ನೀತಿ ಸಂಹಿತೆ ಜಾರಿಯ ಗಂಟೆಯ ಮುನ್ನ ದಿನಗೂಲಿ ವೇತನ ಹೆಚ್ಚಳ ಘೋಷಿಸಿದ ಮಮತಾ ಬ್ಯಾನರ್ಜಿ
ಕೋಲ್ಕತಾ, ಫೆಬ್ರವರಿ 26: ವಿಧಾನಸಭೆ ಚುನಾವಣೆ ಸನ್ನಿಹಿತವಾಗಿರುವ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜನಸಾಮಾನ್ಯರಿಗಾಗಿ ವಿಶೇಷ ಘೋಷಣೆ ಮಾಡಿದ್ದಾರೆ. ಕೇಂದ್ರ ಚುನಾವಣಾ ಆಯೋಗವು ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸುವ ಕೆಲವೇ ಸಮಯಕ್ಕೆ ಮುನ್ನ ಅವರು ದಿನಗೂಲಿ ಕಾರ್ಮಿಕರ ವೇತನದಲ್ಲಿ ಏರಿಕೆ ಮಾಡಿದ್ದಾರೆ.
ಚುನಾವಣಾ ಆಯೋಗವು ವಿಧಾನಸಭೆ ಚುನಾವಣೆ ಘೋಷಿಸುತ್ತಿದ್ದಂತೆಯೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ. ಇದರ ಬಳಿಕ ರಾಜ್ಯದಲ್ಲಿ ಯಾವುದೇ ಹೊಸ ನೀತಿಗಳು, ಅಭಿವೃದ್ಧಿ ಕಾರ್ಯಗಳನ್ನು ಘೋಷಣೆ ಮಾಡುವಂತಿಲ್ಲ. ಆದರೆ ಕೆಲವು ಗಂಟೆಗಳ ಮುನ್ನವಷ್ಟೇ ಮಮತಾ ರಾಜ್ಯದ ದಿನಗೂಲಿ ನೌಕರರಿಗೆ ಹೊಸ ಕೊಡುಗೆ ಪ್ರಕಟಿಸಿದ್ದಾರೆ.
ಪಶ್ಚಿಮ ಬಂಗಾಳ ನಗರ ಉದ್ಯೋಗ ಯೋಜನೆಯ ಪ್ರಕಾರ ಇದುವರೆಗೂ ಪಶ್ಚಿಮ ಬಂಗಾಳದ ಕೌಶಲರಹಿತ ಕಾರ್ಮಿಕರು ದಿನಕ್ಕೆ 144 ರೂ. ವೇತನ ಪಡೆಯುತ್ತಿದ್ದರು. ಅದು ಇನ್ನು 202 ರೂಗಳಿಗೆ ಏರಿಕೆಯಾಗಲಿದೆ.

ಅಲ್ಪಕೌಶಲ ಕಾರ್ಮಿಕರ ವೇತನವು 172 ರೂ ದಿಂದ 303 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಕುಶಲ ಕಾರ್ಮಿಕರಿಗೆ (ಹೊಸ ವಿಭಾಗ) 404 ರೂ ವೇತನ ನಿಗದಿಪಡಿಸಲಾಗಿದೆ.
ಈ ಘೋಷಣೆಯಿಂದ 40,500 ಕೌಶಲರಹಿತ, 8,000 ಅಲ್ಪ ಕೌಶಲದ ಮತ್ತು 8000 ಕುಶಲ ಕಾರ್ಮಿಕರು ಸೇರಿದಂತೆ 56,500 ಕಾರ್ಮಿಕರಿಗೆ ಪ್ರಯೋಜನವಾಗಲಿದೆ. ಈ ಕೂಲಿಯು ಗ್ರಾಮೀಣ ಕಾರ್ಮಿಕರಿಗೆ ಹೆಚ್ಚಿಸಲಾದ ವೇತನಕ್ಕೆ (ಎಂನರೇಗಾ) ಸರಿಸಮನಾಗಿದೆ. ಈ ಹೆಜ್ಜೆಗೆ 21 ಮತ್ತು 22ನೇ ಸಾಲಿನ ಹಣಕಾಸು ವರ್ಷದ ಬಜೆಟ್ನಲ್ಲಿ ಅವಕಾಶ ನೀಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications