ಕೊಪ್ಪಳ ವಿಮಾನ ನಿಲ್ದಾಣ ನಿರ್ಮಾಣ; ಸ್ಥಳ ಪರಿಶೀಲಿಸಿದ ಅಧಿಕಾರಿಗಳು
ಕೊಪ್ಪಳ, ಜನವರಿ 30; ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಬೇಕು ಎಂಬ ಜಿಲ್ಲೆಯ ಜನರ ಬಹುದಿನದ ಬೇಡಿಕೆ ಈಡೇರುವ ನಿರೀಕ್ಷೆ ಇದೆ. ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಸ್ಥಳ ವೀಕ್ಷಣೆ ಮಾಡಿ, ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲಾಗಿದೆ.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಎಂ. ಆರ್. ರವಿ ನೇತೃತ್ವದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸ್ಥಳ ಪರಿಶೀಲನೆಗೆ ಸಚಿವ ವಿ. ಸೋಮಣ್ಣ ಸೂಚನೆ ನೀಡಿದ್ದರು.
ಸಭೆಯಲ್ಲಿ ಮಾತನಾಡಿದ ಎಂ. ಆರ್. ರವಿ, "ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಕುರಿತಂತೆ ಕಾರ್ಯ ಸಾಧ್ಯತೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ" ಎಂದು ಹೇಳಿದರು. ಈ ವರದಿ ಸಲ್ಲಿಕೆಯಾದ ಬಳಿಕ ಸರ್ಕಾರ ವಿಮಾನ ನಿಲ್ದಾಣ ನಿರ್ಮಾಣ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಹೊಸದಾಗಿ ವಿಮಾನ ನಿಲ್ದಾಣ ಸ್ಥಾಪಿಸುವ ಕುರಿತು ಬೆಂಗಳೂರಿನಲ್ಲಿ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ್ದರು. ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ವರದಿ ನೀಡುವಂತೆ ಸೂಚನೆ ನೀಡಿದ್ದರು.

ವಿಮಾನ ನಿಲ್ದಾಣ ನಿರ್ಮಾಣ ಸ್ಥಳ ವೀಕ್ಷಣೆ
ಕೊಪ್ಪಳ ಜಿಲ್ಲೆಯಲ್ಲಿ ಹೊಸದಾಗಿ ವಿಮಾನ ನಿಲ್ದಾಣ ನಿರ್ಮಿಸಲು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೆಶಕರು ಎಂ. ಆರ್. ರವಿ ತಂಡದ ಜೊತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಸಂಸದ ಸಂಗಣ್ಣ ಕರಡಿ, ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು, ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರಡ್ಡಿ ಹಾಗೂ ಜಿಲ್ಲೆಯ ಮುಖಂಡರುಗಳು ಸ್ಥಳ ಪರಿಶೀಲನೆ ನಡೆಸಿದರು.
ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಂಸದ ಕರಡಿ ಸಂಗಣ್ಣ, "ಖಾಸಗಿ ಒಡೆತನದಲ್ಲಿರುವ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಿ ಜಂಟಿಯಾಗಿ ಬಳಸಿಕೋಳ್ಳುವ ಸರ್ಕಾರದ ಯೋಚನೆಗೆ ಸಕಾರತ್ಮಾಕ ಅಭಿಪ್ರಾಯ ಬರದ ಕಾರಣ ಹೊಸ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಯೋಚಿಸಲಾಗುತ್ತಿದೆ" ಎಂದರು.

ಮೂರು ಕಡೆ ಭೂಮಿ ಪರಿಶೀಲನೆ
ಕೊಪ್ಪಳ ಜಿಲ್ಲೆಯ ಕುಷ್ಟಗಿ ರಸ್ತೆಯ ಕೊಪ್ಪಳ ತಾಲ್ಲೂಕಿನ ಹಟ್ಟಿ ಗ್ರಾಮದ 316-36 ಎಕರೆ, ಕಲಕೇರಿ ಗ್ರಾಮ 168-27 ಎಕರೆ, ತಾಳಕನಕಾಪೂರದ 183-27 ಎಕರೆ ಸೇರಿ ಒಟ್ಟು 669-10 ಎಕರೆ ಮತ್ತು ಹುಬ್ಬಳ್ಳಿ ರಸ್ತೆಯ ಲಕುಮಪುರ, ವದಗನಾಳ ಗ್ರಾಮದ ಸುಮಾರು 400 ಎಕರೆ ಪ್ರದೇಶವನ್ನು ಅಧಿಕಾರಿಗಳ ತಂಡ ವೀಕ್ಷಿಸಿತು. ಭೂಮಿಯ ಮಳೆಯ ವರದಿ, ಗಾಳಿಯ ವೇಗದ ವರದಿ, ಅರಣ್ಯದ ಮಾಹಿತಿ, ಗ್ರಾಮ ದಿಕ್ಕಿನ ವಿವರದ ವರದಿ, ಮುಂತಾದ ವಿವರಗಳನ್ನು ಒಳಗೊಂಡ ವರದಿಯ ಅವಶ್ಯಕತೆ ಎಂದು ಜಿಲ್ಲಾಧಿಕಾರಿಗಳಿಗೆ ಅಧಿಕಾರಿಗಳ ತಂಡ ತಿಳಿಸಿತು.

ತಾಂತ್ರಿಕ ತಂಡದ ಮನವಿ
ತಾಂತ್ರಿಕ ತಂಡದ ಮನವಿಗೆ ಎರಡು-ಮೂರು ದಿನಗಳ ಕಾಲವಕಾಶದಲ್ಲಿ ವರದಿ ನೀಡಲಾಗುವದು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು. ಭೂಮಿಯ ಮಳೆಯ ವರದಿ, ಗಾಳಿಯ ವೇಗದ ವರದಿ, ಅರಣ್ಯದ ಮಾಹಿತಿ, ಗ್ರಾಮ ದಿಕ್ಕಿನ ವಿವರದ ವರದಿ, ಮುಂತಾದ ಎಲ್ಲಾ ಅಂಶಗಳ ವರದಿಗಳನ್ನು ಅಧ್ಯಯನ ಮಾಡಿ ಮತ್ತು ವಿಮಾನ ನಿಲ್ದಾಣಕ್ಕೆ ಅವಶ್ಯವಿರುವ 2.5 ಕಿಲೋಮಿಟರ್ ಉದ್ದದ ಹಾಗೂ 500 ಮೀಟರ್ ಅಗಲದ ರನ್ ವೇ ರಚಿಸಲು ಅನುವು ಆಗುವ ಮತ್ತು ಗಾಳಿಯ ವೇಗವು ಗಂಟೆಗೆ 100 ಕಿಲೋ ಮೀಟರ್ಗಿಂತ ಕಡಿಮೆ ಇರಬೇಕು ಹಾಗೂ ಸಮತಟ್ಟಾದ ಭೂಮಿಯು ಅವಶ್ಯವಿರುವ ಕಾರಣ ಕಾರ್ಯ ಸಾಧ್ಯತೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುದು ಎಂದು ಅಧಿಕಾರಿಗಳ ತಂಡ ಸಭೆಯಲ್ಲಿ ವಿವರ ನೀಡಿತು.

ಪ್ರವಾಸೋದ್ಯಮಕ್ಕೆ ಸಹಕಾರಿ
ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮ ಅಂಜಿನಾದ್ರಿ ಪರ್ವತ, ಆನೆಗೊಂದಿ, ಕುಕುನೂರ, ಕಬ್ಬರಗಿ ಜಲಪಾತ ಹಾಗೂ ಕೈಗಾರಿಕೆ, ರಸ್ತೆ, ಜನ ಜೀವನ ಮತ್ತು ಹೊಸ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಜಿಲ್ಲೆಯನ್ನು ಆರ್ಥಿಕವಾಗಿ ಸಧೃಡಗೊಳಿಸಲು ವಿಮಾನ ನಿಲ್ದಾಣವು ಸಹಕಾರಿಯಾಗಲಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು. ಈ ಮೂಲಕ ಹೊಸ ವಿಮಾನ ನಿಲ್ದಾಣ ಸ್ಥಾಪನೆಗಾಗಿ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಗೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಲು ತೀರ್ಮಾನಿಸಲಾಯಿತು.












Click it and Unblock the Notifications