ಕೆ ಎಚ್ ಮುನಿಯಪ್ಪ ಅವರಿಂದ ತಟ್ಟಿದ ಶಾಪಕ್ಕೆ ಸದ್ಯದಲ್ಲೇ ವಿಮೋಚನೆ
ಕೋಲಾರ, ಮೇ 20: ಮೇ 23ಕ್ಕೆ ದಿನಗಣನೆ ಆರಂಭವಾಗಿದೆ, ಈ ನಡುವೆ ಸೋಲಿಲ್ಲದ ಸರದಾರ ಎಂದೇ ಹೆಸರಾಗಿರುವ ಕೆ ಎಚ್ ಮುನಿಯಪ್ಪ ವಿರುದ್ದ ಸ್ಪರ್ಧಿಸಿರುವ ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಭಾರೀ ವಿಶ್ವಾಸದ ಮಾತನ್ನಾಡಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮತಎಣಿಕೆಯ ದಿನ ಯಾವರೀತಿ ಕೆಲಸ ಮಾಡಬೇಕೆಂದು ಬಿಜೆಪಿ ಏಜೆಂಟುಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದ ಮುನಿಸ್ವಾಮಿ, ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತೆ ಮುಂದುವರಿಯುವುದು ನಿಶ್ಚಿತ ಎಂದು ಹೇಳಿದರು.
ಮೇ 23, ಕೋಲಾರದ ಜನತೆಗೆ ಸುದಿನ, 28ವರ್ಷಗಳಿಂದ ಕೆ ಚ್ ಮುನಿಯಪ್ಪ ಅವರಿಂದ ಕೋಲಾರಕ್ಕೆ ತಟ್ಟಿದ ಶಾಪ, ಸದ್ಯದಲ್ಲೇ ವಿಮೋಚನೆಯಾಗಲಿದೆ ಎಂದು ಮುನಿಸ್ವಾಮಿ, ಚುನಾವಣೆಯಲ್ಲಿ ಗೆಲ್ಲುವ ಮಾತನ್ನಾಡಿದರು.

ಮೋದಿ ಪ್ರಧಾನಿಯಾಗುವುದು ಹೇಗೆ ನಿಶ್ಚಿತವೋ, ಹಾಗೇ ನಿಮ್ಮೆಲ್ಲರ ಶ್ರಮದಿಂದ, ಮತದಾರರ ಆಶೀರ್ವಾದದಿಂದ ನಾನು ಗೆಲ್ಲುವುದೂ ಅಷ್ಟೇ ಖಚಿತ ಎಂದಿರುವ ಮುನಿಸ್ವಾಮಿ, ಲಕ್ಷ ಮತಗಳ ಅಂತರದಿಂದ ನಾನು ಗೆಲ್ಲುತ್ತೇನೆ ಎಂದಿದ್ದಾರೆ.
ಬಿಜೆಪಿಯಿಂದ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಮುನಿಯಪ್ಪಗೆ ಈ ಬಾರಿ ನಿರೀಕ್ಷಿತ ಬೆಂಬಲ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಸಿಕ್ಕಿರಲಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಬಿಬಿಎಂಪಿ ಕಾರ್ಪೋರೇಟರ್ ಮುನಿಸ್ವಾಮಿಯವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು.
ಕೋಲಾರ ಕ್ಷೇತ್ರದಿಂದ ಡಿ ಎಸ್ ವೀರಯ್ಯ ಸೇರಿದಂತೆ ಹಲವು ಮುಖಂಡರು ಬಿಜೆಪಿ ಟಿಕೆಟಿಗೆ ಪ್ರಯತ್ನಿಸಿದ್ದರು. ಆದರೆ, ಬಿಜೆಪಿ, ಮುನಿಸ್ವಾಮಿಗೆ ಟಿಕೆಟ್ ನೀಡಿದ ನಂತರ, ಆರಂಭದಲ್ಲಿ ಮುನಿಯಪ್ಪಗೆ ಗೆಲುವು ಅತ್ಯಂತ ಸುಲಭ ಎನ್ನುವ ಮಾತಿತ್ತು.
ಆದರೆ, ದಿನದಿಂದ ದಿನಕ್ಕೆ ಹೆಚ್ಚಿದ ಬಿಜೆಪಿ ಪ್ರಾಬಲ್ಯ, ಮೋದಿ ಅಲೆ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಮೈತ್ರಿ ಪಕ್ಷದಲ್ಲಿನ ಸಮನ್ವಯದ ಕೊರತೆಯಿಂದಾಗಿ, ಚುನಾವಣೆಯ ವೇಳೆ ಮುನಿಯಪ್ಪಗೆ ಈ ಬಾರಿ ಗೆಲುವು ಸುಲುಭದ ತುತ್ತಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು.
ಎರಡೆರಡು ಬಾರಿ ಮುಖ್ಯಮಂತ್ರಿಗಳಿಗೆ ಗುಪ್ತಚರ ದಳ ವರದಿಯನ್ನು ನೀಡಿದೆ. ಎರಡು ಬಾರಿಯ ವರದಿಯಲ್ಲೂ ಮುನಿಯಪ್ಪ ಸೋಲಲಿದ್ದಾರೆ ಎನ್ನುವುದು ಉಲ್ಲೇಖವಾಗಿದೆ. ಸಿಎಂ ಕಚೇರಿಯ ಸಿಬ್ಬಂದಿಗಳೇ ನನಗೆ ಈ ಮಾಹಿತಿಯನ್ನು ನೀಡಿದ್ದಾರೆ. ಈ ವರದಿಯ ಬಗ್ಗೆ ಕೆ ಎಚ್ ಮುನಿಯಪ್ಪ ಅವರಿಗೂ ಗೊತ್ತಿದೆ ಎನ್ನುವ ಹೇಳಿಕೆಯನ್ನು ಕೊತ್ತೂರು ಮಂಜುನಾಥ್ ನೀಡಿದ್ದರು.












Click it and Unblock the Notifications