ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿಗೆ ಈಗ ಮತ್ತೊಂದು ಪಕ್ಷದ ಬೆಂಬಲ
ಲಕ್ನೋ, ಜನವರಿ 17: ಮುಂಬರುವ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವುದು ಗೊತ್ತಿರುವ ವಿಷಯ. ಇದೀಗ ಈ ಮೈತ್ರಿಗೆ ಮತ್ತೊಂದು ಪಕ್ಷದ ಬೆಂಬಲ ಸಿಕ್ಕಿದೆ.
ರಾಷ್ಟ್ರೀಯ ಲೋಕದಳದ ಅಜಿತ್ ಸಿಂಗ್ ಅವರು ಎಸ್ಪಿ-ಬಿಎಸ್ಪಿ ಜೊತೆ ಕೈಜೋಡಿಸಿದ್ದು, ಮೂರು ಕ್ಷೇತ್ರಗಳಲ್ಲಿ ಆರ್ ಎಲ್ ಡಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಉಭಯ ಪಕ್ಷಗಳೂ ಒಪ್ಪಿಗೆ ಸೂಚಿಸಿವೆ.
ಅಲ್ಲದೆ, ಆರ್ ಎಲ್ ಡಿಗೋಸ್ಕರ ಎಸ್ಪಿಯ ಒಂದು ಕ್ಷೇತ್ರವನ್ನು ಬಿಟ್ಟುಕೊಡಲೂ ಅಖಿಲೇಶ್ ಯಾದವ್ ಸಿದ್ಧರಾಗಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಸೋಲಿಸುವ ಪಣತೊಟ್ಟಿರುವ ಈ ಘಟಬಂಧನ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ, ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.

ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆ
ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕ ದಳದ ಬೆಂಬಲದ ನಂತರ ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆ ಲೆಕ್ಕಾಚಾರ ಹೀಗಿದೆ: ಬಿಎಸ್ಪಿ -38, ಎಸ್ಪಿ- 37, ಆರ್ ಎಲ್ ಡಿ- 3. ಒಟ್ಟು 80 ಕ್ಷೇತ್ರಗಳ ಉತ್ತರ ಪ್ರದೇಶ ಲೋಕಸಭಾ ಕ್ಷೇತ್ರಗಳಲ್ಲಿ 78 ರಲ್ಲಿ ಈ ಮೈತ್ರಿಕೂಟ ಸ್ಪರ್ಧಿಸಲಿದ್ದು, ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ಅಮೇಥಿ ಮತ್ತು ರಾಯ್ಬರೇಲಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ.

ಸೀಟು ಬಿಟ್ಟುಕೊಟ್ಟ ಅಖಿಲೇಶ್ ಯಾದವ್
2019 ರ ಏಪ್ರಿಲ್ ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದಾಗಿ ಕಳೆದ ವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದವು. ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 76 ಕ್ಷೇತ್ರಗಳಲ್ಲಿ ಎಸ್ಪಿ-ಬಿಎಸ್ಪಿ ಸ್ಪರ್ಧಿಸಲಿದ್ದು, ತಲಾ 38 ಕ್ಷೇತ್ರಗಳನ್ನು ಸಮಾನವಾಗಿ ಹಂಚಿಕೊಂಡಿದ್ದವು. ಆದರೆ ಇದೀಗ ಒಂದು ಕ್ಷೇತ್ರವನ್ನು ಬಿಟ್ಟುಕೊಡಲು ಅಖಿಲೇಶ್ ಸಿದ್ಧರಾಗಿದ್ದು, ಆರ್ ಎಲ್ ಡಿ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಒಟ್ಟಿನಲ್ಲಿ ಘಟಬಂಧನ ಗಟ್ಟಿಯಾಗಿರಬೇಕೆಂಬ ಕಾರಣಕ್ಕೆ ಅಖಿಲೇಶ್ ಯಾದವ್ ತ್ಯಾಗಕ್ಕೆ ಸಿದ್ಧರಾಗಿದ್ದು, ಅವರ ಅಭಿಮಾನಿಗಳಲ್ಲಿ ಅವರ ಬಗೆಗಿನ ಗೌರವ ಹೆಚ್ಚಿಸಿದೆ.

ರಾಯ್ಬರೇಲಿ-ಅಮೇಥಿಯಲ್ಲಿ ಸ್ಪರ್ಧೆ ಇಲ್ಲ
ಅಮೇಥಿ ಮತ್ತು ರಾಯ್ಬರೇಲಿಯಲ್ಲಿ ಬಿಎಸ್ಪಿ-ಎಸ್ಪಿ ಮೈತ್ರಿಕೂಟದ ಅಭ್ಯರ್ಥಿಗಳು ಸ್ಪರ್ಧಿಸುತ್ತಿಲ್ಲ. ಬಹುಶಃ ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡಲಿ ಎಂಬ ಕಾರಣಕ್ಕೆ ಬೇಕೆಂದೇ ಇಲ್ಲಿ ತನ್ನ ಅಭ್ಯರ್ಥಿಗಳನ್ನು ಬಿಎಸ್ಪಿ-ಎಸ್ಪಿ ನಿಲ್ಲಿಸಿಲ್ಲ.ಅದೂ ಅಲ್ಲದೆ ಈ ಎರಡು ಕ್ಷೇತ್ರಗಳು ಗಾಂಧಿ ಕುಟುಂಬದ ಭದ್ರಕೋಟೆ ಎಂಬುದು ಮಾಯಾವತಿ-ಅಖಿಲೇಶ್ ಗೆ ಗೊತ್ತಿಲ್ಲದ ವಿಷಯವಲ್ಲ.

ಬಿಜೆಪಿ ಟೀಕೆ, ಕಾಂಗ್ರೆಸ್ ಸ್ವಾಗತ!
ಎಸ್ಪಿ-ಬಿಎಸ್ಪಿ ಮೈತ್ರಿಯನ್ನು ಕಟುವಾಗಿ ಟೀಕಿಸಿದ್ದ ಬಿಜೆಪಿ, "ಬಿಎಸ್ಪಿಯಾಗಲೀ, ಎಸ್ಪಿಯಾಗಲೀ ಮೈತ್ರಿ ಮಾಡಿಕೊಂಡಿರುವುದು ದೇಶಕ್ಕಾಗಲೀ, ಉತ್ತರ ಪ್ರದೇಶಕ್ಕಾಗಲೀ ಅಲ್ಲ, ಕೇವಲ ತಮ್ಮ ಉಳಿವಿಗಾಗಿ. ಅವರಿಗೆ ಗೊತ್ತು, ಪ್ರಧಾನಿ ಮೋದಿ ಅವರನ್ನು ಸ್ವತಂತ್ರವಾಗಿ ಎದುರಿಸಲು ತಮಗೆ ಸಾಧ್ಯವಿಲ್ಲ ಎಂಬುದು. ಆದ್ದರಿಂದಲೇ ಅವರು ಮೈತ್ರಿ ಮೊರೆಹೋಗಿದ್ದಾರೆ" ಎಂದಿತ್ತು. ಆದರೆ ಕಾಂಗ್ರೆಸ್ ಈ ಮೈತ್ರಿಯನ್ನು ಸ್ವಾಗತಿಸಿದ್ದಲ್ಲದೆ, 'ಇದೇ ಅಂತಿಮ ನಿರ್ಧಾರ ಎನ್ನುವುದಕ್ಕಾಗುವುದಿಲ್ಲ. ಚುನಾವಣೆಯ ಸಮಯದಲ್ಲಿ ಎಂಥ ಬದಲಾವಣೆಯೂ ಆಗಬಹುದು' ಎಂದಿತ್ತು.












Click it and Unblock the Notifications