ಕಾಶ್ಮೀರಿಗಳ ಮೇಲಾದ ಹಲ್ಲೆಯನ್ನು ಖಂಡಿಸಿದ ಅರುಣ್ ಜೇಟ್ಲಿ
ನವದೆಹಲಿ, ಮಾರ್ಚ್ 07 : ನಮ್ಮ ಹೋರಾಟವೇನಿದ್ದರೂ ಕಾಶ್ಮೀರದ ಪ್ರತ್ಯೇಕತಾವಾದಿಗಳ ವಿರುದ್ಧ, ಭಯೋತ್ಪಾದನೆಯನ್ನು ಬಿತ್ತುತ್ತಿರುವವರ ವಿರುದ್ಧ. ಕಾಶ್ಮೀರಿಗಳ ಮೇಲೇಕೆ ಹಲ್ಲೆ ಮಾಡುತ್ತೀರಿ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಟೀಕಾಪ್ರಹಾರ ಮಾಡಿದ್ದಾರೆ.
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಬುಧವಾರ ಸಂಜೆ, ಬೀದಿಬದಿ ಒಣಹಣ್ಣುಗಳನ್ನು ಮಾರುತ್ತಿದ್ದ ಇಬ್ಬರು ಕಾಶ್ಮೀರದ ವ್ಯಕ್ತಿಗಳನ್ನು ವಿಶ್ವ ಹಿಂದೂ ದಳದ ಕಾರ್ಯಕರ್ತರು ನಿರ್ದಯವಾಗಿ ಹಲ್ಲೆ ಮಾಡಿದ್ದಾರೆ. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಭಾರೀ ಆಕ್ರೋಶ ಹುಟ್ಟುಹಾಕಿದೆ.
ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೆಡ್ ಸ್ಫೋಟ: ಓರ್ವ ಸಾವು, ಹಲವರಿಗೆ ಗಾಯ
ಈ ಅಮಾನವೀಯ ಹಲ್ಲೆಯನ್ನು ಅರುಣ್ ಜೇಟ್ಲಿ ತೀವ್ರವಾಗಿ ಖಂಡಿಸಿದ್ದು, ನಮಗೆ ಜಮ್ಮು ಮತ್ತು ಕಾಶ್ಮೀರದ ಜನ ಬೇಕು. ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ಅವರೂ ಜೊತೆಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಕಾಶ್ಮೀರಿ ವ್ಯಾಪಾರಿಗಳು ಇಂದು ನಿನ್ನೆಯಿಂದ ಇಲ್ಲಿ ವ್ಯಾಪಾರ ಮಾಡುತ್ತಿಲ್ಲ. ಕಳೆದ 20 ವರ್ಷಗಳಿಂದಲೂ ಇಲ್ಲಿ ಒಣ್ಣಹಣ್ಣು ಮಾರಾಟ ಮಾಡುತ್ತಿದ್ದಾರೆ. ಆದರೂ, ಪುಲ್ವಾಮಾ ಆತ್ಮಾಹುತಿ ದಾಳಿಯನ್ನು ಕಾಶ್ಮೀರದ ನಾಗರಿಕ ನಡೆಸಿದ ನಂತರ ದೇಶದೆಲ್ಲೆಡೆ ಕಾಶ್ಮೀರಿಗಳ ಮೇಲೆ ಆಕ್ರೋಶ ವ್ಯಕ್ತವಾಗುತ್ತಿದ್ದು ಹಲ್ಲೆಗಳಾಗುತ್ತಿವೆ.
ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ ಕೂಡ ಕಾಶ್ಮೀರದ ಯುವಕನ ಮೇಲೆ ಹಲ್ಲೆ ನಡೆದಿತ್ತು. ಇದಾದ ನಂತರ, ಭಾರತದ ಸರ್ವೋಚ್ಚ ನ್ಯಾಯಾಲಯ, ಕಾಶ್ಮೀರದ ನಾಗರಿಕರು ಕೂಡ ಭಾರತೀಯರೇ ಆಗಿರುವುದರಿಂದ ಅವರಿಗೆ ಭದ್ರತೆ ನೀಡಬೇಕು ಎಂದು 10 ರಾಜ್ಯಗಳಿಗೆ ತಾಕೀತು ಮಾಡಿತ್ತು.
ಲಕ್ನೋದಲ್ಲಿ ಕಾಶ್ಮೀರಿಗಳ ಮೇಲೆ ಹೀನಾಯ ಹಲ್ಲೆ, ವಿಡಿಯೋ ವೈರಲ್
ಸುಪ್ರೀಂ ಕೋರ್ಟಿನ ಆದೇಶಕ್ಕೆ ಕ್ಯಾರೆ ಅನ್ನದ ಹಿಂದೂ ಸಂಘಟನೆಯ ಕಾರ್ಯಕರ್ತರು, ಲಕ್ನೋದಲ್ಲಿ ಕಾಶ್ಮೀರಿಗಳ ಮೇಲೆ ಹಲ್ಲೆ ಮಾಡಿದ್ದು, ಅವರ ಗುರುತಿನ ಚೀಟಿ ಕೇಳಿದ್ದಲ್ಲದೆ, ಅವರನ್ನು ಭಯೋತ್ಪಾದಕರು ಎಂದು ಜರಿದಿದ್ದಾರೆ. ಸ್ಥಳೀಯರು ಮಧ್ಯ ಪ್ರವೇಶಿಸಿ ಕಾನೂನೂ ಕೈಗೆ ತೆಗೆದುಕೊಳ್ಳಬಾರದೆಂದು ಬುದ್ಧಿ ಹೇಳಿದ್ದಾರೆ. ಆ ಎಲ್ಲ ನಾಲ್ಕು ಹಲ್ಲೆಕೋರರನ್ನು ಬಂಧಿಸಲಾಗಿದೆ.