ಪಕ್ಷ ತೊರೆಯುತ್ತಿರುವ ನಾಯಕರು; ತೃಣಮೂಲ ಕಾಂಗ್ರೆಸ್ಗೆ ಭಾರೀ ಸವಾಲು
ಕೋಲ್ಕತ್ತಾ, ಜನವರಿ 02: ಒಬ್ಬೊಬ್ಬರಾಗಿಯೇ ಪಕ್ಷ ತೊರೆಯುತ್ತಿರುವುದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೆ ಈ ಬಾರಿ ಹಿನ್ನಡೆ ತರುವ ಸೂಚನೆ ನೀಡಿದೆ. ಪಕ್ಷದ ಎರಡು ಪ್ರತಿಷ್ಠಿತ ಕಣವಾದ ನಂದಿಗ್ರಾಮ ಹಾಗೂ ಸಿಂಗೂರ್ ನಲ್ಲಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದ್ದು, ಈ ಮಧ್ಯೆ ಹೊಸ ವರ್ಷ, ಶುಕ್ರವಾರದಂದು ತನ್ನ ಸಂಸ್ಥಾಪನಾ ದಿನವನ್ನು ಪಕ್ಷ ಆಚರಿಸಿಕೊಂಡಿತು.
ಕಾಂತಿ ನಗರಸಭೆಯ ಮಾಜಿ ಅಧ್ಯಕ್ಷ, ಸುವೇಂದು ಅಧಿಕಾರಿ ಸಹೋದರ ಸೌಮೇಂದು ಅಧಿಕಾರಿ ಶುಕ್ರವಾರ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನಂದಿಗ್ರಾಮದಿಂದ ಗೆದ್ದಿದ್ದ ಮಾಜಿ ಶಾಸಕ ಸುವೇಂದು ಕೂಡ ಡಿಸೆಂಬರ್ 16ರಂದೇ ಬಿಜೆಪಿ ಸೇರಿದ್ದಾರೆ. ಈ ನಡುವೆ ತನ್ನದೇ ಕ್ಷೇತ್ರದಲ್ಲಿ ಟಿಎಂಸಿ ಸಂಸ್ಥಾಪನಾ ದಿನದಂದು ಸಿಂಗೂರ್ ತೃಣಮೂಲ ಶಾಸಕ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಈ ಎಲ್ಲಾ ಬೆಳವಣಿಗೆಗಳು ತೃಣಮೂಲ ಕಾಂಗ್ರೆಸ್ ಗೆ ಹಿನ್ನಡೆಯ ಸೂಚನೆ ನೀಡಿದೆ. ಮುಂದೆ ಓದಿ...

ಪ್ರತಿಷ್ಠೆಯ ಕಣವಾಗಿದ್ದ ಕ್ಷೇತ್ರಗಳು
ತೃಣಮೂಲ ಕಾಂಗ್ರೆಸ್ ಗೆ ನಂದಿಗ್ರಾಮ ಹಾಗೂ ಸಿಂಗೂರ್ ಪ್ರತಿಷ್ಠೆಯ ಕಣವಾಗಿತ್ತು. 2006-08ರ ಅವಧಿಯಲ್ಲಿ ಈ ಎರಡು ಪ್ರದೇಶಗಳಲ್ಲಿ ಭೂಸ್ವಾಧೀನದ ವಿರುದ್ಧ ನಡೆದ ಬೃಹತ್ ಚಳವಳಿಗಳು ಮಮತಾ ಬ್ಯಾನರ್ಜಿ ರಾಜಕೀಯ ಪುನರುತ್ಥಾನಕ್ಕೆ ಕಾರಣವಾಗಿದ್ದವು. ಈ ಹಿನ್ನೆಲೆಯಲ್ಲಿ ಎರಡು ಕ್ಷೇತ್ರಗಳು ಪಕ್ಷಕ್ಕೆ ಪ್ರಮುಖವಾಗಿದ್ದು, ಈ ಕ್ಷೇತ್ರಗಳಲ್ಲೇ ಹಿನ್ನಡೆಯಾಗುತ್ತಿದೆ.

"ಅಷ್ಟೂ ವರ್ಷಗಳಲ್ಲಿ ಸಂಘರ್ಷ ಕಂಡಿದ್ದೇವೆ"
"ಪಶ್ಚಿಮ ಬಂಗಾಳವನ್ನು ಪ್ರತಿ ದಿನವೂ ಬಲಪಡಿಸಲು ನಿರಂತರ ಹೋರಾಟದಲ್ಲಿ ನಮ್ಮೊಂದಿಗೆ ನಿಂತಿರುವ ಕಾರ್ಯಕರ್ತರಿಗೆ ಟಿಎಂಸಿ ಸಂಸ್ಥಾಪನಾ ದಿನದಂದು ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿಯೂ ತೃಣಮೂಲ ಕುಟುಂಬ ಇದೇ ಸಂಕಲ್ಪವನ್ನು ಮುಂದುವರೆಸುತ್ತದೆ. ಇಂದಿಗೆ ಪಕ್ಷಕ್ಕೆ 23 ವರ್ಷಗಳು ಆಗಿದ್ದು, ಇಷ್ಟು ವರ್ಷಗಳ ಪಯಣವನ್ನು ಹಿಂದಿರುಗಿ ನೋಡಿದರೆ, ಈ ಅಷ್ಟೂ ವರ್ಷಗಳಲ್ಲಿ ಸಾಕಷ್ಟು ಸಂಘರ್ಷಗಳನ್ನು ಪಕ್ಷ ಕಂಡಿದೆ. ಜನರ ಒಳಿತಿನ ಉದ್ದೇಶಕ್ಕೆ ಬದ್ಧರಾಗಿ ನಮ್ಮ ಗುರಿಗಳನ್ನು ಸಾಧಿಸಿದ್ದೇವೆ" ಎಂದು ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಸಹೋದರ ಬಿಜೆಪಿಗೆ ಸೇರುವ ಸುಳಿವು ನೀಡಿದ್ದ ಸುವೇಂದು
ವಾರದ ಹಿಂದಷ್ಟೆ ಸುವೇಂದು ಅಧಿಕಾರಿ, ತಮ್ಮ ಕುಟುಂಬ ಸದಸ್ಯರೊಬ್ಬರು ಕೇಸರಿ ಪಕ್ಷ ಸೇರುವುದಾಗಿ ಸುಳಿವು ನೀಡಿದ್ದರು. ನಮ್ಮ ಮನೆಯಲ್ಲಿ ಕಮಲ ಅರಳುತ್ತದೆ. ರಾಮನವಮಿ, ಬಸಂತಿ ಪೂಜೆ ಬರುವವರೆಗೂ ಕಾಯಿರಿ ಎಂದು ಡಿ.29ರಂದು ಸುವೇಂದು ಹೇಳಿದ್ದರು. ಆ ಹೇಳಿಕೆ ಕೊಟ್ಟ ಮೂರು ದಿನಗಳ ನಂತರ ಸೌಮೇಂದು ಅಧಿಕಾರಿ ಬಿಜೆಪಿ ಸೇರಿದರು. ಪೂರ್ವ ಮಿಡ್ನಾಪುರದ ಕಾಂತಿಯಲ್ಲಿ ಸುವೇಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈಚೆಗಷ್ಟೆ ನಗರಸಭೆ ಮುಖ್ಯಸ್ಥನ ಸ್ಥಾನದಿಂದ ಸೌಮೇಂದುವನ್ನು ತೆಗೆಯಲಾಗಿದ್ದು, ಈ ವಿರುದ್ಧ ಹೈಕೋರ್ಟ್ ಗೆ ಹೋಗಿದ್ದರು.

"ಪಕ್ಷ ಬಿಡುವವರೆಲ್ಲಾ ಬಿಡಲಿ"
"ಪಕ್ಷವನ್ನು ಯಾರು ತೊರೆಯಲು ಬಯಸುತ್ತಾರೋ ಅವರು ಹೋಗಬಹುದು. ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಾವು ಮತ್ತೆ ಚುನಾವಣೆಯಲ್ಲಿ ಗೆಲ್ಲುತ್ತೇವೆ" ಎಂದು ಟಿಎಂಸಿ ಹಿರಿಯ ಮುಖಂಡ ಹಾಗೂ ಪೂರ್ವ ಮಿಡ್ನಾಪುರ ಪರಿಷತ್ ಉಪಾಧ್ಯಕ್ಷ ಶೇಖ್ ಸುಫಿಯಾನ್ ಹೇಳಿದ್ದಾರೆ. ಈ ನಡುವೆ ಸಿಂಗೂರ್ ಟಿಎಂಸಿ ಹಿರಿಯ ಮುಖಂಡ ರವೀಂದ್ರನಾಥ್ ಭಟ್ಟಾಚಾರ್ಯ ಶುಕ್ರವಾರ ಪಕ್ಷದ ಕಾರ್ಯಕ್ರಮಕ್ಕೂ ಹಾಜರಾಗಿರಲಿಲ್ಲ.
2019ರ ಲೋಕಸಭಾ ಚುನಾವಣೆಯಲ್ಲಿ ಸಿಂಗೂರ್ ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿ ಮೊದಲ ಬಾರಿ ಟಿಎಂಸಿ ಸಿಂಗೂರ್ ನಲ್ಲಿ ಹಿನ್ನಡೆ ಕಂಡಿತ್ತು. 42 ಸ್ಥಾನಗಳಲ್ಲಿ 18 ಸ್ಥಾನವನ್ನು ಪಡೆದುಕೊಂಡಿದ್ದ ಬಿಜೆಪಿ ಇದರಿಂದ ಉತ್ತೇಜಿತವಾಗಿ 294 ಸ್ಥಾನಗಳಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ.










Click it and Unblock the Notifications