Get Updates
Get notified of breaking news, exclusive insights, and must-see stories!

ಹಾನಗಲ್ ಉಪ ಚುನಾವಣೆ; ಶಿವರಾಮ್ ಹೆಬ್ಬಾರ್ ಗೆ ಪ್ರತಿಷ್ಠೆ

ಕಾರವಾರ, ಅಕ್ಟೋಬರ್ 28; ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಚಿವ ಶಿವರಾಮ್ ಹೆಬ್ಬಾರ್‌ಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಆಪರೇಷನ್ ಕಮಲದ ಮೂಲಕ ಬಂದು ಸರ್ಕಾರದಲ್ಲಿ ಸಚಿವರಾದವರಿಗೆ ಬಿಜೆಪಿ ಈ ಉಪಚುನಾವಣೆಯ ಅಭ್ಯರ್ಥಿಗಳನ್ನು ಗೆಲ್ಲಿಸುವ ಟಾರ್ಗೆಟ್ ನೀಡಿದೆ ಎಂಬ ಸುದ್ದಿ ಹಬ್ಬಿದೆ.

ಶಾಸಕರಾಗಿದ್ದ ಸಿ. ಎಂ. ಉದಾಸಿ ಅಕಾಲಿಕ ನಿಧನದಿಂದ ಹಾನಗಲ್ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಅಕ್ಟೋಬರ್ 30ರಂದು ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರ ಗುರುವಾರ ಸಂಜೆ ಅಂತ್ಯಗೊಳ್ಳಲಿದೆ. ನವೆಂಬರ್ 2ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

ಈಗಾಗಲೇ ಚುನಾವಣೆಯನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಬಿರುಸಿನ ಪ್ರಚಾರ ನಡೆಸುತ್ತಿದೆ. ಚುನಾವಣೆಯ ಉಸ್ತುವಾರಿ ಹೊತ್ತಿರುವ ಕಾರ್ಮಿಕ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸಹ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲೇಬೇಕು ಎನ್ನುವ ಪ್ರತಿಷ್ಠೆಗೆ ಬಿದ್ದಿದ್ದಾರೆ.

 Hanagal By Elections Prestige For Minister Shivaram Hebbar

ಚುನಾವಣೆ ಘೋಷಣೆಯಾಗಿ ಪ್ರಚಾರ ಕಾರ್ಯ ಪ್ರಾರಂಭ ಮಾಡಿದಾಗಿನಿಂದ ಶಿವರಾಮ್ ಹೆಬ್ಬಾರ್ ಹಾನಗಲ್ ಕ್ಷೇತ್ರದಲ್ಲಿಯೇ ಬೀಡುಬಿಟ್ಟಿದ್ದಾರೆ. ಕ್ಷೇತ್ರದ ಬೊಮ್ಮನಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪ್ರದೇಶದ ಉಸ್ತುವಾರಿ ಹೊತ್ತಿರುವ ಹೆಬ್ಬಾರ್, ತನ್ನ ವ್ಯಾಪ್ತಿಯಲ್ಲಿ ಅಧಿಕ ಮತಗಳನ್ನು ಪಕ್ಷದ ಅಭ್ಯರ್ಥಿಗೆ ಬರುವಂತೆ ಶತಾಯಗತಾಯ ಪ್ರಯತ್ನಕ್ಕೆ ಇಳಿದಿದ್ದಾರೆ.

ಸಚಿವ ಹೆಬ್ಬಾರ್‌ಗೆ ಉಸ್ತುವಾರಿ ಕೊಟ್ಟಿರುವ ಕ್ಷೇತ್ರದಲ್ಲಿ ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯೆ ಕಾಂಗ್ರೆಸ್ ಪಕ್ಷದವರಾಗಿದ್ದು, ಎರಡು ತಾಲೂಕು ಪಂಚಾಯತ್ ಕ್ಷೇತ್ರದ ಸದಸ್ಯರು ಕೂಡ ಕಾಂಗ್ರೆಸ್ ಪಕ್ಷದವರೇ ಆಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿ. ಎಂ. ಉದಾಸಿಗೆ ಈ ಭಾಗದಲ್ಲಿ ಮತ ಹೆಚ್ಚಾಗಿ ಬಿದ್ದಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತವಾಗಿತ್ತು. ಸದ್ಯ ಹೆಬ್ಬಾರ್‌ಗೆ ಇದೇ ಕ್ಷೇತ್ರ ಉಸ್ತುವಾರಿ ನೀಡಿದ್ದು, ಕಳೆದ ಆರು ದಿನಗಳಿಂದ ಅಲ್ಲೇ ಉಳಿದುಕೊಂಡು ಹಗಲಿರುಳು ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನೊಂದೆಡೆ ಕೆಲ ದಿನಗಳ ಹಿಂದಿನವರೆಗೆ ರಾಜ್ಯ ಬಿಜೆಪಿ ಎಂದರೆ ಬಿ. ಎಸ್. ಯಡಿಯೂರಪ್ಪ ಎನ್ನುವಂತಿತ್ತು. ಆದರೆ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ. ವೈ. ವಿಜಯೇಂದ್ರ ಚುನಾವಣೆ ಪ್ರಕ್ರಿಯೆಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ.

 Hanagal By Elections Prestige For Minister Shivaram Hebbar

ಬಿಜೆಪಿಯ ಕೆಲ ಮುಖಂಡರೇ ಯಡಿಯೂರಪ್ಪ ಹಾಗೂ ವಿಜಯೇಂದ್ರರನ್ನು ದೂರ ಇಡುವಂತೆ ಮಾಡಿದ್ದು, ಇದೇ ಕಾರಣಕ್ಕೆ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಂದು ಮಂತ್ರಿಯಾದವರಿಗೆ ಕ್ಷೇತ್ರದ ಚುನಾವಣೆಯ ಟಾರ್ಗೆಟ್ ನೀಡಿದ್ದಾರೆ ಎನ್ನುವ ಮಾತಿದೆ.

ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಸೇರಿದ ಶಿವರಾಮ್ ಹೆಬ್ಬಾರ್ ಮಂತ್ರಿಯಾಗಿ ಎರಡು ವರ್ಷ ಪೂರ್ಣಗೊಳ್ಳುತ್ತಾ ಬಂದಿದ್ದು, ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಬ್ದಾರಿಯನ್ನು ಪಕ್ಷ ನೀಡಿದೆ.

ಮೂಲಗಳ ಪ್ರಕಾರ ಕ್ಷೇತ್ರದ ಪ್ರಚಾರದ ಖರ್ಚನ್ನು ಸಹ ಸಚಿವರೇ ಕೊಡುವಂತೆ ಪಕ್ಷ ತಿಳಿಸಿದೆ ಎಂಬ ಮಾಹಿತಿ ಇದ್ದು, ಆಪರೇಷನ್ ಕಮಲದ ಮೂಲಕ ಬಂದ ನಾಯಕರಿಂದಲೇ ಚುನಾವಣೆಯನ್ನು ಗೆಲ್ಲಿಸಿ, ಯಡಿಯೂರಪ್ಪ ಇಲ್ಲದಿದ್ದರೂ ಬಿಜೆಪಿ ರಾಜ್ಯದಲ್ಲಿ ವರ್ಚಸ್ಸು ಕಳೆದುಕೊಂಡಿಲ್ಲ ಎಂಬುದನ್ನು ಸಾಬೀತುಪಡಿಸುವ ಚಿಂತನೆ ಪಕ್ಷದ್ದಾಗಿದೆ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ.

ಸದ್ಯ ಶಿವರಾಮ್ ಹೆಬ್ಬಾರ್ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಒಂದೊಮ್ಮೆ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದರೆ ಅದು ಸಹ ಸಚಿವರ ಮೇಲೆ ಪರಿಣಾಮ ಬೀರಲಿದೆ, ಇದೇ ಕಾರಣಕ್ಕೆ ಹಾನಗಲ್ ಉಪಚುನಾವಣೆ ಹೆಬ್ಬಾರ್ ಪಾಲಿಗೆ ಪ್ರತಿಷ್ಠೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+