ಅಯೋಧ್ಯೆ ಕೇಸ್ ನಂತರ ಮತ್ತೊಂದು ಮಹಾ ತೀರ್ಪಿಗೆ ಸಜ್ಜಾಗಲಿದೆ ಲಕ್ನೋ
ಲಕ್ನೋ, ನವೆಂಬರ್ 09: ಅಯೋಧ್ಯಾ ಭೂ ವಿವಾದ ಪ್ರಕರಣದ ಅಂತಿಮ ತೀರ್ಪು ಹೊರ ಬಂದಿದೆ. ಸುಪ್ರೀಂಕೋರ್ಟಿನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಐತಿಹಾಸಿಕ ತೀರ್ಪು ನೀಡಿದೆ. ಆದರೆ, ಆಯೋಧ್ಯೆ ಇಷ್ಟರಲ್ಲೇ ಮತ್ತೊಂದು ಆದೇಶಕ್ಕೆ ಸಜ್ಜಾಗಬೇಕಿದೆ.
1992ರ ಡಿಸೆಂಬರ್ 06ರಂದು ರಾಮಜನ್ಮಭೂಮಿ ವಿವಾದಿತ ತಾಣದಲ್ಲಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಅಂತಿಮಗೊಂಡಿದ್ದು, ಲಕ್ನೋದ ವಿಶೇಷ ಸಿಬಿಐ ಕೋರ್ಟ್ ತೀರ್ಪು ನೀಡಲಿದೆ.
1992ರಲ್ಲಿ ವಿಎಚ್ ಪಿ, ಶಿವ ಸೇನೆ, ಬಿಜೆಪಿ ಕರಸೇವಕರಿಂದ ಮಸೀದಿ ಧ್ವಂಸ. ರಾಷ್ಟ್ರವ್ಯಾಪಿ ಹಿಂದೂ -ಮುಸ್ಲಿಂ ಕೋಮು ಗಲಭೆಗೆ ನಾಂದಿ. 2,000ಕ್ಕೂ ಅಧಿಕ ಮಂದಿ ಮರಣ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲೂ ಹಿಂಸಾಚಾರ ಹಬ್ಬಿತು.
ಲಕ್ನೋಉತ್ತರಪ್ರದೇಶದ ಸಿಬಿ-ಸಿಐಡಿ ವಿಭಾಗವು ಮೊದಲಿಗೆ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ನಂತರ ಸಿಬಿಐಗೆ ಕೇಸ್ ವರ್ಗಾವಣೆಯಾಯಿತು. 40 ಮಂದಿ ಮೇಲೆ 49 ಕೇಸ್ ಹಾಕಿ ದೋಷರೋಪಣ ಪಟ್ಟಿಯನ್ನು ವಿಶೇಷ ನ್ಯಾಯಲಯಕ್ಕೆ ಸಲ್ಲಿಸಲಾಯಿತು. 1996ರಲ್ಲಿ ಪೂರಕ ಚಾರ್ಜ್ ಶೀಟ್ ಹಾಕಿ ಹೆಚ್ಚುವರಿಯಾಗಿ 9 ಮಂದಿಯನ್ನು ಆರೋಪಿಗಳು ಹೆಸರಿಸಲಾಯಿತು.

ಬಾಬ್ರಿ ಮಸೀದಿ ಕೆಡವಲು ಸಂಚು
ಎಲ್ ಕೆ ಅಡ್ವಾಣಿ ಹಾಗೂ 13 ಮಂದಿಗಳ ಮೇಲೆ ಬಾಬ್ರಿ ಮಸೀದಿ ಕೆಡವಲು ಸಂಚು ರೂಪಿಸಿದ ಆರೋಪ ಹೊರೆಸಿ ಚಾರ್ಜ್ ಶೀಟ್ ಹಾಕಲಾಗಿತ್ತು. ಆರೋಪಿಗಳು ಸಿಬಿಐ ಚಾರ್ಜ್ ಶೀಟ್ ವಿರುದ್ಧ ಅಲಹಾಬಾದ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು.
2001ರಲ್ಲಿ ಎಲ್ ಕೆ ಅಡ್ವಾಣಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ಮುರಳಿ ಮನೋಹರ್ ಜೋಶಿ, ವಿನಯ್ ಕಟೀಯಾರ್ ಸೇರಿದಂತೆ 13 ಮುಖಂಡರ ಮೇಲಿದ್ದ ಚಾರ್ಜ್ ಶೀಟ್ ರದ್ದುಗೊಳಿಸಿದ ವಿಶೇಷ ನ್ಯಾ. ಎಸ್ .ಕೆ ಶುಕ್ಲಾ. ಕ್ರೈಂ 197 (ಮಸೀದಿ ಧ್ವಂಸ) ಹಾಗೂ 198(ಕ್ರಿಮಿನಲ್ ಪಿತೂರಿ) ಎರಡನ್ನು ಪ್ರತ್ಯೇಕಿಸಿ ಆದೇಶ ನೀಡಿದರು. ಇದಕ್ಕೂ ಮುನ್ನ ರಾಯ್ ಬರೇಲಿ ಕೋರ್ಟಿಗೆ 198 ಪ್ರಕರಣ ವಿಚಾರಣೆಗೆ ಬಂದಿತ್ತು. ಅದರಲ್ಲೂ ಅಡ್ವಾಣಿ ಅವರ ವಿರುದ್ಧದ ಆರೋಪವನ್ನು ಚಾರ್ಜ್ ಶೀಟ್ ಕೇಸಿನಿಂದ ಹೊರಗಿಡಲಾಯಿತು.

2012ರಲ್ಲಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ
ಸಿಬಿಐ ನಂತರ 2012ರಲ್ಲಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. 2017ರಲ್ಲಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಕ್ರಿಮಿನಲ್ ಸಂಚು ಆರೋಪವನ್ನು ಬದಿಗಿಟ್ಟ ಆದೇಶವನ್ನು ಸುಪ್ರೀಂ ಪುರಸ್ಕರಿಸಲಿಲ್ಲ. ಸದ್ಯ ಪ್ರಕರಣದ ವಿಚಾರಣೆ ಮುಗಿದಿದ್ದು, ಸಿಬಿಐ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಬರಲಿದೆ.

ಮೊಘಲರು ಮಸೀದಿ ನಿರ್ಮಾಣ ಮಾಡಿದ್ದಾರೆ ಎಂಬ ವಾದ
ಈ ನಡುವೆ ಉತ್ತರಪ್ರದೇಶ ರಾಜ್ಯದ ಸರಯೂ ನದಿ ತೀರದ ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ತಾಣದಲ್ಲೇ ಮೊಘಲರು ಮಸೀದಿ ನಿರ್ಮಾಣ ಮಾಡಿದ್ದಾರೆ ಎಂಬ ವಾದವಿದೆ. ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಪಂಚ ಸದಸ್ಯರ ನ್ಯಾಯಪೀಠವು ಅಂತಿಮ ತೀರ್ಪು ನೀಡಿದೆ. ಈ ತೀರ್ಪಿನಲ್ಲಿ ವಿವಾದಿತ ಸ್ಥಳದಲ್ಲಿ ಮಸೀದಿ ಇದ್ದ ಬಗ್ಗೆ, ಮಸೀದಿ ಕೆಳಗೆ ಮಸೀದಿಯೇತರ ಕಟ್ಟಡ(ರಾಮಲಲ್ಲಾ ಎಂಬ ವಾದವಿದೆ) ಇತ್ತು ಎಂದು ಪುರಾತತ್ವ ಇಲಾಖೆ ನೀಡಿದ ಸಮೀಕ್ಷೆ ವರದಿಯನ್ನು ಉಲ್ಲೇಖಿಸಲಾಗಿದೆ.

1528ರಲ್ಲಿ ಸ್ಥಾಪನೆಯಾದ ಬಾಬರ್ ಮಸೀದಿ
1528ರಲ್ಲಿ ಸ್ಥಾಪನೆಯಾದ ಬಾಬರ್ ಮಸೀದಿ ಇರುವ ಸ್ಥಳವು 1885ರಲ್ಲಿ ಮೊದಲ ಬಾರಿಗೆ ಭೂಮಿ ಆಸ್ತಿ ಹಕ್ಕು ವ್ಯಾಜ್ಯ ಕೋರ್ಟ್ ಮೇಟ್ಟಿಲೇರಿತ್ತು. ಅಂದಿನಿಂದ ಮೊದಲುಗೊಂಡು ಆರಂಭವಾದ ರಾಮಜನ್ಮಭೂಮಿ, ಬಾಬ್ರಿ ಮಸೀದಿ ವಿವಾದ ಇಂದಿನ ತನಕ ಪರಿಹಾರ ಕಾಣದಂತೆ ನಡೆದುಕೊಂಡು ಬಂದಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಇತ್ಯರ್ಥ ಹಾಡಿ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಸೂಚಿಸಿದೆ. ಆದರೆ, ಕೇಸ್ ಮತ್ತೆ ಮತ್ತೆ ಬೇರೆ ಬೇರೆ ರೂಪದಲ್ಲಿ ಹಲವರನ್ನು ಕಾಡುತ್ತಿದೆ. ಭೂ ವ್ಯಾಜ್ಯದ ಸಿವಿಲ್ ಕಟ್ಲೆ ಅಲ್ಲದೆ, ಬಾಬ್ರಿ ಮಸೀದಿ ಧ್ವಂಸ ಪ್ರಕರಣವೂ 25 ವರ್ಷಗಳ ಕಾಲ ಮೀರಿ ವಿಚಾರಣೆ ನಡೆದಿದೆ.












Click it and Unblock the Notifications