ಬಿಜೆಪಿಯ ಮುಕುಲ್ ರಾಯ್ ''ಘರ್ ವಾಪಾಸಿ''? - ಸುಳಿವು ನೀಡಿದ ಟಿಎಂಸಿ ಸಂಸದ
ಕೋಲ್ಕತ್ತಾ, ಜೂ. 10: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಬಿಜೆಪಿಯ ಮುಕುಲ್ ರಾಯ್ ತೃಣಮೂಲ ಕಾಂಗ್ರೆಸ್ಗೆ ಮರಳಲಿದ್ದಾರೆಯೇ ಎಂಬುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಮುಖಂಡ ಮುಕುಲ್ ರಾಯ್ ಪತ್ನಿ ಆಸ್ಪತ್ರೆಯಲ್ಲಿದ್ದ ಸಂದರ್ಭ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಆಸ್ಪತ್ರೆಗೆ ಭೇಟಿ ನೀಡಿರುವ ವಿಚಾರ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿತ್ತು. ಟಿಎಂಸಿ 'ಘರ್ ವಾಪಾಸಿ'ಯಲ್ಲಿ ಮುಕುಲ್ ರಾಯ್ ಕೂಡಾ ಒಬ್ಬರಾಗಲಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಕೋಲ್ಕತ್ತಾದಲ್ಲಿ ನಡೆದ ಬಿಜೆಪಿ ಸಭೆಗೆ ಮುಕುಲ್ ರಾಯ್ ಗೈರುಹಾಜರಾಗಿದ್ದು ಚರ್ಚೆ ಇನ್ನಷ್ಟು ತೀವ್ರವಾಗಲು ಕಾರಣವಾಗಿತ್ತು. ಅಷ್ಟೇ ಅಲ್ಲದೇ ಈ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮುಕುಲ್ ರಾಯ್ ಪತ್ನಿ ಆಸ್ಪತ್ರೆಯಲ್ಲಿದ್ದ ಸಂದರ್ಭ ಆಸ್ಪತ್ರೆಗೆ ಭೇಟಿ ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮುಕುಲ್ ರಾಯ್ಗೆ ಕರೆ ಮಾಡಿ ಮಾತನಾಡಿದ್ದು ಘರ್ ವಾಪಾಸಿಯ ಆತಂಕ ಬಿಜೆಪಿಯಲ್ಲಿ ಮನೆಮಾಡಿದೆಯೇ ಎಂಬ ಪ್ರಶ್ನೆ ಸೃಷ್ಟಿಗೆ ಕಾರಣವಾಗಿದೆ.
ಇವೆಲ್ಲ ಬೆಳವಣಿಗೆಯ ನಡುವೆ ಟಿಎಂಸಿ ಘರ್ ವಾಪಾಸಿ ಬಗ್ಗೆ ಮುಕುಲ್ ರಾಯ್ ಮೌನವಾಗಿದ್ದರೂ ಬುಧವಾರ ಸಂಜೆ ತೃಣಮೂಲ ಕಾಂಗ್ರೆಸ್ ಸಂಸದ ಸೌಗತಾ ರಾಯ್ ತನ್ನ ಹೇಳಿಕೆಯ ಮೂಲಕ ರಾಯ್ ಟಿಎಂಸಿಗೆ ಹಿಂದಿರುಗುವ ಸ್ಪಷ್ಟವಾದ ಸುಳಿವನ್ನು ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿದ ಸೌಗತಾ ರಾಯ್, "ಅಭಿಷೇಕ್ ಬ್ಯಾನರ್ಜಿಯೊಂದಿಗೆ ಅನೇಕ ಮಂದಿ ಈಗ ಸಂಪರ್ಕದಲ್ಲಿದ್ದು ಪಕ್ಷಕ್ಕೆ ಮರಳುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಆದರೆ ಟಿಎಂಸಿ ತೊರೆದಿರುವವರು ಅಗತ್ಯವಿದ್ದ ಸಂದರ್ಭದಲ್ಲಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.
ಅಷ್ಟೆ ಅಲ್ಲದೇ "ಈ ವಿಚಾರದಲ್ಲಿ ಅಂತಿಮ ನಿರ್ಧಾರವನ್ನು ಮಮತಾ ದೀದಿ ತೆಗೆದುಕೊಳ್ಳುತ್ತಾರೆ. ಆದರೆ ನಾವು ಘರ್ ವಾಪಾಸಿ ಆಗುವವರನ್ನು ಸಾಫ್ಟ್ಲೈನರ್ಗಳು ಮತ್ತು ಹಾರ್ಡ್ಲೈನರ್ಗಳು ಎಂದು ಎರಡು ಭಾಗಗಳಾಗಿ ವಿಂಗಡಿಸಬೇಕಾಗಿದೆ" ಎಂದು ಅಭಿಪ್ರಾಯಿಸಿದ್ದಾರೆ. ಹಾಗೆಯೇ ''ಈ ಸಾಫ್ಟ್ಲೈನರ್ಗಳು ಪಕ್ಷವನ್ನು ತೊರೆದರೂ ದೀದಿಗೆ ಅವಮಾನ ಮಾಡದವರು ಹಾಗೂ ಹಾರ್ಡ್ಲೈನರ್ಗಳು ಪಕ್ಷ ತೊರೆದದ್ದು ಮಾತ್ರವಲ್ಲದೇ ದೀದಿಗೆ ಕಠಿಣವಾಗಿ, ಸಾರ್ವಜನಿಕವಾಗಿ ಅವಮಾನಿಸಿದವರು'' ಎಂದು ಸೌಗತಾ ರಾಯ್ ವಿವರಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲೇ "ಪಕ್ಷಾಂತರವಾದ ಸುವೆಂದು ಅಧಿಕಾರಿ ಮಮತಾ ಬ್ಯಾನರ್ಜಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಆದರೆ ಮುಕುಲ್ ರಾಯ್ ಮುಖ್ಯಮಂತ್ರಿ ಮಮತಾ ದೀದಿ ಬಗ್ಗೆ ಬಹಿರಂಗವಾಗಿ ಯಾವುದೇ ನಿಂದನೆ ಮಾಡಿಲ್ಲ" ಎಂದು ಹೇಳುವ ಮೂಲಕ ಮುಕುಲ್ ರಾಯ್ ಟಿಎಂಸಿಗೆ ಮರಳುವ ಸುಳಿವು ನೀಡಿದ್ದಾರೆ.
ಮಮತಾ ಬ್ಯಾನರ್ಜಿಗೆ ಆಪ್ತರಾಗಿದ್ದ ಮುಕುಲ್ ರಾಯ್ ಟಿಎಂಸಿ ತೊರೆದ ಸಂದರ್ಭ ಬಂಗಾಳ ರಾಜಕೀಯದಲ್ಲಿ ಭಾರೀ ಸಂಚಲನ ಉಂಟು ಮಾಡಿತ್ತು. ಮುಕುಲ್ ರಾಯ್ 2017 ರಲ್ಲಿ ಬಂಗಾಳದಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಸುಧಾರಿಸಲು ಬಹು ಮುಖ್ಯ ಪಾತ್ರ ವಹಿಸಿದ್ದಾರೆ. ಎರಡು ವರ್ಷಗಳ ನಂತರ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ, ತೃಣಮೂಲ ಕಾಂಗ್ರೆಸ್ಸಿಗೆ ಆಘಾತ ನೀಡಿದ, ಬಂಗಾಳದ 42 ಸ್ಥಾನಗಳಲ್ಲಿ 18 ಸ್ಥಾನಗಳಲ್ಲಿ ಬಿಜೆಪಿಯ ಗೆಲುವಿಗೆ ಮುಕುಲ್ ರಾಯ್ ಪ್ರಭಾವವೇ ಭಾಗಶಃ ಕಾರಣವಾಗಿದೆ.
(ಒನ್ಇಂಡಿಯಾ ಸುದ್ದಿ)











Click it and Unblock the Notifications