ಯಾಸ್ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಜನರ ಸ್ಥಳಾಂತರ
ಕೊಲ್ಕತ್ತಾ, ಮೇ 25: ಬುಧವಾರ ಮಧ್ಯಾಹ್ನದ ನಂತರ ಯಾಸ್ ಚಂಡ ಮಾರುತ ಪಶ್ಚಿಮ ಬಂಗಾಳ ಮತ್ತು ಒಡಿಶಾ ಸಮುದ್ರ ತೀರದಲ್ಲಿ ನೆಲಕ್ಕಪ್ಪಳಿಸಲಿದೆ. ಅದಕ್ಕೂ ಮುನ್ನ ಈ ಚಂಡಮಾರುತದಿಂದ ಅಪಾಯದಲ್ಲಿರುವ ಪ್ರದೇಶಗಳ ಜನರ ಸ್ಥಳಾಂತರ ಕಾರ್ಯಾಚರಣೆ ನಡೆಯುತ್ತಿದೆ. ಈ ಚಂಡಮಾರುತ ನೆಲಕ್ಕಪ್ಪಳಿಸುವ ಮುನ್ನ ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಜನರನ್ನು ಸ್ಥಳಾಂತರಗೊಳಿಸುವ ಪ್ರಕ್ರಿಯೆ ಭರದಿಂದ ಸಾಗಿದೆ.
Recommended Video
"ಸ್ಥಳಾಂತರ ಕಾರ್ಯಾಚರಣೆ ಈಗಾಗಲೇ ಆರಂಭವಾಗಿದೆ. ಬುಧವಾರ ಮಧ್ಯಾಹ್ನ ಚಂಡಮಾರುತ ಅಪ್ಪಳಿಸುವ ಮುನ್ನ ಹತ್ತು ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲು ಯೋಜನೆ ಹಾಕಿಕೊಂಡಿದ್ದೇವೆ" ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನದಿ ಮತ್ತು ಸಮುದ್ರ ಉಗ್ರರೂಪಕ್ಕೆ
ಸೋಮವಾರ ಸುಂದರ್ಬನ್ ಡೆಲ್ಟಾದಲ್ಲಿನ ಕೆಲ ದ್ವೀಪಗಳಲ್ಲಿ ಮತ್ತು ಘೋರಮರಾ ದ್ವೀಪದಂಥ ಗಂಗಾ ನದಿಗೆ ಹಾಗೂ ಬಂಗಾಳ ಕೊಲ್ಲಿ ಸಮುದ್ರಕ್ಕೆ ಹತ್ತಿರವಿರುವ ಭಾಗಗಳಿಂದ ಜನರನ್ನು ಸ್ಥಳಾಂತರ ಮಾಡಲಾಗಿದೆ. "ಚಂಡಮಾರುತ ಸಮೀಪಿಸುತ್ತಿದ್ದಂತೆ ಸಮುದ್ರ ಮತ್ತು ನದಿ ತುಂಬಾ ಉಗ್ರರೂಪ ತಾಳುತ್ತದೆ. ಆದ್ದರಿಂದ ಘೋರಮರಾ ದ್ವೀಪದಲ್ಲಿ ವಾಸಿಸುವ ಜನರನ್ನು ಸೋಮವಾರ ಸ್ಥಳಾಂತರಿಸಬೇಕಾಯಿತು" ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿಯನ್ನು ನೀಡಿದ್ದಾರೆ.

ಅಪಾಯಕಾರಿ ಸ್ವರೂಪಕ್ಕೆ 'ಯಾಸ್'
ಮಂಗಳವಾರ ಮುಂಜಾನೆ, ಚಂಡಮಾರುತ ಪಶ್ಚಿಮ ಬಂಗಾಳ ಕರಾವಳಿಯ ಆಗ್ನೇಯ ದಿಕ್ಕಿನಲ್ಲಿ 450 ಕಿ.ಮೀ. ದೂರದಲ್ಲಿದೆ. "ಯಾಸ್ ಚಂಡಮಾರುತ ಈಗ 'ಸೀವಿಯರ್ ಸೈಕ್ಲೀನ್' ಸ್ವರೂಪವನ್ನು ಪಡೆದುಕೊಂಡಿದೆ. ಮುಂದೆ ಇದು 'ವೆರಿ ಸೀವಿಯರ್ ಸೈಕ್ಲೋನ್' ಸ್ವರೂಪವನ್ನು ಪಡೆದುಕೊಳ್ಳಲಿದೆ. ಒಡಿಶಾದ ಬೋಲಸೋರ್ ಭಾಗದ ಆಸುಪಾಸಿನಲ್ಲಿ ಬುಧವಾರ ಮಧ್ಯಾಹ್ನದ ನಂತರ ಭೂಭಾಗವನ್ನು ಅಪ್ಪಳಿಸುವ ಸಾಧ್ಯತೆಯಿದೆ" ಎಂದು ಭಾರತೀಯ ಹವಾಮಾನ ಇಲಾಖೆಯ ಕೊಲ್ಕತ್ತಾ ಪ್ರಾದೇಶಿಕ ಕಚೇರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

20 ಜಿಲ್ಲೆಗಳಿಗೆ ಹೆಚ್ಚು ಪರಿಣಾಮ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉತ್ತರ ಬಂಗಾಳ ಭಾಗದ 20 ಜಿಲ್ಲೆಗಳ ಮೇಲೆ ಚಂಡಮಾರುತ ಹೆಚ್ಚಿನ ಪರಿಣಾಮ ಉಂಟುಮಾಡುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಾದ ಪೂರ್ವ ಮಿಡ್ನಾಪುರ್, ದಕ್ಷಿಣ 24 ಪರಗಣ, ಹಾಗೂ ಉತ್ತರ 24 ಪರಗಣ ಜಿಲ್ಲೆಗಳ ಮೇಲೆ ಅತ್ಯಂತ ಹೆಚ್ಚು ಅಪಾಯಗಳು ಉಂಟಾಗಬಹುದು ಎಂದು ಹೇಳಿದ್ದಾರೆ.

ಕರಾವಳಿ ತೀರದಲ್ಲಿ ಗಾಳಿಯ ತೀವ್ರತೆ ಹೆಚ್ಚಳ
ಪೂರ್ವ ಮಿಡ್ನಾಪುರ್ ಒಡಿಶಾದ ಬಾಲಾಸೋರ್ಗೆ ಸಮೀಪದಲ್ಲಿದ್ದು ಚಂಡಮಾರುತ ಈ ಭಾಗಕ್ಕೆ ಅಪ್ಪಳಿಸುವ ವೇಳೆ 155-165 ಕಿ.ಮೀ ವೇಗದಿಂದ ಹಿಡಿದು 185 ಕಿ.ಮೀ ವೇಗದೊಂದಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಪಶ್ಚಿಮ ಬಂಗಾಳ ಕರಾವಳಿ ತೀರದಲ್ಲಿ ಗಾಳಿಯ ತೀವ್ರತೆ ಈಗಾಗಲೇ ಹೆಚ್ಚಾಗಿದೆ.












Click it and Unblock the Notifications