ದಪ್ಪ, ಕೊಳಕ ಮಹಿಳೆಯರಿಂದ ಲೈಂಗಿಕ ದೌರ್ಜನ್ಯದ ಆರೋಪ : ಅಭಿಜಿತ್
ಮುಂಬೈ, ಅಕ್ಟೋಬರ್ 11 : "#MeToo ಎಂದು ಹೇಳಿಕೊಂಡು ಹಿಂದೆಂದೊ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತಾಡುತ್ತಿರುವ ಹೆಚ್ಚಿನವರು ಕೊಳಕರು, ಅಸಹ್ಯ ಜನರು. ಅವರಲ್ಲಿ ಕೆಲವರು ದಪ್ಪಗಿದ್ದರೆ, ಕೆಲವರು ತೆಳ್ಳಗಿದ್ದಾರೆ. ಯಾರಿಗೂ ಗಮನ ಕೊಡುವ ಕಾರಣವೇ ಇಲ್ಲ."
ತಮ್ಮ ಮೇಲೆಯೂ ಪುರುಷರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು #MeToo, #TimesUp ಹ್ಯಾಶ್ ಟ್ಯಾಗ್ ಮೂಲಕ ತಮ್ಮ ನೋವನ್ನು ಸೋಷಿಯಲ್ ಮೀಡಿಯಾದಲ್ಲಿ ತೋಡಿಕೊಳ್ಳುತ್ತಿರುವ ಮಹಿಳೆಯರನ್ನು, ಖ್ಯಾತ ಹಿಂದಿ ಹಿನ್ನೆಲೆ ಗಾಯಕ ಅಭಿಜೀತ್ ಭಟ್ಟಾಚಾರ್ಯ ಅವರು ವರ್ಣಿಸಿರುವ ರೀತಿಯಿದು.
ತಮ್ಮ ಅದ್ಭುತ ಕಂಠಸಿರಿಯಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಅಭಿಜಿತ್ ಭಟ್ಟಾಚಾರ್ಯ ಅವರು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ಷೇಪಾರ್ಹ ನಡವಳಿಕೆಯಿಂದಾಗಿಯೇ ಹೆಸರನ್ನೂ ಕೆಡಿಸಿಕೊಂಡಿದ್ದಾರೆ. ಯಸ್ ಬಾಸ್, ಓಂ ಶಾಂತಿ ಓಂ ಚಿತ್ರಗಳಲ್ಲಿ ಅದ್ಭುತವಾಗಿ ಹಾಡಿರುವ ಗಾಯಕ ವೈಯಕ್ತಿಕ ಜೀವನದಲ್ಲಿ ಗಳಿಸಿಕೊಂಡ ಗೌರವವನ್ನು ಕಳೆದುಕೊಳ್ಳುತ್ತಿದ್ದಾರೆ.
JNU ವಿದ್ಯಾರ್ಥಿನಿಗೆ ಅಸಹ್ಯಕರ ಟ್ವೀಟ್- ಗಾಯಕ ಅಭಿಜೀತ್ ಟ್ವಿಟ್ಟರ್ ಬ್ಲಾಕ್
ಹಿಂದೆ ಜೆಎನ್ಯು ವಿದ್ಯಾರ್ಥಿನಿಯೊಬ್ಬರಿಗೆ, ಆಕೆ ಮುಂಗಡವಾಗಿ ಎರಡು ಲಕ್ಷ ರುಪಾಯಿ ಹಣವನ್ನು ಪಡೆದರೂ, ಗಿರಾಕಿಯನ್ನು ಸಂತುಷ್ಟಪಡಿಸಲು ವಿಫಲರಾಗಿದ್ದರು ಎಂಬ ಗಾಳಿಸುದ್ದಿಯಿದೆ. ಇದೊಂದು ಬಿಗ್ ಜಾಲ ಎಂದು ಟ್ವೀಟ್ ಮಾಡಿ ಮಂಗಳಾರತಿ ಮಾಡಿಸಿಕೊಂಡಿದ್ದರು. ಒಬ್ಬ ಮಹಿಳೆಯ ಬಗ್ಗೆ ಕೇವಲವಾಗಿ ಮಾತನಾಡಿದ್ದಕ್ಕೆ ಅವರ ಟ್ವಿಟ್ಟರ್ ಖಾತೆಯನ್ನೂ ಬ್ಲಾಕ್ ಮಾಡಲಾಗಿತ್ತು.
ಲೈಂಗಿಕವಾಗಿ ದೌರ್ಜನ್ಯ ಎಸಗಿದ ಆರೋಪ
ಶಾರುಖ್ ಖಾನ್ ಅವರು ನಟಿಸಿರುವ ಜೋಶ್, ಚಲ್ತೆ ಚಲ್ತೆ, ಬಾದಶಾ, ಯಸ್ ಬಾಸ್ ಮುಂತಾದ ಹಲವಾರು ಚಿತ್ರಗಳಲ್ಲಿ ಸುಶ್ರಾವ್ಯವಾಗಿ ಹಾಡಿ ಹೆಸರು, ಕೀರ್ತಿ, ಹಣ ಗಳಿಸಿರುವ ಅಭಿಜಿತ್ ಅವರ ಹೆಸರೇ ಇದೀಗ #MeToo ಅಭಿಯಾನದಲ್ಲಿ ಕಾಣಿಸಿಕೊಂಡಿದೆ. 20 ವರ್ಷಗಳ ಹಿಂದೆ ತಮ್ಮ ಮೇಲೆ ಬಾಲಿವುಡ್ ನ ಹಿನ್ನೆಲೆ ಗಾಯಕ ಅಭಿಜಿತ್ ಭಟ್ಟಾಚಾರ್ಯ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ವಿಮಾನಯಾನ ಸಂಸ್ಥೆಯಲ್ಲಿ ಫ್ಲೈಟ್ ಅಟೆಂಡಂಟ್ ಆಗಿದ್ದ ಬೋಧಿಸತ್ವ ಯಾಮ್ಯಾಹೋ ಎಂಬ ಮಹಿಳೆ ಆರೋಪ ಹೊರಿಸಿದ್ದಾರೆ. ಕೋಲ್ಕತಾದ ಪಬ್ ವೊಂದರಲ್ಲಿ 1998ರಲ್ಲಿ ಅಭಿಜಿತ್ ಭಟ್ಟಾಚಾರ್ಯ ಅವರು ಲೈಂಗಿಕವಾಗಿ ಕಿರುಕುಳ ನೀಡಿದ್ದರು ಎಂದು ಬೋಧಿಸತ್ವ ಅವರು ಮತ್ತೊಂದು ಹಗರಣವನ್ನು ಬಯಲಿಗೆಳೆದಿದ್ದಾರೆ.
#ಮೀಟೂ: ಮಹಿಳೆಯರ ಮೇಲೂ ಲೈಂಗಿಕ ಕಿರುಕುಳದ ಆರೋಪ
ತನುಶ್ರೀ ದತ್ತಾ ನಂತರ ಒಬ್ಬರ ಹಿಂದೆ ಮತ್ತೊಬ್ಬರು
ಬಾಲಿವುಡ್ ಚೆಲುವೆ ತನುಶ್ರೀ ದತ್ತಾ ಅವರು ಹತ್ತು ವರ್ಷಗಳ ಹಿಂದೆ ಹಿಂದಿ ಚಿತ್ರರಂಗದ ಖ್ಯಾತ ನಟ ನಾನಾ ಪಾಟೇಕರ್ ಅವರು ತಮ್ಮನ್ನು ಲೈಂಗಿಕವಾಗಿ ದುರ್ಬಳಸಿಕೊಂಡಿದ್ದರು ಎಂದು ಹಳೆಯ ಘಟನೆಯನ್ನು ಕೆದಕಿದ ಮೇಲೆ, ಕೆಂಡದ ಮೇಲೆ ಮುಚ್ಚಿದ್ದ ಬೂದಿಯೆಲ್ಲ ಹಾರುತ್ತಿದ್ದು, ಒಂದೊಂದಾಗಿ ಧಗಧಗಿಸುತ್ತಿವೆ. ಚಿತ್ರ ನಿರ್ದೇಶಕರು, ಖ್ಯಾತ ನಟರು, ಮೀಡಿಯಾ ದಿಗ್ಗಜರು, ಸಂಗೀತ ಸಾಧಕರ ಮೇಲೆ ಕೂಡ #MeToo ಅಭಿಯಾನದಲ್ಲಿ ಧುಮುಕುತ್ತಿದ್ದು, ಆರೋಪಗಳ ಸುರಿಮಳೆಯಾಗುತ್ತಿದೆ, ದಿಗ್ಗಜರ ಹೆಸರುಗಳು ಬಯಲಾಗುತ್ತಿವೆ. ಇದು ಒಂದು ರೀತಿ ಇಡೀ ದೇಶದೆಲ್ಲೆಡೆ ಸಮೂಹ ಸನ್ನಿಯಂತೆ ಹಬ್ಬುತ್ತಿದ್ದು, ಮಹಿಳೆಯರಿಂದ ಮಹಿಳೆಯರ ಮೇಲೆ ಕೂಡ ಲೈಂಗಿಕ ದೌರ್ಜನ್ಯದ ದೂರುಗಳು ಕೇಳಿಬರುತ್ತಿವೆ. ಇದೆಲ್ಲಿ ಹೋಗಿ ಮುಟ್ಟುವುದೋ?
ನನ್ನೆದುರೇ ಬೆತ್ತಲಾದ ಅಲೋಕ್ ನಾಥ್ : ಅಸಹ್ಯಕರ ಘಟನೆ ಬಿಚ್ಚಿಟ್ಟ ಕಲಾವಿದೆ
ಆ ಘಟನೆಯ ವಿವರ ಹೀಗಿದೆ
ಆ ಘಟನೆಯ ವಿವರ ಹೀಗಿದೆ : 1998ರ ಬೇಸಿಗೆಯ ಕಾಲವದು. ಕೋಲ್ಕತಾದ ಹಿಂದೂಸ್ತಾನ ಇಂಟರ್ನ್ಯಾಷನಲ್ ಹೋಟೆಲಿನಲ್ಲಿ ಶಿರೀನ್ ಸಿಂಗ್ ಎಂಬುವವರ ಜೊತೆ ಬೋಧಿಸತ್ವ ತಂಗಿದ್ದರು. ಅಭಿಜಿತ್ ಅವರು ಹೋಟೆಲ್ ರೂಂನಲ್ಲಿ ಮಲಗಿದ್ದ ಶಿರೀನ್ ಅವರಿಗಾಗಿ ಲಾಂಜ್ ನಲ್ಲಿ ಕಾಯುತ್ತಿದ್ದರು. 'ನನಗೆ ಸ್ವಲ್ಪ ತಡವಾಗುತ್ತದೆ, ಅವರಿಗೆ ಬರುತ್ತೇನೆಂದು ತಿಳಿಸು' ಎಂದು ಶಿರೀನ್ ಅವರು ಬೋಧಿಸತ್ವ ಅವರನ್ನು ಕೋರಿದ್ದರು. ಅಭಿಜಿತ್ ಯಾರೆಂದೇ ತಲೆಕೆಡಿಸಿಕೊಳ್ಳದ ಬೋಧಿಸತ್ವ, ಈ ವಿಷಯವನ್ನು ತಿಳಿಸಲು ಅಭಿಜಿತ್ ಬಳಿ ಹೋದರು. ಅಲ್ಲಿ ತೇಲಿ ಬರುತ್ತಿದ್ದ ಹಾಡಿಗೆ ಅಭಿಜಿತ್ ಕಾಲು ಕುಣಿಸುತ್ತಿದ್ದರು. ಆಗ ಅಲ್ಲಿಗೆ ಹೋದ ಬೋಧಿಸತ್ವ ಗೆಳತಿಯ ವಿಷಯವನ್ನು ತಿಳಿಸಿದ್ದಾರೆ.
ಮುತ್ತಿಡುವ ರೀತಿಯಲ್ಲಿ ಕಿವಿಯಲ್ಲಿ ಕಿರುಚಿದ್ದ
ಕಾಲು ಕುಣಿಸುತ್ತಿದ್ದ ಅಭಿಜಿತ್ ಅವರು ಬೋಧಿಸತ್ವಳ ತೀರ ಹತ್ತಿರ ಬಂದು ತನ್ನೊಂದಿಗೆ ಕುಣಿಯಲು ಹೇಳಿದ್ದಾರೆ. ಈ ಕೋರಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ ಬೋಧಿಸತ್ವ ತನ್ನ ಪಾಡಿಗೆ ತಾನು ನರ್ತಿಸಲು ಶುರು ಮಾಡಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಬೋಧಿಸತ್ವ ವಾಪಸ್ ಹೋಗುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದ ಅಭಿಜಿತ್ ಭಟ್ಟಾಚಾರ್ಯ, ಬೋಧಿಸತ್ವಳ ಕೈಯನ್ನು ಬಲವಾಗಿ ಹಿಡಿದು, ಬೆನ್ನ ಹಿಂದೆ ತಿರುಚಿ, ತನ್ನ ಬಳಿ ಸೆಳೆದುಕೊಂಡು, ಕಿವಿಯ ಹತ್ತಿರ ಬಂದು, "ಸೂ*, ನಿನ್ನನ್ನೇನು ತಿಳಿದುಕೊಂಡಿದ್ದಿಯಾ? ನಿನಗೆ ಪಾಠ ಕಲಿಸುವವರೆಗೆ ಸ್ವಲ್ಪ ತಡಿ" ಎಂದು ಮುತ್ತಿಡುವ ರೀತಿ ಬಂದು ಕಿವಿಯಲ್ಲಿ ಕಿರುಚಿದ್ದಾರೆ ಎಂದು ಬೋಧಿಸತ್ವ ಆರೋಪಿಸಿದ್ದಾರೆ. ಇದಿಷ್ಟು ನಡೆದು 20 ವರ್ಷಗಳಾಗಿವೆ. ಇದೀಗ ಎಲ್ಲರೂ ಬಾಯಿಬಿಡುತ್ತಿರುವಂತೆ ಬೋಧಿಸತ್ವ ಕೂಡ ತನ್ನ ಜೊತೆ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ.
ನನ್ನ ಹೆಸರು ಹೇಳಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ
ಈ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಅಭಿಜಿತ್ ಭಟ್ಟಾಚಾರ್ಯ, ನಾನು ಜೀವನಮಾನದಲ್ಲೇ ಯಾವುದೇ ಡಿಸ್ಕೋಥೆಕ್ ಗೂ ಹೋಗಲ್ಲ, ಪಬ್ಬಿಗೂ ಹೋಗಲ್ಲ. ಪೇಜ್ 3 ಪಾರ್ಟಿಗಳಲ್ಲಿ ಅಥವಾ ಯಾವುದೇ ಸಿನೆಮಾ ಪಾರ್ಟಿಗಳಲ್ಲಿ ನೀವು ನನ್ನನ್ನು ನೋಡಲು ಸಾಧ್ಯವೇ ಇಲ್ಲ. ಆಕೆ ಸಾರಾಸಗಟಾಗಿ ಸುಳ್ಳು ಹೇಳುತ್ತಿದ್ದಾಳೆ. ನನ್ನ ಹೆಸರೇ ನನಗೆ ಸಾಕು. ಯಾರಾದ್ರೂ ನನ್ನ ಹೆಸರು ಹೇಳಿ ಲಾಭ ಮಾಡಿಕೊಳ್ಳಲಿಚ್ಛಿಸಿದರೆ ಮಾಡಿಕೊಳ್ಳಲಿ. ಕೆಲವೊಬ್ಬರು ನನ್ನ ಹೆಸರು ಬಳಸಿಕೊಂಡು ತಮ್ಮ ಹೊಟ್ಟೆಯನ್ನು ಹೊರೆದುಕೊಳ್ಳುತ್ತಾರೆ, ಫೈನ್ ಎಂದು ವ್ಯಂಗ್ಯವಾಗಿ ಅಭಿಜಿತ್ ಭಟ್ಟಾಚಾರ್ಯ ಹೇಳಿದ್ದಾರೆ. ಅಭಿಜಿತ್ ವಿರುದ್ಧ ದೂರು ದಾಖಲಿಸಬೇಕಾ ಬೋಧಿಸತ್ವ ಅಥವಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಗೋಳು ತೋಡಿಕೊಂಡು ಸುಮ್ಮನಾಗಬೇಕಾ?