ಜನರು ಮೂರ್ಖರೆಂದು ಭಾವಿಸಬೇಡಿ: ಮೋದಿಗೆ ಪ್ರಿಯಾಂಕಾ ತಿರುಗೇಟು
ನವದೆಹಲಿ, ಮಾರ್ಚ್ 20: ಕಾಂಗ್ರೆಸ್ನ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದು, 'ಜನರು ಮೂರ್ಖರೆಂದು ಭಾವಿಸುವುದನ್ನು ಪ್ರಧಾನಿ ನಿಲ್ಲಿಸಲಿ' ಎಂದು ಸಲಹೆ ನೀಡಿದ್ದಾರೆ.
ತಮ್ಮ ಬ್ಲಾಗ್ ಬರಹದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, 2014ರಲ್ಲಿ ದೇಶದ ಜನರು ವಂಶಪಾರಂಪರ್ಯದ ಬದಲು ಪ್ರಾಮಾಣಿಕತೆಯನ್ನು ನಿರ್ಣಯಿಸಲು ಮತ ಚಲಾಯಿಸಿದ್ದರು. ವಂಶಪಾರಂಪರ್ಯದ ರಾಜಕಾರಣ ಹೆಚ್ಚು ಶಕ್ತಿಶಾಲಿಯಾದಾಗ ಸಾಂವಿಧಾನಿಕ ಸಂಸ್ಥೆಗಳು ಅಪಾಯಕ್ಕೆ ಸಿಲುಕುತ್ತವೆ ಎಂದು ಬರೆದಿದ್ದರು.
ತಮ್ಮ ಬರಹದಲ್ಲಿ ಅವರು ಕಾಂಗ್ರೆಸ್ನ ಕುಟುಂಬ ರಾಜಕಾರಣದ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದರು.

ಇದಕ್ಕೆ ಉತ್ತರಪ್ರದೇಶದಲ್ಲಿ ಪ್ರತಿಕ್ರಿಯೆ ನೀಡಿದ ಪ್ರಿಯಾಂಕಾ ಗಾಂಧಿ, 'ಕಳೆದ ಐದು ವರ್ಷಗಳಲ್ಲಿ ಬಿಜೆಪಿಯು ಮಾಧ್ಯಮ ಸೇರಿದಂತೆ ಪ್ರತಿ ಸಂಸ್ಥೆಯನ್ನೂ ವ್ಯವಸ್ಥಿತವಾಗಿ ದಾಳಿಗೊಳಪಡಿಸಿದೆ. ಜನರು ಮೂರ್ಖರು ಎಂದು ಭಾವಿಸುವುದನ್ನು ಪ್ರಧಾನಿ ನಿಲ್ಲಿಸಲಿ. ಇವೆಲ್ಲವನ್ನೂ ಅವರು ನೋಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲಿ' ಎಂದು ಸಲಹೆ ನೀಡಿದರು.
'ಅಧಿಕಾರ ತಲೆಗೇರಿದಾಗ ಅವರಲ್ಲಿ ಎರಡು ತಪ್ಪು ಭಾವನೆಗಳು ಮೂಡುತ್ತವೆ. ಒಂದನೆಯದು, ಜನರನ್ನು ತಪ್ಪುದಾರಿಗೆ ಎಳೆಯುವುದು ಸುಲಭ. ಎರಡನೆಯದು, ಅವರ ವಿರುದ್ಧ ಮಾತನಾಡುವವರು ಹೆದರುತ್ತಾರೆ. ಅವರೇನೇ ಮಾಡಿದರೂ ನಾವು ಭಯಪಟ್ಟುಕೊಂಡಿಲ್ಲ. ಅವರು ಬಯಸಿದಷ್ಟು ನಮಗೆ ಕಿರುಕುಳ ನೀಡಬಹುದು, ನಾವು ಹೋರಾಟ ಮುಂದುವರಿಸುತ್ತೇವೆ' ಎಂದರು.












Click it and Unblock the Notifications