Get Updates
Get notified of breaking news, exclusive insights, and must-see stories!

ಅನುಪಯುಕ್ತ ನೀರಿನಿಂದ ಸುಂದರ ವನ ನಿರ್ಮಿಸಿದಿ ಅಗ್ನಿಶಾಮಕ ಠಾಣಾಧಿಕಾರಿ ರಮೇಶ್

ಕಾರವಾರ, ಜೂ24: ನೀರು ಯಥೇಚ್ಚವಾಗಿ ಸಿಕ್ಕಾಗ ಅದರ ಮೌಲ್ಯ ಅರಿಯದೇ ಅದೇಷ್ಟೊ ಮಂದಿ ನೀರನ್ನು ಅವಶ್ಯಕತೆಗೂ ಮೀರಿ ಇಲ್ಲವೇ ಸುಮ್ಮನೆ ಪೋಲಾಗುವಂತೆ ಮಾಡುತ್ತಾರೆ. ಆದರೆ ಪುರಸಭೆಯ ಕುಡಿಯುವ ನೀರಿನ ಘಟಕದ ಅನುಪಯುಕ್ತ ನೀರನ್ನು ಬಳಸಿಕೊಂಡ ಇಲ್ಲೋರ್ವ ಅಧಿಕಾರಿ ಇದೀಗ ತೋಟವನ್ನೆ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದು,‌ ನೀರು ಬಳಸಿಕೊಳ್ಳುವುದರಲ್ಲಿ ಮಾದರಿಯಾಗಿದ್ದಾರೆ.

ಹೌದು, ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಸಾಗರ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯ ಪರಿಸರ ಸ್ನೇಹಿ ಅಧಿಕಾರಿ ಕೆ. ರಮೇಶ ಇಂತಹದೊಂದು ಮಾದರಿ ಕೆಲಸದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಮ್ಮಲ್ಲಿ ನೀರು ಪೋಲಾದರೆ ಅದರ ಸದುಪಯೋಗ ಪಡಿಸಿಕೊಳ್ಳುವ ಆಲೋಚನೆ ಮಾಡುವವರು ತೀರಾ ವಿರಳ. ಆದರೆ ಕೆ. ರಮೇಶ ಅವರು ಪುರಸಭೆಯ ಕುಡಿಯುವ ನೀರಿನ ಜಲ‌ಶುದ್ದೀಕರಣ ಘಟಕದ ನಿರುಪಯುಕ್ತ ನೀರನ್ನು ಬಳಸಿಕೊಂಡು ದೊಡ್ಡ ತೋಟವೊಂದನ್ನು ನಿರ್ಮಿಸಿದ್ದಾರೆ.

"ಠಾಣೆಯಲ್ಲಿ ಪರಿಸರ ಬೆಳಸಬೇಕು ಎಂಬುದು ಇಲ್ಲಿಗೆ ಬಂದಾಗಲೇ ಮನಸ್ಸಿಗೆ ಬಂತು. ಈ ಕೆಲಸಕ್ಕೆ ಅಗ್ನಿ ಶಾಮಕ ದಳದ ಮೇಲಾಧಿಕಾರಿಗಳು, ಅರಣ್ಯಾಧಿಕಾರಿಗಳು, ಭಟ್ಕಳದ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಮುಂದಿನ ದಿನದಲ್ಲಿ ಇನ್ನಷ್ಟು ಸುಂದರ ಪ್ರದೇಶವನ್ನಾಗಿ ಮಾಡುವ ಯೋಜನೆಯಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಅನಗತ್ಯವಾಗಿ ನೀರು ರಸ್ತೆಗೆ ಪೋಲಾಗುತ್ತಿದ್ದವು ಅದರ ಸದ್ಭಳಕೆಯಾಗಿರುವ ಸಂತಸ ಇದೆ," ಎಂದು ಅಗ್ನಿ ಶಾಮಕ ದಳದ ಠಾಣಾಧಿಕಾರಿ ಕೆ. ರಮೇಶ ಹೇಳಿದ್ದಾರೆ.

ವರ್ಷದ ಹಿಂದೆ ಠಾಣಾಧಿಕಾರಿಯಾಗಿ ನೇಮಕ

ವರ್ಷದ ಹಿಂದೆ ಠಾಣಾಧಿಕಾರಿಯಾಗಿ ನೇಮಕ

ಮೂಲತಃ ಉಡುಪಿ ಜಿಲ್ಲೆಯ ರಮೇಶ ಅವರು ಕಳೆದ 6 ವರ್ಷದ ಹಿಂದೆ ಭಟ್ಕಳ ಅಗ್ನಿಶಾಮಕ ಠಾಣೆಗೆ ಠಾಣಾಧಿಕಾರಿಯಾಗಿ ನೇಮಕಗೊಂಡಿದ್ದರು. ಠಾಣೆಗೆ ಬಂದಾಗ ಕೇವಲ ಹೆಸರಿಗೆ ಮಾತ್ರ ಅಗ್ನಿಶಾಮಕ ಠಾಣೆಯಾಗಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿತ್ತು. ಗುಡ್ಡ ಪ್ರದೇಶದಲ್ಲಿದ್ದ ಠಾಣೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ನೀರಿಗಾಗಿ ಪರಿತಪಿಸಬೇಕಾಗಿತ್ತು. ಅದರಲ್ಲಿಯೂ ಅಗ್ನಿ ಅವಘಡ ಸಂದರ್ಭದಲ್ಲಿ ಟ್ಯಾಂಕರ್ ಗಳಿಗೆ ನೀರು ತುಂಬಿಸುವುದಕ್ಕೂ ಪರದಾಡಬೇಕಿತ್ತು.

ಆದರೆ ಇದೆಲ್ಲವನ್ನು ಮನಗಂಡು ಠಾಣೆಯನ್ನು ಪರಿಸರ ಸ್ನೇಹಿಯನ್ನಾಗಿಸಲು ಮುಂದಾದ ರಮೇಶ ಠಾಣೆ ಸುತ್ತಮುತ್ತ ಗಿಡ ನೆಡುವ ಕಾರ್ಯದಲ್ಲಿ ತೊಡಗಿದ್ದರು. ಇವರ ಕಾರ್ಯಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಕೂಡ ಸಹಕಾರ ನೀಡಿದರು. ಆದರೆ ನಿತ್ಯ ಓಡಾಡುವಾಗ ಕಡವಿನಕಟ್ಟೆಯ ಬಳಿಯ ಕುಡಿಯುವ ನೀರಿನ ಜಲಶುದ್ದೀಕರಣ ಘಟಕದಿಂದ ನಿರುಪಯುಕ್ತವಾದ ನೀರು ನೇರವಾಗಿ ಗುಡ್ಡ ಪ್ರದೇಶದಿಂದ ಹರಿದು ಸಾಗರ ರಸ್ತೆಯ ಅಗ್ನಿ ಶಾಮಕ ದಳದ ಕಚೇರಿಯ ಎದುರಿಗೆ ಬಂದು ರಸ್ತೆಯ ತುಂಬೆಲ್ಲ ಹರಿಯುತ್ತಿತ್ತು. ಇದನ್ನು ತಿಂಗಳುಗಳ‌ ಕಾಲ ಗಮನಿಸಿದ ರಮೇಶ ಕೊನೆಗೆ ಇದನ್ನು ತಾವು ನೆಟ್ಟ ಗಿಡಗಳಿಗೆ ಸೇರುವಂತೆ ಮಾಡಲು ಯೋಚನೆ ಮಾಡಿದ್ದರು.

ನಿರುಪಯುಕ್ತ ನೀರು ಹರಿಯಲು ವ್ಯವಸ್ಥೆ

ನಿರುಪಯುಕ್ತ ನೀರು ಹರಿಯಲು ವ್ಯವಸ್ಥೆ

ಅದರಂತೆ ಶುದ್ಧಿಕರಣ ಘಟಕಕ್ಕೆ ಸಂಬಂಧಪಟ್ಟ ಇಲಾಖೆಯ ಜೊತೆಗೆ ಅಂದಿನ ಪಿಡಬ್ಲೂಇ ಇಲಾಖೆಯ ಎಂಜಿನಿಯರ್ ವಿನಾಯಕ ಶೇಟ್ ಅವರೊಂದಿಗೆ ಮಾತನಾಡಿ ಸಹಕಾರ ಕೋರಿದ್ದರು. ಅದರಂತೆ ಅಗ್ನಿ ಶಾಮಕ ದಳ‌ದ ಕಚೇರಿಯ ಎದುರಿನ ಗುಡ್ಡದಲ್ಲಿ ಜಲಶುದ್ದೀಕರಣ ಘಟಕದಿಂದ ಬರುವ ನಿರುಪಯುಕ್ತ ನೀರನ್ನು ಶೇಖರಿಸಿಡಲು ತಮ್ಮ ಸ್ವಂತ ಹಣ ವ್ಯಯಿಸಿ ನೀರಿನ ಟ್ಯಾಂಕ್ ಸಹ ನಿರ್ಮಿಸಿದರು. ಆದರೆ ಕಚೇರಿಯ ಎದುರಿನ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದರಿಂದ ರಸ್ತೆಯ ಮೂಲಕ ಕಚೇರಿಗೆ ನೀರಿನ ಸರಬರಾಜು ಕಷ್ಟವಾಗಿತ್ತು. ಆದರೆ, ಇಲಾಖೆಯ ಸಹಕಾರ ಹಾಗೂ ರಮೇಶ ಅವರ ಪರಿಸರ ಕಾಳಜಿ ಹಾಗೂ ಜವಾಬ್ದಾರಿಯನ್ನು‌ ಮನಗಂಡ ಸಂಬಂಧಪಟ್ಟ ಅಧಿಕಾರಗಳಿಂದ ಒಪ್ಪಿಗೆ ಪಡೆದು ರಸ್ತೆಯ ಮೂಲಕ ಪೈಪ್ ಅಳವಡಿಕೆ ಮಾಡಿ ನಿರುಪಯುಕ್ತ ನೀರು ಅಗ್ನಿ ಶಾಮಕ‌ದಳದ ಕಚೇರಿಗೆ ಬರುವಂತೆ ವ್ಯವಸ್ಥೆ ಮಾಡಿದ್ದರು.‌ ಬಳಿಕ ನೀರಿನ ಸದ್ಬಳಕೆಗಾಗಿ ಅವರು ಠಾಣೆಯ ಸುತ್ತಲು ಮತ್ತಷ್ಟು ಗಿಡಗಳನ್ನು ನೆಡಲು ಪ್ರಾರಂಭಿಸಿದರು. ಅಂದಾಜು ಒಂದು ಎಕರೆ ಜಾಗದಲ್ಲಿ ಗಿಡ ಮರಗಳನ್ನು ನೆಡಲಾಯಿತು. ನಿತ್ಯವು ಸಿಗುವ ಅವಧಿಯಲ್ಲಿ ತಾವು ನಿಟ್ಟಿರುವ ಹೂದೋಟ ಹಾಗೂ ತೋಟಕ್ಕೆ ದಿನ ನಿತ್ಯ ನಿರುಣಿಸುವ ಕೆಲಸ ಮಾಡುತ್ತಿದ್ದ ರಮೇಶ ಅವುಗಳ ಪೋಷಣೆಯೊಂದಿಗೆ ಸುಂದರವಾದ ವನ ಸೃಷ್ಟಿಸಿದ್ದಾರೆ.

ಪರಿಸರ ಉಳಿಸಿ ಬೆಳೆಸುವ ಮಹಾತ್ಕಾರ್ಯ ಸರಕಾರಿ ನೌಕರರಿಗೆ ಮಾದರಿ

ಪರಿಸರ ಉಳಿಸಿ ಬೆಳೆಸುವ ಮಹಾತ್ಕಾರ್ಯ ಸರಕಾರಿ ನೌಕರರಿಗೆ ಮಾದರಿ

ಅಗ್ನಿ ಅವಘಡ ಸಂದರ್ಭಗಳಲ್ಲಿ ಕೊರತೆಯಾಗುತ್ತಿದ್ದ ನೀರನ್ನು ಸಹ ಇದೇ ನಿರುಪಯುಕ್ತ ನೀರನ್ನು ಬಳಸಿ ಇನ್ನಷ್ಟು ಉಪಯುಕ್ತವನ್ನಾಗಿಸಿದ್ದಾರೆ. ಅಂದಾಜು ಒಂದು ಎಕರೆ ಪ್ರದೇಶದಲ್ಲಿ ಔಷಧಿ ಗಡಿಗಳು, ಅಲಂಕಾರಿಕ ಗಿಡಗಳು, ಬಾಳೆ, ತೆಂಗು, ಬಾದಾಮಿ, ಮಾವು, ಹಲಸು, ಪೇರಲೆ ಹಣ್ಣಿನ ಗಿಡಗಳನ್ನೂ ಬೆಳೆಸಲಾಗಿದೆ. ಇದೀಗ ಅಗ್ನಿಶಾಮಕ ಠಾಣೆ ಪರಿಸರಮಯವಾಗಿ ವಸಂತಕಾಲದಲ್ಲಿ ಮಾವು, ಹಲಸು ಸೇರಿದಂತೆ ವಿವಿಧ ಹಣ್ಣುಗಳನ್ನು ಇಲ್ಲಿ ಕೀಳುವಷ್ಟು ಬೆಳೆದುನಿಂತಿವೆ.

ಇನ್ನು ನಿರುಪಯುಕ್ತ ನೀರಿನ ಟ್ಯಾಂಕ್ ನಿರ್ಮಿಸಿರುವ ಹಿನ್ನೆಲೆ ಇಲ್ಲಿಗೆ ಪ್ರಾಣಿ ಪಕ್ಷಿಗಳು ನೀರು ಕುಡಿಯಲು ಸಹಾಯವಾಗಿದೆ. ಅದರಂತೆ ವಾಹನ ತೊಳೆಯಲು ಸಹ ಈ ನೀರು ಬಳಕೆಯಾಗಲಿದ್ದು, ಬಸ್, ರಿಕ್ಷಾ, ಟೆಂಪೋ ತೊಳೆಯಲು ಜನರು ಬರಲಿದ್ದಾರೆ. ಒಂದು ಟ್ಯಾಂಕನಿಂದ ಬಹು ಉಪಯೋಗವಾಗುತ್ತಿದ್ದು, ಇದಕ್ಕೆ ಠಾಣಾಧಿಕಾರಿ ಕೆ. ರಮೇಶ ಅವರಿಗೆ ಕೃತಜ್ಞತೆ ಸಲ್ಲಬೇಕು ಎನ್ನುತ್ತಾರೆ ಸಾರ್ವಜನಿಕರು.

ಅಗ್ನಿ ಶಾಮಕ ದಳದ ಠಾಣಾಧಿಕಾರಿ ಕೆ. ರಮೇಶ ಅವರ ಅವಿರತ ಶ್ರಮ ಹಾಗೂ ಪರಿಸರ ಕಾಳಜಿ ಪ್ರಮುಖವಾಗಿದ್ದು, ಓರ್ವ ಸರಕಾರಿ ನೌಕರರಲ್ಲಿ ಈ ರೀತಿಯ ಮನಸ್ಥಿತಿ ಇರುವುದು ವಿಶೇಷ. ಅಗ್ನಿ ಅವಘಡದಲ್ಲಿ ಯಾವತ್ತು ಸಾಹಸದಲ್ಲಿಯೇ ಕೆಲಸ ಮಾಡುವ ಇವರುಗಳಿಗೆ ಪರಿಸರ ಉಳಿಸಿ ಬೆಳೆಸುವ ಮಹಾತ್ಕಾರ್ಯ ಮಾಡಿರುವುದು ಉಳಿದ ಸರಕಾರಿ ನೌಕರರಿಗೆ ಮಾದರಿಯಾಗಿದ್ದಾರೆ.

ಬಿಡುವಿನ ವೇಳೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಭಾಗಿ

ಬಿಡುವಿನ ವೇಳೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಭಾಗಿ

ಭಟ್ಕಳ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 16 ಸಿಬ್ಬಂದಿ ಕೆಲಸ ಮಾಡುತ್ತಿದ್ದು, ರಮೇಶ ಅವರ ಪ್ರತಿ ಕೆಲಸಕ್ಕೆ ನಮ್ಮ ಬಿಡುವಿನ ವೇಳೆ ಈ ಸಿಬ್ಬಂದಿ ಗಿಡಗಳಿಗೆ ನೀರು ಹಾಯಿಸುವುದು, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಸದ್ಯ ಅಂದಾಜು ಒಂದು ಸಾವಿರಕ್ಕೂ ಅಧಿಕ ಸಸಿ ಗಳು ತಂದು ನೆಡಲಾಗಿದೆ. ಓರ್ವ ಅರಣ್ಯ ಇಲಾಖೆಯು ಮಾಡಬೇಕಾದ ಕೆಲಸವನ್ನು ಅಗ್ನಿ ಶಾಮಕ ಠಾಣಾಧಿಕಾರಿ ರಮೇಶ ಅವರು ಮಾಡಿರುವುದಕ್ಕೆ ಎಲ್ಲೆಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+