತ್ತವೇ ಹಾಗೂ ಹೋಗುತ್ತವೆ. ದೇಶದ ಪ್ರಗತಿಯನ್ನು ನೋಡಿ ನಾವು ಸಂತಸಪಡಬೇಕು, ಆದರೆ ಆ ಜನರು ಈ ರೀತಿಯಲ್ಲಿ ಯೋಚನೆಯನ್ನೇ ಮಾಡುವುದಿಲ್ಲ," ಎಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರೋಧ ಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ.

ಐಟಿ, ಸಿಬಿಐ ಅಧಿಕಾರಿಗಳಿಗೆ ಹೆದರಿ "ಸೈಕಲ್" ನಿಲ್ಲುವುದಿಲ್ಲ
"ಈಗ ಆದಾಯ ತೆರಿಗೆ ಅಧಿಕಾರಿಗಳೇ ಬರಲಿ, ಜಾರಿ ನಿರ್ದೇಶನಾಲಯದ ಅಧಿಕಾರಿಗಳೇ ಬರಲಿ, ಕೇಂದ್ರ ತನಿಖಾ ತಂಡವೇ ಬರಲಿ ನಮ್ಮ ಸಮಾಜವಾದಿ ಪಕ್ಷದ ಸೈಕಲ್ ನಿಲ್ಲುವುದಿಲ್ಲ," ಎಂದಿರುವ ಅಖಿಲೇಶ್ ಯಾದವ್ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರಿ ವರ್ಗವನ್ನು ತನ್ನ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದರು.

ಹಲವು ಯೋಜನೆ ಜಾರಿಗೊಳಿಸಿರುವ ಬಗ್ಗೆ ಮೋದಿ ಪ್ರಸ್ತಾಪ
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿಕೆ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. "ಉತ್ತರ ಪ್ರದೇಶವು ಭವಿಷ್ಯದಲ್ಲಿ ಮುಂದಿನ ಪೀಳಿಗೆಗೆ ಉಪಯೋಗಕಾರಿ ಆಗುವಂತಹ ಮೂಲಭೂತ ಸೌಕರ್ಯಗಳಿಂದ ಗುರುತಿಸಿಕೊಳ್ಳಲಿದೆ. ಹೊಸ ವಿಮಾನ ನಿಲ್ದಾಣವನ್ನು ಸ್ಥಾಪಿಸಲಾಗಿದೆ, ಹೊಸ ರೈಲ್ವೆ ಮಾರ್ಗಗಳನ್ನು ನಿರ್ಮಿಸಲಾಗಿದೆ, ಈಗ ಷಟ್ಪಥದ ಗಂಗಾ ಎಕ್ಸ್ ಪ್ರೆಸ್ ಹೆದ್ದಾರಿಯನ್ನು ಅಷ್ಟಪಥವನ್ನಾಗಿ ಪರಿವರ್ತಿಸಲು 36,230 ಕೋಟಿ ರೂಪಾಯಿ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ," ಎಂದು ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ಹಿಂದೆ ಬಿಜೆಪಿ ದಾಖಲೆ ಗೆಲುವು
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications