ಯುಪಿ ಬಿಜೆಪಿ ಪಕ್ಷದ ಶುದ್ಧೀಕರಣ ವಿಚಾರ: ಸದ್ಯಕ್ಕೆ ಉದಾರತೆ ತೋರಿದ ಬಿಜೆಪಿ
ಲಕ್ನೋ ಜನವರಿ 18: ಉತ್ತರ ಪ್ರದೇಶ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿ ಉಳಿದಿರುವಂತೆಯೇ ಆಡಳಿತಾರೂಢ ಬಿಜೆಪಿ ತನ್ನ ಸೀಟು ಹಂಚಿಕೆ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡುವುದರಲ್ಲಿ ನಿರತವಾಗಿದೆ. ತನ್ನ ಮಿತ್ರಪಕ್ಷಗಳು ಹಾಗೂ ಹಾಲಿ ಶಾಸಕರೊಂದಿಗೆ ಈ ಹಿಂದೆ ಯೋಜಿಸಿದ್ದಕ್ಕಿಂತ ಹೆಚ್ಚು ಉದಾರವಾಗಿ ವರ್ತಿಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈವರೆಗೆ ಬಿಜೆಪಿ 403 ಸ್ಥಾನಗಳ ವಿಧಾನಸಭೆಗೆ 107 ಅಭ್ಯರ್ಥಿಗಳನ್ನು ಘೋಷಿಸಿದ್ದರೆ, ಇತರರ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಉತ್ತರಪ್ರದೇಶದಲ್ಲಿ ಫೆಬ್ರವರಿ 10 ರಿಂದ ಪ್ರಾರಂಭವಾಗುವ ಏಳು ಹಂತಗಳಲ್ಲಿ ಮತ ಚಲಾವಣೆಗೊಳ್ಳಲಿದೆ. ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ.
ಈ ಹಿಂದೆ 100-150 ಶಾಸಕರನ್ನು ಕೈಬಿಡಲು ಯೋಜಿಸಿದ್ದ ಬಿಜೆಪಿ, ಇದೀಗ ಮಾಜಿ ಸಚಿವ ಎಸ್ಪಿ ಮೌರ್ಯ ಪಕ್ಷಾಂತರದ ನಂತರ ಪಕ್ಷ ಕೊಂಚ ಯೋಚಿಸಲು ಆರಂಭಿಸಿದೆ. ಸರಣಿಯಾಗಿ ಸಚಿವರು ಶಾಸಕರು ಪಕ್ಷ ತೊರೆಯುವುದನ್ನು ಗಮನದಲ್ಲಿಟ್ಟುಕೊಂಡು ತನ್ನ ನಿಲುವನ್ನು ಬದಲಿಸಿದೆ ಎನ್ನಲಾಗುತ್ತಿದೆ. ಬಿಜೆಪಿ ಸಚಿವರು ಹಾಗೂ ಶಾಸಕರು ಪಕ್ಷ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿದ್ದರಿಂದ ಸಚಿವರು ಮತ್ತು ಶಾಸಕರ ಹಿಡಿತದ ಮಾರ್ಗವನ್ನು ಬದಲಾಯಿಸಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದಲ್ಲಿರುವ ಅಧಿಕಾರ ವಿರೋಧಿ ಭಾವನೆವುಳ್ಳವರನ್ನು ಕೈಬಿಟ್ಟು ಪಕ್ಷದ ಶುದ್ಧೀಕರಣಕ್ಕೆ ಬಿಜೆಪಿ ಮುಂದಾಗಿದೆ ಎಂದು ಪಕ್ಷದ ಬಹು ಸಮೀಕ್ಷೆಗಳು ಸೂಚಿಸಿದ್ದವು. ಆದರೂ ಬಿಜೆಪಿ 30 ರಿಂದ 50 ಕ್ಕಿಂತ ಹೆಚ್ಚು ಶಾಸಕರನ್ನು ಕೈಬಿಡುವ ಸಾಧ್ಯತೆಯಿಲ್ಲ ಎಂದು ಮೂಲಗಳು ಹೇಳುತ್ತವೆ.
ಇನ್ನೂ ನಿಶಾದ್ ಪಕ್ಷದ ಮಿತ್ರ ಸಂಜಯ್ ನಿಶಾದ್ ಮತ್ತು ಅಪ್ನಾ ದಳದೊಂದಿಗಿನ ಮಾತುಕತೆಗಳ ಪ್ರಕಾರ ಎರಡೂ ಪಕ್ಷಗಳು ಪ್ರಸ್ತುತ ಹೆಚ್ಚಿನ ಪಾಲನ್ನು ಪಡೆಯಲು ಮುಂದಾಗಿವೆ. ಆದರೆ ಬಿಜೆಪಿಯು ಅವುಗಳನ್ನು ತಲಾ 15 ಸ್ಥಾನಗಳಿಗೆ ಸೀಮಿತಗೊಳಿಸಬಹುದು ಎಂದು ಮೂಲಗಳು ತಿಳಿಸಿವೆ. ಸೀಟು ಹಂಚಿಕೆ ನಿರ್ಧಾರದಲ್ಲಿ ಜಾತಿ ಅಂಕಗಣಿತ ದೊಡ್ಡ ಪಾತ್ರ ವಹಿಸುತ್ತಿದ್ದು, ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಅಗತ್ಯದ ಬಗ್ಗೆಯೂ ಪಕ್ಷ ಮನಸ್ಸು ಮಾಡಿದೆ ಎನ್ನಲಾಗುತ್ತಿದೆ.
'ದಿ ಪ್ರಿಂಟ್' ಸುದ್ದಿ ಪ್ರಕಾರ, ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜಮಾಲ್ ಸಿದ್ದಿಕಿ, ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ. "ಅಧಿಕ ಮುಸ್ಲಿಂ ಜನಸಂಖ್ಯೆ ಇರುವ ಉತ್ತರಪ್ರದೇಶದಲ್ಲಿ ಹಲವು ಸ್ಥಾನಗಳಿವೆ. ಇವುಗಳಲ್ಲಿ ಹಲವು ಸ್ಥಾನಗಳಲ್ಲಿ ನಾವು 2017ರ ವಿಧಾನಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಮತಗಳ ಅಂತರದಿಂದ ಸೋತಿದ್ದೇವೆ. ಉದಾಹರಣೆಗೆ, ಸಂಭಾಲ್, ಮೊರಾದಾಬಾದ್ ಮತ್ತು ಮೀರತ್ ಜಿಲ್ಲೆಗಳಲ್ಲಿ ಗಮನಾರ್ಹ ಸಂಖ್ಯೆಯ ಮುಸ್ಲಿಂ ಮತದಾರರಿದ್ದು ಕಡಿಮೆ ಮತಗಳಲ್ಲಿ ಸೋಲು ಕಾಣಲಾಗಿದೆ. ಪಶ್ಚಿಮ ಬಂಗಾಳದಲ್ಲಿಯೂ ನಮ್ಮ ಪಕ್ಷವು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಮತ್ತು ಈ ಬಾರಿ ನಾವು ಯುಪಿ ಚುನಾವಣೆಗೂ ಕೆಲವು ಹೆಸರುಗಳನ್ನು ಕಳುಹಿಸುತ್ತಿದ್ದೇವೆ. ಮುಸ್ಲಿಮ್ ಸಮಾಜವೂ ಸರ್ಕಾರದಲ್ಲಿ ಪ್ರಾತಿನಿಧ್ಯವನ್ನು ಪಡೆಯಬೇಕೆಂದು ನಾವು ಬಯಸುತ್ತೇವೆ. ಇದರಿಂದ ಪಕ್ಷವೂ ಸದೃಢವಾಗಿ ಮುಂದುವರಿಯುತ್ತದೆ ಎಂದು ಸಿದ್ದಿಕಿ ಹೇಳಿದ್ದಾರೆ.
ಇದರೊಂದಿಗೆ ಪಕ್ಷ ತೊರೆದ ಸಚಿವರು ಮತ್ತು ಶಾಸಕರೂ ಕೂಡ ಬಿಜೆಪಿ ವಿರುದ್ಧ ಇದೇ ಆರೋಪವನ್ನು ಮಾಡುತ್ತಿದ್ದಾರೆ. ಬಿಜೆಪಿ ಹಿಂದುಳಿದ ವರ್ಗಗಳನ್ನು ಕಡೆಗಣಿಸಿದೆ ಎನ್ನುವ ಆರೋಪವನ್ನು ಮಾಡುವ ಮೂಲಕ ಪಕ್ಷ ತೊರೆದಿರುವುದರಿಂದ ಬಿಜೆಪಿಗೆ ಸದ್ಯ ಚುನಾವಣೆಯಲ್ಲಿ ಈ ಹೇಳಿಕೆ ದೊಡ್ಡ ಸವಾಲಾಗಿ ಪರಿಗಣಿಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ಉಪ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಈಗಾಗಲೇ ಅಭ್ಯರ್ಥಿಗಳೆಂದು ಹೆಸರಿಸಲಾಗಿದ್ದು, ರಾಜ್ಯ ಘಟಕದ ಮುಖ್ಯಸ್ಥರಾದ ದಿನೇಶ್ ಶರ್ಮಾ ಮತ್ತು ಸ್ವತಂತ್ರ ದೇವ್ ಸಿಂಗ್ ಅವರಂತಹ ಇತರರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂಬುದರ ಕುರಿತು ಮಾತುಕತೆ ನಡೆಯುತ್ತಿದೆ.