ಉತ್ತರ ಪ್ರದೇಶದಲ್ಲಿ ಕೊರೊನಾ ರೋಗಿ ದೇಹವನ್ನು ನದಿಗೆ ಎಸೆದ ಇಬ್ಬರ ಬಂಧನ
ಲಕ್ನೋ, ಮೇ 30: ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಮೃತದೇಹಗಳು ಗಂಗಾ ನದಿಯಲ್ಲಿ ತೇಲಾಡಿದ ಪ್ರಕರಣ ಮರೆ ಮಾಚುವುದರಲ್ಲೇ ಅಂಥದ್ದೇ ಮತ್ತೊಂದು ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಲರಾಮ್ ಪುರ್ ಜಿಲ್ಲೆಯಲ್ಲಿ ನಡೆದಿದೆ.
ಕೊವಿಡ್-19 ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನು ಬಲರಾಮ್ ಪುರ್ ಜಿಲ್ಲೆಯ ರಾಪ್ತಿ ನದಿಗೆ ಹಾಕಲಾಗಿದೆ. ಪಿಪಿಇ ಕಿಟ್ ಧರಿಸಿದ ವ್ಯಕ್ತಿಯೊಬ್ಬರು ಸಂಪೂರ್ಣವಾಗಿ ಮುಚ್ಚಿಕೊಂಡಿರುವ ಮೃತದೇಹವನ್ನು ನದಿಗೆ ಎಸೆದಿದ್ದಾನೆ. ಈ ವೇಳೆ ಮತ್ತೊಬ್ಬ ವ್ಯಕ್ತಿಯು ಇದಕ್ಕೆ ಸಹಕಾರ ನೀಡಿರುವುದು ಬೆಳಕಿಗೆ ಬಂದಿದೆ.
ಕೊತ್ವಾಲಾ ಪ್ರದೇಶದಲ್ಲಿ ನದಿಗೆ ಮೃತದೇಹವನ್ನು ಎಸೆಯುತ್ತಿರುವ ದೃಶ್ಯವನ್ನು ಕಾರಿನಲ್ಲಿ ಪ್ರಯಾಣಿಸುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಇದರ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡ ಬಲರಾಮ್ ಪುರ ಪೊಲೀಸರು ಸಂಜಯ್ ಕುಮಾರ್ ಹಾಗೂ ಮನೋಜ್ ಕುಮಾರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಳೆದ ಮೇ 28ರಂದು ಪ್ರಾಣ ಬಿಟ್ಟಿದ್ದ ವ್ಯಕ್ತಿ:
ಉತ್ತರ ಪ್ರದೇಶದ ಶೋರ್ಹಾತಗಧ್ ಸಿದ್ದಾರ್ಥ್ ನಗರ ನಿವಾಸಿ ಪ್ರೇಮನಾಥ್ ಅನ್ನು ಮೃತ ವ್ಯಕ್ತಿ ಎಂದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ. ಕಳೆದ 25 ರಂದು ಕೊರೊನಾವೈರಸ್ ಸೋಂಕು ತಗುಲಿದ ಪ್ರೇಮನಾಥ್ ಬಲರಾಮ್ ಪುರ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೇ 28ರಂದು ಸಾವನ್ನಪ್ಪಿದ್ದನು ಎಂದು ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಸಂಬಂಧಿಕರೇ ನದಿಗೆ ಮೃತದೇಹ ಎಸೆದರು!
ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟ ವ್ಯಕ್ತಿಯ ಮೃತದೇಹವನ್ನು ಸರ್ಕಾರದ ಶಿಷ್ಟಾಚಾರದ ಪ್ರಕಾರ, ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಅಂತ್ಯಸಂಸ್ಕಾರ ಮಾಡುವುದಾಗಿ ಮೃತದೇಹ ತೆಗೆದುಕೊಂಡು ಹೋದ ಸಂಬಂಧಿಕರೇ ನದಿಗೆ ಎಸೆದಿದ್ದಾರೆ ಎಂದು ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ.












Click it and Unblock the Notifications