ಉತ್ತರ ಕನ್ನಡದಲ್ಲಿ ಜಿಲ್ಲಾಡಳಿತ ಅನುಷ್ಠಾನಕ್ಕೆ ತರಲಿದೆ ಈ ‘ಪಂಚಸೂತ್ರ’
ಕಾರವಾರ, ಮೇ 01: ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದರ ತಡೆಗಾಗಿ ಘೋಷಿಸಲಾಗಿರುವ ಲಾಕ್ ಡೌನ್ ನ ಎರಡನೇ ಹಂತ ಮೇ 3ರಂದು ಕೊನೆಗೊಳ್ಳುತ್ತಿದೆ. ಈ ನಡುವೆ ಉತ್ತರ ಕನ್ನಡ ಜಿಲ್ಲೆಯೂ ಸಕ್ರಿಯ ಕೊರೊನಾ ಸೋಂಕಿತರಿಂದ ಮುಕ್ತವಾಗಿದೆ. ಆದರೂ ಲಾಕ್ ಡೌನ್ ಸಡಿಲಿಕೆಯ ಬಳಿಕ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಪಂಚಸೂತ್ರಗಳನ್ನು ಜಿಲ್ಲಾಡಳಿತ ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸಿದೆ.
Recommended Video
ಲಾಕ್ ಡೌನ್ ಬಳಿಕ ಮುಂದೇನು? ಜಿಲ್ಲೆಯಲ್ಲಿ ಯಾವೆಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಬೇಕು? ದಿನನಿತ್ಯದ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇಗೆ? ಎಂಬೆಲ್ಲ ಅಂಶಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಸೂಕ್ತ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ ಬಳಿಕ ಅವರು ನಿರ್ಧಾರ ಪ್ರಕಟಿಸಲಿದ್ದು, ಅವರ ಸೂಚನೆಯಂತೆ ಮೇ 3ರ ನಂತರ ಜಿಲ್ಲೆ ಇರಲಿದೆ. ಆದರೆ, ಈ ನಡುವೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರು ಮುಂಜಾಗ್ರತಾ ಕ್ರಮವಾಗಿ ಪಂಚಸೂತ್ರಗಳನ್ನು ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸಿದ್ದಾರೆ.

ಏನಿದು ಪಂಚಸೂತ್ರ?
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹಾಗೂ ಇತರ ಅಧಿಕಾರಿಗಳೊಡನೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರು ಈ ಪಂಚಸೂತ್ರಗಳನ್ನು ಸಿದ್ಧಪಡಿಸಿದ್ದಾರೆ. ಇದರ ಪ್ರಕಾರ ಯಾವುದೇ ಕಾರಣಕ್ಕೂ ಒಮ್ಮೆ ಲಾಕ್ ಡೌನ್ ಸಡಿಲಿಕೆಯ ನಂತರ ಮತ್ತೆ ಸೋಂಕು ಪ್ರಕರಣ ಪತ್ತೆಯಾಗಬಾರದು. ಒಂದು ವೇಳೆ ಪತ್ತೆಯಾದರೆ ಮತ್ತೆ ನಿಯಂತ್ರಣ ಕಷ್ಟಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಒಳಗೊಂಡ ಈ ಪಂಚಸೂತ್ರಗಳನ್ನು ಅವರು ಸಿದ್ಧಪಡಿಸಿ, ಅನುಷ್ಠಾನಕ್ಕೆ ಮುಂದಾಗಿದ್ದಾರೆ.

ಸಾರ್ವಜನಿಕರ ಚಟುವಟಿಕೆ ಮೇಲೆ ನಿಗಾ
ಕೊರೊನಾ ಸೋಂಕು ತಡೆಗಾಗಿ ರಚಿಸಲಾಗಿರುವ ಕಾರ್ಯಪಡೆಗಳು (ಟಾಸ್ಕ್ ಫೋರ್ಸ್) ಹಾಗೂ ಸ್ವಯಂಸೇವಕರ ಸಹಕಾರದಿಂದ ಪೊಲೀಸ್ ಇಲಾಖೆಯು ಸಾರ್ವಜನಿಕ ಚಟುವಟಿಕೆಗಳ ಮೇಲೆ ವ್ಯಾಪಕ ನಿಗಾ ಇಡಲಿದೆ. ಈ ವೇಳೆ ಜಿಲ್ಲಾಡಳಿತ ಆದೇಶಿಸಿದ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಶೀಘ್ರದಲ್ಲೇ ತಮ್ಮ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡುವವರಿದ್ದಾರೆ.

ನಗರ ಕಾರ್ಯಪಡೆ ರಚನೆ
ಈಗಾಗಲೇ ಜಿಲ್ಲಾ ಪಂಚಾಯತಿ ಸಿಇಒ ಮೊಹಮ್ಮದ್ ರೋಶನ್ ಅವರು ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೊರೊನಾ ಸೋಂಕು ತಡೆಗಾಗಿ ಕಾರ್ಯಪಡೆಗಳನ್ನು ರಚಿಸಿ ಯಶಸ್ವಿಯಾಗಿದ್ದಾರೆ. ಗ್ರಾಮ ಪಂಚಾಯಿತಿಯ ಜನಪ್ರತಿಧಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ಈ ಕಾರ್ಯಪಡೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ರಾಜ್ಯ ಮಟ್ಟದಲ್ಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಇದೇ ರೀತಿ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ವಾರ್ಡ್ ಗಳಲ್ಲೂ ಕಾರ್ಯಪಡೆಗಳನ್ನು ರಚಿಸಲಾಗುತ್ತದೆ. ಈ ಕಾರ್ಯಪಡೆಗಳು ಗ್ರಾಮೀಣ ಕಾರ್ಯಪಡೆಯಂತೆ ಕಾರ್ಯನಿರ್ವಹಿಸಲಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್ ಅವರು ಇವುಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಜಿಲ್ಲಾ ವಾರ್ ರೂಮ್ ರಚನೆ
ಈ ಎಲ್ಲಾ ಚಟುವಟಿಕೆಗಳ ಮೇಲುಸ್ತುವಾರಿ ನೋಡಿಕೊಳ್ಳಲು ಜಿಲ್ಲಾ ಕೋವಿಡ್- 19 ವಾರ್ ರೂಮ್ ಅನ್ನು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆಯಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಚಟುವಟಿಗಳ ಮೇಲೂ ಜಿಲ್ಲಾಧಿಕಾರಿ ಕಚೇರಿಯಲ್ಲೇ ನಿಗಾ ವಹಿಸುವ ವ್ಯವಸ್ಥೆ ಸಿದ್ಧಗೊಳ್ಳುತ್ತಿದೆ.
ಜಿಲ್ಲೆಯಲ್ಲಿ ಕೊರೋನಾ ಲಕ್ಷಣ ಅಥವಾ ಇನ್ಯಾವುದೇ ರೋಗ ಲಕ್ಷಣ ಇರುವವರನ್ನು ಪತ್ತೆ ಹಚ್ಚಲು ಈಗಾಗಲೇ ಹಲವು ಬಾರಿ ಆರೋಗ್ಯ ಸಮೀಕ್ಷೆ ನಡೆಸಲಾಗಿದೆ. ಆರೋಗ್ಯ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯ ಮನೆಮನೆಗಳಿಗೆ ತೆರಳಿ, ಜಿಲ್ಲೆಯ ಜನರ ಆರೋಗ್ಯ ಮಾಹಿತಿ ಕಲೆಹಾಕಿದ್ದರು. ಈ ಸಮೀಕ್ಷೆಯನ್ನು ಲಾಕ್ಡೌನ್ ಬಳಿಕವೂ ಮುಂದುವರಿಸಲಾಗುತ್ತದೆ. ಇದು ಸೋಂಕಿನ ಲಕ್ಷಣ ಕಂಡುಬಂದವರನ್ನು ತಕ್ಷಣವೇ ಪತ್ತೆ ಹಚ್ಚಲು ಅನುಕೂಲವಾಗಲಿದೆ. ಜಿಲ್ಲಾ ಆರೋಗ್ಯ ಇಲಾಖೆ ಈ ಸಮೀಕ್ಷೆಯನ್ನು ವಿವಿಧ ವಿಧಗಳನ್ನು ಕೈಗೊಳ್ಳಲಿದೆ.

ಸುದ್ದಿಗೋಷ್ಠಿಗೆ ತಂತ್ರಜ್ಞಾನ ಬಳಕೆ
ಮಹಾರಾಷ್ಟ್ರ, ಚೆನ್ನೈ ಹಾಗೂ ಬೆಂಗಳೂರು ಸೇರಿದಂತೆ ವಿವಿಧೆಡೆ ಪತ್ರಕರ್ತರಿಗೂ ಸೋಂಕು ತಗುಲಿದೆ. ಪ್ರತಿದಿನ ಹಲವರ ಸಂಪರ್ಕಕ್ಕೆ ಬರುವ ಪತ್ರಕರ್ತರಿಂದಲೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ ಎಂದು ಈಗಾಗಲೇ ಕೇಂದ್ರ ಆರೋಗ್ಯ ಮಂತ್ರಾಲಯ ಪತ್ರಕರ್ತರ ಆರೋಗ್ಯ ತಪಾಸಣೆಗೂ ಸೂಚಿಸಿದೆ. ಅನಿವಾರ್ಯವಾಗಿ ಪತ್ರಕರ್ತರು ರಸ್ತೆಗಿಳಿಯಲೇಬೇಕಿದ್ದು, ಸಾರ್ವಜನಿಕರ ಸಂಪರ್ಕವೂ ಅಗತ್ಯವಾಗಿದೆ. ಸರ್ಕಾರಿ ಮಾಹಿತಿಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರವೂ ಪ್ರಮುಖವಾಗಿದೆ. ಅದರಂತೆ, ಜಿಲ್ಲಾಡಳಿತ ಕೈಗೊಳ್ಳುವ ಎಲ್ಲಾ ಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಶ್ರಮವಹಿಸುತ್ತಿರುವ ಪತ್ರಕರ್ತರಿಗೆ ಮಾಹಿತಿ ಒದಗಿಸಲೂ ಜಿಲ್ಲಾಡಳಿತ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ. ಜಿಲ್ಲೆಯ ಚಟುವಟಿಕೆಗಳ ನಿಯಂತ್ರಣಕ್ಕೆ ಸಿದ್ಧಗೊಳ್ಳುತ್ತಿರುವ ಕೋವಿಡ್- 19 ವಾರ್ ರೂಮ್ ಮೂಲಕ ತಂತ್ರಜ್ಞಾನ ಬಳಸಿ ಸುದ್ದಿಗೋಷ್ಠಿ ನಡೆಸಲು ಕಾರ್ಯಯೋಜನೆ ರೂಪಿಸಲಾಗಿದೆ.











Click it and Unblock the Notifications