ಶಾರದಾ ಹಗರಣ: ಸಿಬಿಐ ವಿಚಾರಣೆಗೆ ಹಾಜರಾಗದ ರಾಜೀವ್ ಕುಮಾರ್
ಕೋಲ್ಕತಾ, ಸೆಪ್ಟೆಂಬರ್ 14: ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಿಬಿಐನಿಂದ ಸಮನ್ಸ್ ಪಡೆದಿರುವ ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರು ಶನಿವಾರ ವಿಚಾರಣೆಗೆ ಹಾಜರಾಗಲಿಲ್ಲ.
ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಆರೋಪಿಯಾಗಿರುವ ರಾಜೀವ್ ಕುಮಾರ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಶುಕ್ರವಾರ ಸಮನ್ಸ್ ನೀಡಿತ್ತು. ಈ ಪ್ರಕರಣದಲ್ಲಿ ರಾಜೀವ್ ಕುಮಾರ್ ಅವರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಲಾಗಿತ್ತು. ಅದನ್ನು ಕಲ್ಕತಾ ಹೈಕೋರ್ಟ್ ಹಿಂದಕ್ಕೆ ಪಡೆದುಕೊಂಡಿತ್ತು. ಅದರ ಬೆನ್ನಲ್ಲೇ ರಾಜೀವ್ ಕುಮಾರ್ ಅವರಿಗೆ ಶನಿವಾರ ಬೆಳಿಗ್ಗೆ 10 ಗಂಟೆಗೆ ಹಾಜರಾಗುವಂತೆ ಸಿಬಿಐ ಸೂಚಿಸಿತ್ತು.

ಈ ಹಗರಣ ಬೆಳಕಿಗೆ ಬಂದ ಸಂದರ್ಭದಲ್ಲಿ ತನಿಖೆ ನಡೆಸಲು ಪಶ್ಚಿಮ ಬಂಗಾಳ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ದಳದಲ್ಲಿ (ಎಸ್ಐಟಿ) ರಾಜೀವ್ ಕುಮಾರ್ ಇದ್ದರು. ಬಳಿಕ ಈ ಪ್ರಕರಣವನ್ನು 2014ರಲ್ಲಿ ಸಿಬಿಐಗೆ ಒಪ್ಪಿಸಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ರಾಜೀವ್ ಕುಮಾರ್ ಅವರು ವಿಚಾರಣೆಗೆ ಗೈರಾಗಿರುವುದರಿಂದ ಮುಂದಿನ ಕಾನೂನು ಕ್ರಮದ ಬಗ್ಗೆ ಚರ್ಚಿಸಲು ಸಿಬಿಐ ಅಧಿಕಾರಿಗಳ ತಂಡವು ಸಂಸ್ಥೆಯ ವಕೀಲ ವೈ.ಜೆ. ದಾಸ್ತುರ್ ಅವರ ನಿವಾಸಕ್ಕೆ ತೆರಳಿತ್ತು.
ಮಾರ್ಚ್ನಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಸಿಬಿಐ ಸಂಗ್ರಹಿಸಿರುವ ಸಾಕ್ಷ್ಯಗಳು ಬಹಳ ಗಂಭೀರವಾಗಿವೆ. ರಾಜೀವ್ ಕುಮಾರ್ ಅವರ ವಿರುದ್ಧ ಕ್ರಮಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸಿಬಿಐಗೆ ಸೂಚಿಸಿತ್ತು.
ರಾಜೀವ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಲು ಫೆಬ್ರವರಿಯಲ್ಲಿ ಕೋಲ್ಕತ್ತಾದ ಅವರ ನಿವಾಸಕ್ಕೆ ತೆರಳಿದ್ದ ಸಿಬಿಐ ತಂಡವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೂಚನೆ ಮೇರೆಗೆ ಬಂಧಿಸಲಾಗಿತ್ತು. ಇದು ತೀವ್ರ ವಿವಾದ ಸೃಷ್ಟಿಸಿತ್ತು.












Click it and Unblock the Notifications