ಆರ್ಥಿಕ ಕುಸಿತಕ್ಕೆ ಚಿದಂಬರಂ ಕಾರಣ: ಮೋದಿಗೆ ಪತ್ರ ಬರೆದು ಮಾಜಿ ಐಎಎಫ್ ಅಧಿಕಾರಿ ಆತ್ಮಹತ್ಯೆ
ಅಲಹಾಬಾದ್, ಸೆಪ್ಟೆಂಬರ್ 9: ಅಸ್ಸಾಂನ ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರು ಉತ್ತರ ಪ್ರದೇಶದ ಅಲಹಾಬಾದ್ನ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮೊದಲು ಅವರು ಪ್ರಧಾನಿ ಮೋದಿ ಅವರ ಹೆಸರಿಗೆ ಆತ್ಮಹತ್ಯೆಯ ಪತ್ರ ಬರೆದಿದ್ದಾರೆ.
ಬಿಜನ್ ದಾಸ್ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಅಧಿಕಾರಿ. ಐದು ಪುಟಗಳ ಸುದೀರ್ಘ ಪತ್ರವನ್ನು ಅವರು ಬರೆದಿದ್ದು, ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿಗೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಕಾರಣ ಎಂದಿದ್ದಾರೆ. ಆರ್ಥಿಕ ಕುಸಿತಕ್ಕೆ ಮೋದಿ ಸರ್ಕಾರವನ್ನು ಆರೋಪಿಸುವುದು ಸರಿಯಲ್ಲ ಎಂದೂ ಅವರು ಹೇಳಿದ್ದಾರೆ.
55 ವರ್ಷದ ಬಿಜನ್ ದಾಸ್ ಅವರು ಹೋಟೆಲ್ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೆ. 6ರಿಂದಲೂ ಪ್ರಗ್ಯಾನ್ ಲಾಡ್ಜ್ನಲ್ಲಿದ್ದ ಅವರು ಭಾನುವಾರ ಕೊಠಡಿಯಿಂದ ಹೊರಕ್ಕೆ ಬಂದಿರಲಿಲ್ಲ. ಸಂಜೆಯಾದರೂ ಅವರು ಹೊರಗೆ ಬಾರದಿದ್ದನ್ನು ಗಮನಿಸಿದ ಸಿಬ್ಬಂದಿಯೊಬ್ಬರು ಹೋಟೆಲ್ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದರು. ಬಾಗಿಲು ಒಡೆದು ನೋಡಿದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ತಮ್ಮ ಆತ್ಮಹತ್ಯೆಯ ನೋಟ್ ಜತೆ ಅವರು 500 ರೂ. ರೂಮ್ ಬಾಡಿಗೆ ಮತ್ತು 1,500 ರೂ ಹಣವನ್ನು ಅಂತ್ಯಕ್ರಿಯೆಗಾಗಿ ಎಂದು ಇರಿಸಿದ್ದಾರೆ. ತಮ್ಮ ಕೆಟ್ಟ ಆರ್ಥಿಕ ಸ್ಥಿತಿಯಿಂದಾಗಿ ತಮ್ಮ ಅಂತ್ಯಕ್ರಿಯೆ ಮಾಡುವವರಿಗೆ ನೀಡಲು ತಮ್ಮ ಬಳಿ ಹಣವಿಲ್ಲ ಎಂದು ಕೂಡ ಬರೆದಿದ್ದಾರೆ.
ಯುಪಿಎ ಸರ್ಕಾರದ ಹಗರಣಗಳು ಮತ್ತು ಅಸಮರ್ಪಕ ಹಣಕಾಸು ನಿರ್ವಹಣೆಯ ಬಗ್ಗೆ ಆರೋಪ ಮಾಡಿರುವ ಬಿಜನ್ ದಾಸ್, ಆರ್ಥಿಕ ಕುಸಿತದಿಂದಾಗಿ ತಮ್ಮ ನಿವೃತ್ತಿಯ ಬಳಿಕ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ, ತಮ್ಮ ವೈಯಕ್ತಿಕ ವೈಫಲ್ಯಗಳ ಬಗ್ಗೆಯೂ ತಿಳಿಸಿರುವ ಅವರು, ಕಿರಿಯ ಮಗನಿಗೆ ಸಹಾಯ ಮಾಡಲು ಸಾಧ್ಯವಾಗಿಲ್ಲ ಎಂದು ಹಳಿದುಕೊಂಡಿದ್ದಾರೆ. ತಮ್ಮ ಅಂತ್ಯಕ್ರಿಯೆಯ ಬಗ್ಗೆ ಕುಟುಂಬದವರಿಗೆ ತಿಳಿಸಬೇಡಿ. ಏಕೆಂದರೆ ಮಗ ತನ್ನ ದೇಹವನ್ನು ನೋಡುವುದು ಬೇಡ ಎಂದು ಅಲಹಾಬಾದ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅಲಹಾಬಾದ್ನಲ್ಲಿಯೇ ಅಂತ್ಯಕ್ರಿಯೆ ನಡೆಸುವಂತೆ ಕೋರಿದ್ದಾರೆ. ಆದರೆ ಪೊಲೀಸರು ತನಿಖೆಗಾಗಿ ಅವರ ಕುಟುಂಬದವರನ್ನು ಸಂಪರ್ಕಿಸಿದ್ದಾರೆ.












Click it and Unblock the Notifications