ಕಟ್ಟರ್ ವಿರೋಧಿ ಬಿಜೆಪಿ ಬೆಂಬಲಕ್ಕೆ ನಿಂತರೇ ಮಮತಾ ಬ್ಯಾನರ್ಜಿ?
ಕೊಲ್ಕತ್ತಾ, ಸೆಪ್ಟೆಂಬರ್ 14: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 'ಹಿಂದಿ ದಿವಸ'ಕ್ಕೆ ಶುಭಾಶಯ ಕೋರುವ ಮೂಲಕ ಕಟ್ಟರ್ ವಿರೋಧಿ ಬಿಜೆಪಿಯ ಬೆಂಬಲಕ್ಕೆ ನಿಂತಿದ್ದಾರೆ!
ಪ್ರತಿ ಸೆಪ್ಟೆಂಬರ್ 14 ನ್ನು ಹಿಂದಿ ದಿವಸ್ ಎಂದು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ತನ್ನಿಮಿತ್ತ ಶನಿವಾರ ಮಾತನಾಡುತ್ತಿದ್ದ ಗೃಹಸಚಿವ ಅಮಿತ್ ಶಾ, ಒಂದು ದೇಶ, ಒಂದೇ ಭಾಷೆ ನಮ್ಮನ್ನು ಒಗ್ಗೂಡಿಸಬಲ್ಲದು ಎಂದು ಏಕಭಾಷಾ ಸೂತ್ರದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಹಿಂದಿ ಹೇರಿಕೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಹೊತ್ತಲ್ಲಿ ಅಮಿತ್ ಶಾ ಅವರ ಈ ಮಾತು ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ತಮಿಕಳುನಾಡಿನ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್, ಹೈದರಾಬಾದ್ ಸಂಸದ, ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ ಸೇರಿದಂತೆ ಹಲವು ನಾಯಕರು ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರೆ, ಮಮತಾ ಬ್ಯಾನರ್ಜಿ ಅವರು ಮಾತ್ರ ಹಿಂದಿ ದಿವಸಕ್ಕೆ ಶುಭಾಶಯ ಕೋರುವ ಮೂಲಕ ಕೇಂದ್ರ ಸರ್ಕಾರದ ನಡೆಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.
"ಹಿಂದಿ ದಿವಸದಂದು ಎಲ್ಲರಿಗೂ ನನ್ನ ಶುಭಾಶಯಗಳು. ನಾವು ಎಲ್ಲಾ ಭಾಷೆ, ಸಂಸ್ಕೃತಿಯನ್ನೂ ಸಮಾನವಾಗಿ ಗೌರವಿಸಬೇಕು. ನಾವು ಎಷ್ಟೋ ಭಾಷೆಗಳನ್ನು ಕಲಿಯಬಹುದು. ಆದರೆ ಎಂದಿಗೂ ಮಾತೃಭಾಷೆಯನ್ನು ಮರೆಯಬಾರದು" ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications