ಮಮತಾ ಬ್ಯಾನರ್ಜಿ ಫೋನ್ ಟ್ಯಾಪ್ ಆರೋಪ; ಚುನಾವಣಾ ಆಯೋಗಕ್ಕೆ ಟಿಎಂಸಿ ಪತ್ರ
ಪಶ್ಚಿಮ ಬಂಗಾಳ, ಏಪ್ರಿಲ್ 17: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಫೋನ್ ಟ್ಯಾಪ್ ಮಾಡಿರುವ ಕುರಿತು ಚುನಾವಣಾ ಆಯೋಗ ಬಿಜೆಪಿ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ತೃಣಮೂಲ ಕಾಂಗ್ರೆಸ್ ಆಗ್ರಹಿಸಿದೆ.
ಸಿಎಂ ಮಮತಾ ಬ್ಯಾನರ್ಜಿ ಮಾತನಾಡಿದ್ದು ಎನ್ನಲಾದ ಆಡಿಯೋ ಕ್ಲಿಪ್ ಅನ್ನು ಲಾಕೆಟ್ ಚಟರ್ಜಿ ಒಳಗೊಂಡಂತೆ ಬಿಜೆಪಿಯ ಕೆಲವು ಸದಸ್ಯರು ಹರಿಬಿಟ್ಟಿದ್ದ ಸಂಗತಿ ಕುರಿತು ಚುನಾವಣಾ ಆಯೋಗಕ್ಕೆ ಪತ್ರದ ಮುಖಾಂತರ ಟಿಎಂಸಿ ದೂರಿದೆ.
ಶುಕ್ರವಾರ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಕಾರ್ಯಕರ್ತ ಪಾರ್ಥ ಪ್ರರ್ಥಿಮ್ ರೇ ಅವರ ನಡುವಿನ ಸಂಭಾಷಣೆಯದ್ದು ಎನ್ನಲಾದ ಆಡಿಯೋ ಕ್ಲಿಪ್ ಬಿಡುಗಡೆಯಾಗಿತ್ತು. ಏಪ್ರಿಲ್ 10ರಂದು ಕೂಚ್ ಬೇಹರ್ನಲ್ಲಿ ಭದ್ರತಾ ಪಡೆಗಳ ಗುಂಡಿನ ದಾಳಿಯಿಂದ ಮೃತಪಟ್ಟವರ ಶವಗಳೊಂದಿಗೆ ಚುನಾವಣಾ ಸಮಾವೇಶ ನಡೆಸುವ ಕುರಿತ ಸಂಭಾಷಣೆ ಇದರಲ್ಲಿತ್ತು ಎನ್ನಲಾಗಿದೆ.

"ಹೀಗೆ ಅಕ್ರಮವಾಗಿ ಫೋನ್ ಟ್ಯಾಪ್ ಮಾಡುವುದು ಐಪಿಸಿ ಹಾಗೂ ಐಟಿ ಸೆಕ್ಷನ್ ಅಡಿಯಲ್ಲಿ ಅಪರಾಧ. ಇದಕ್ಕೆ ಕಾರಣರಾದವರನ್ನು ರಾಜ್ಯ ಸರ್ಕಾರ ಪತ್ತೆಹಚ್ಚುತ್ತದೆ. ಚುನಾವಣಾ ಆಯೋಗವೂ ಕ್ರಮ ಕೈಗೊಳ್ಳಬೇಕಿದೆ" ಎಂದು ಟಿಎಂಸಿ ಪತ್ರದಲ್ಲಿ ಉಲ್ಲೇಖಿಸಿದೆ.
ಶನಿವಾರ ಬೆಳಿಗ್ಗೆ ಈ ಕುರಿತು ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದು, "ಇದರಲ್ಲಿ ಕೇಂದ್ರ ಪಡೆ ಭಾಗಿಯಾಗಿದೆ. ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು. ಇದರಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದೂ ತಿಳಿದಿದೆ" ಎಂದು ಹೇಳಿದ್ದರು.












Click it and Unblock the Notifications