ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ; ಎಚ್ಡಿಕೆ ಪ್ರತಿಕ್ರಿಯೆ
ಕೋಲಾರ, ಮಾರ್ಚ್ 07: "ದಿನೇಶ್ ಕಲ್ಲಹಳ್ಳಿ ಅವರು ಯಾವ ಕಾರಣಕ್ಕೆ ದೂರು ವಾಪಸ್ ಪಡೆದಿದ್ದಾರೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ಸರ್ಕಾರಕ್ಕೆ ಜವಾಬ್ದಾರಿ ಇದೆ. ಸ್ವಯಂ ಪ್ರೇರಿತ ಕೇಸ್ ದಾಖಲಿಸಬಹುದು" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಭಾನವಾರ ಮಧ್ಯಾಹ್ನ ಕೋಲಾರದ ಅಜ್ಜಪ್ಪನಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಎಚ್. ಡಿ. ಕುಮಾರಸ್ವಾಮಿ ಮಾತನಾಡಿದರು. "ದಿನೇಶ್ ಕಲ್ಲಹಳ್ಳಿ ಯಾವ ಕಾರಣಕ್ಕೆ ದೂರು ಕೊಟ್ಟಿದ್ದರು. ಯಾವ ಕಾರಣಕ್ಕೆ ವಾಪಸ್ ಪಡೆದಿದ್ದಾರೆ ಗೊತ್ತಿಲ್ಲ" ಎಂದು ತಿಳಿಸಿದರು.
"ಕಳೆದ ಒಂದು ವಾರದಿಂದ ಅಸಹ್ಯಕರವಾದ ಘಟನೆಗಳು ನಡೆಯುತ್ತಿದೆ. ಸರ್ಕಾರ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ, ರಾಜ್ಯದ ಜನತೆಗೆ ಸರ್ಕಾರ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು" ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

"ಯಾರು ದೂರು ವಾಪಸ್ ತೆಗೆದುಕೊಳ್ಳುವುದಕ್ಕೆ ಪ್ರೇರೆಪಿಸಿದ್ದಾರೆ ತಿಳಿದುಕೊಳ್ಳಬೇಕು. ಸಂತ್ರಸ್ತ ಮಹಿಳೆಗೆ ನೋವು ಆಗಿರುವ, ಅನ್ಯಾಯವಾಗಿದೆ ಎಂಬ ವಿಚಾರಕ್ಕೆ ಇದುವರೆಗೆ ಯಾರೂ ಹೊರ ಬಂದಿಲ್ಲ. ಯಾವ ಕಾರಣಕ್ಕೆ ಈ ಪ್ರಕರಣ ಹೊರ ಬಂದಿದೆ. ಇದರ ಸತ್ಯಾಂಶ ಏನು ಎನ್ನುವುದನ್ನು ಸರ್ಕಾರ ಜನತೆ ಮುಂದೆ ಇಡಬೇಕು" ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
"ಸಚಿವ ಸಿ. ಪಿ. ಯೋಗೇಶ್ವರ್ ಗ್ರಾಫಿಕ್ಸ್ನಲ್ಲಿ ಎಕ್ಸ್ಫರ್ಟ್ ಇರಬಹುದು. ಅವರಿಗೆ ಅನುಭವ ಇರುವುದರಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ನಾನು ಉತ್ತರಿಸುವುದು ಅನವಶ್ಯಕ" ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
"ದಿನೇಶ್ ಕಲ್ಲಹಳ್ಳಿ ಹೆಸರು ನಾನು ಎಲ್ಲೂ ಪ್ರಸ್ತಾಪ ಮಾಡಿಲ್ಲ. ಸಿಡಿ ಎಲ್ಲಿಂದ ಬಿಡುಗಡೆ ಆಗಿದೆ ಅದರ ಉದ್ದೇಶ ಸಫಲ ಆಗಿದೆ. ಸಿಡಿ ಬಿಡುಗಡೆ ಇಂದ ಮಂತ್ರಿ ರಾಜೀನಾಮೆ ಕೊಟ್ಟಾಯಿತು. ಯಾರು ಹಣ ವ್ಯವಹಾರ ನಡೆಸಿದ್ದಾರೆ?. ಆ ಹಣದ ವ್ಯವಹಾರ ನಡೆಸಿದವರು ಸಫಲರಾಗಿದ್ದಾರೆ. ನಾನು ಇವರ ಹೆಸರು ಎಲ್ಲಿ ಹೇಳಿದ್ದೇನೆ? ಇವರಿಗೆ ಏತಕ್ಕೆ ಅದರ ಬಗ್ಗೆ ಚಿಂತೆ?" ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
"ನಾನು ಎಲ್ಲೂ ದಿನೇಶ್ ಕಲ್ಲಹಳ್ಳಿ ಹೆಸರು ಪ್ರಸ್ತಾಪ ಮಾಡಿಲ್ಲ. ನಾನು ಏನಕ್ಕೆ ಸಾಕ್ಷಿ ಕೊಡಲಿ. ಸಾಕ್ಷಿ ಕೊಡಬೇಕಾಗಿರೋದು ಅವರು. ಕಳೆದ ಮೂರು ನಾಲ್ಕು ತಿಂಗಳುಗಳಿಂದ ಬಂದಂತಹ ಘಟನೆಗಳನ್ನು ನಾನು ಹೇಳಿದ್ದೇನೆ. ಅದು ನಿಖರವಾದ ಮಾಹಿತಿಗಳು ಅಲ್ಲ. ಇವರು ಏಕೆ ಮಾನಸಿಕವಾಗಿ ಹಿಂಸೆ ನೀಡಿದ್ದೇನೆ ಅಂದುಕೊಳ್ಳುತ್ತಾರೆ?. ಈ ವಿಷಯದಲ್ಲಿ ಅವರ ಪಾತ್ರ ಏನು ಗೊತ್ತಿಲ್ಲ" ಎಂದು ಕುಮಾರಸ್ವಾಮಿ ಹೇಳಿದರು.
ಸಿಡಿ ಬಿಡುಗಡೆಯಾದಾಗ ಮೈಸೂರಿನಲ್ಲಿ ಮಾತನಾಡಿದ್ದ ಎಚ್. ಡಿ. ಕುಮಾರಸ್ವಾಮಿ, "ಈ ಪ್ರಕರಣದಲ್ಲಿ 5 ಕೋಟಿಯ ಡೀಲ್ ನಡೆದಿದೆ. ಇದು ನನಗಿರುವ ಮೂಲಗಳ ಮಾಹಿತಿ. ಕಳೆದು ಮೂರು ತಿಂಗಳಿಂದ ಈ ಡೀಲ್ ವ್ಯವಹಾರ ನಡೆದಿದೆ. ದೊಡ್ಡ ದೊಡ್ಡವರೇ ಈ ಪ್ರಕರಣದಲ್ಲಿ ಇದ್ದಾರೆ" ಎಂದು ಹೇಳಿಕೆ ನೀಡಿದ್ದರು.
ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ದಿನೇಶ್ ಕಲ್ಲಹಳ್ಳಿ, "ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯ ಸತ್ಯಾಸತ್ಯತೆಯನ್ನು ಬಹಿರಂಗ ಮಾಡಬೇಕು. ಮಾಧ್ಯಮಗಳ ಮುಂದೆ, ತನಿಖಾಧಿಕಾರಿಗಳ ಮುಂದೆ ಈ ಕುರಿತು ಸ್ಪಷ್ಟಪಡಿಸಬೇಕು" ಎಂದು ಒತ್ತಾಯಿಸಿದ್ದರು.












Click it and Unblock the Notifications