ಮಾಲೂರಿನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಉಮಾಶ್ರೀ
ಮಾಲೂರು, ಜುಲೈ 31: ಮಾಲೂರು ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಖಾಸಗಿಯಾಗಿ ನಿರ್ಮಾಣ ಮಾಡಿರುವ ಉಚಿತ ಇಂದಿರಾ ಕ್ಯಾಂಟೀನ್ ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಭಾನುವಾರಂದು ಚಾಲನೆ ನೀಡಿದರು.
ಮಾಲೂರು ಕಾಂಗ್ರೆಸ್ ಮುಖಂಡ ಕೆ.ವೈ.ನಂಜೇಗೌಡ ರಾಜ್ಯದ ಮೊದಲ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿದ್ದು, ಬಡವರು ಹಾಗೂ ನಿರ್ಗತಿಕರಿಗೆ ಉಚಿತ ಹಾಗೂ ಕಡಿಮೆ ದರದಲ್ಲಿ ಆಹಾರ ನೀಡುವ ಉದ್ದೇಶ ಹೊಂದಲಾಗಿದೆ.

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಯೋಜನೆ ಮಾಡಲಾಗಿದ್ದ ಮಾತೃ ನಮನ ಅನ್ನೋ ಬೃಹತ್ ಸಮಾವೇಶಕ್ಕೂ ಮುನ್ನ ಇಂದಿರಾ ಕ್ಯಾಂಟೀನ್ ಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಚಿವ ರಮೇಶ್ ಕುಮಾರ್, ಮುಖಂಡರಾದ ಕೆಎಚ್ ಮುನಿಯಪ್ಪ, ಮುಖ್ಯಮಂತ್ರಿ ಚಂದ್ರು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಮಾಶ್ರೀ ಮಾತನಾಡಿ, ಧರ್ಮ ಒಡೆಯಲು ಹಿಂದುಳಿದ ವರ್ಗದ ಯುವಕರನ್ನು ಬಿಜೆಪಿ ಬಳಸುತ್ತಿದೆ ಎಂದು ಆರೋಪಿಸಿದರು. ಜೆಡಿಎಸ್ ವಿರುದ್ಧವೂ ಕಿಡಿಕಾರಿದರು. ಪ್ರತಿಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿದ್ದರಾಮಯ್ಯರನ್ನು ಜಾತಿವಾದಿ ಎಂದು ಬಿಂಬಿಸುತ್ತಿವೆ. ಅವರ ಜನಪರ ಕಾರ್ಯಗಳನ್ನು ನೋಡಿ ಕಾಂಗ್ರೆಸ್ನ್ನು ಮತ್ತೆ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿಕೊಂಡರು.












Click it and Unblock the Notifications