ಜ. 19ರ ವಿರೋಧ ಪಕ್ಷಗಳ ಮಹಾ ಸಭೆ ಬಿಜೆಪಿ ಪಾಲಿನ ಮರಣ ಮೃದಂಗ: ಮಮತಾ
ಕೋಲ್ಕತ್ತಾ, ಜನವರಿ 17: ಇದೇ ತಿಂಗಳ 19ನೇ ತಾರೀಕು ಕೋಲ್ಕತ್ತಾದಲ್ಲಿ ನಡೆಯಲಿರುವ ವಿರೋಧ ಪಕ್ಷಗಳು ಬೃಹತ್ ಸಭೆಯು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ 'ಮರಣ ಮೃದಂಗ' ಆಗಲಿದೆ ಮತ್ತು ಪ್ರಾದೇಶಿಕ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪ್ರಜಾಸತ್ತಾತ್ಮಕ ಪಕ್ಷಗಳು, ಅದು ಪ್ರಾದೇಶಿಕ ಪಕ್ಷಗಳು ಮುಂದಿನ ಚುನಾವಣೆ ನಂತರ ನಿರ್ಣಾಯಕ ಆಗುತ್ತವೆ ಎಂದು ಕೋಲ್ಕತ್ತಾದಲ್ಲಿ ಹೇಳಿದ್ದಾರೆ. ತೃಣಮೂಲ್ ಕಾಂಗ್ರೆಸ್ ಪಕ್ಷವು ಜನವರಿ 19ರಂದು ಬೃಹತ್ ಸಭೆ ಆಯೋಜಿಸಿದ್ದು, ಅದರಲ್ಲಿ ದೇಶದಾದ್ಯಂತ ಇರುವ ಪ್ರಾದೇಶಿಕ ಪಕ್ಷಗಳ ನಾಯಕರು ಪಾಲ್ಗೊಳ್ಳಲಿದ್ದಾರೆ.
ಮೋದಿ ನೇತೃತ್ವದ ಬಿಜೆಪಿ ಬಗ್ಗೆ ಅಸಮಾಧಾನ ಇರುವ ಅರುಣ್ ಶೌರಿ, ಯಶ್ವಂತ್ ಸಿನ್ಹಾ ಹಾಗೂ ಶತ್ರುಘ್ನ ಸಿನ್ಹಾ ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳುವುದು ಖಾತ್ರಿಯಾಗಿದೆ. ಬಿಎಸ್ ಪಿ ಪರವಾಗಿ ಆ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಸತೀಶ್ ಚಂದ್ರ ಮಿಶ್ರಾ ಪಾಲ್ಗೊಳ್ಳಲಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಮತಾ ಬ್ಯಾನರ್ಜಿ, ಈ ಸಭೆಯು ಬಿಜೆಪಿ ಪಾಲಿಗೆ ಮರಣ ಮೃದಂಗ ಆಗಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಖಂಡಿತವಾಗಿಯೂ ಬಿಜೆಪಿ ನೂರಿಪ್ಪತ್ತೈದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸುವುದಿಲ್ಲ ಎಂದಿದ್ದಾರೆ. ಇದೇ ವೇಳೆ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಸಭೆಗಾಗಿ ನಡೆಯುತ್ತಿರುವ ತಯಾರಿಯನ್ನು ಅವರು ವೀಕ್ಷಿಸಿದರು.
ಅಖಿಲೇಶ್ ಯಾದವ್, ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಎಚ್.ಡಿ.ದೇವೇಗೌಡ-ಕುಮಾರಸ್ವಾಮಿ, ಅರವಿಂದ್ ಕೇಜ್ರಿವಾಲ್, ಎಂ.ಕೆ.ಸ್ಟಾಲಿನ್, ಅಜಿತ್ ಸಿಂಗ್, ಶರದ್ ಪವಾರ್, ತೆಜಸ್ವಿ ಯಾದವ್ ಮತ್ತಿತರರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇನ್ನು ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ಹಾಜರಿರುತ್ತಾರೆ.
ಸಿಪಿಎಂ ನಾಯಕ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕೂಡ ಆಹ್ವಾನಿಸಿದ್ದಾರೆ. ಆದರೆ ಅವರು ಭಾಗವಹಿಸುತ್ತಾರಾ ಅಥವಾ ಇಲ್ಲವಾ ಎಂಬುದು ಖಾತ್ರಿ ಆಗಿಲ್ಲ.












Click it and Unblock the Notifications