ಭಟ್ಕಳಕ್ಕೆ ಯಾರೂ ಹೊರಗಿನಿಂದ ಬರುವಂತಿಲ್ಲ: ಡಿಸಿ ಕಟ್ಟುನಿಟ್ಟಿನ ಆದೇಶ
ಕಾರವಾರ, ಜುಲೈ 7: ಕೊರೊನಾ ಸೋಂಕು ತೀವ್ರತರವಾಗಿ ಹರಡುತ್ತಿರುವ ಕಾರಣ ಭಟ್ಕಳಕ್ಕೆ ಹೊರ ಭಾಗದಿಂದ ಯಾರೂ ಬರುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ.
ಜುಲೈ 10ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಹೊರ ದೇಶ, ಹೊರ ರಾಜ್ಯ, ಹೊರ ಜಿಲ್ಲೆ ಮತ್ತು ಹೊರ ತಾಲ್ಲೂಕುಗಳಿಂದ ವಾಸ್ತವ್ಯದ ಉದ್ದೇಶಕ್ಕಾಗಿ ಭಟ್ಕಳ ಪುರಸಭೆ ಮತ್ತು ಜಾಲಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಿದ್ದಾರೆ.

ಭಟ್ಕಳದಲ್ಲಿ ಮಧ್ಯಾಹ್ನದಿಂದಲೇ ಲಾಕ್ ಡೌನ್
ತಾಲೂಕಿನಲ್ಲಿ ಕೋವಿಡ್- 19 ಸಾಂಕ್ರಾಮಿಕ ರೋಗದ ಸೋಂಕಿತರ ಸಂಖ್ಯೆ ವೃದ್ಧಿಸುತ್ತಿರುವುದರಿಂದ ಭಟ್ಕಳ ಪುರಸಭೆ ವ್ಯಾಪ್ತಿಯಲ್ಲಿ ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ. ಆದೇಶದ ಅನ್ವಯ, ಸಾರ್ವಜನಿಕರು ವೈದ್ಯಕೀಯ ಕಾರಣಕ್ಕೆ ಬಿಟ್ಟು ಇತರ ಯಾವುದೇ ಕಾರಣಕ್ಕಾಗಿ ಪ್ರತಿದಿನ ಮಧ್ಯಾಹ್ನ 2 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಹೊರಗಡೆ ಸಂಚರಿಸುವಂತಿಲ್ಲ ಎಂದು ಅವರು ಆದೇಶಿಸಿದ್ದಾರೆ.

ವಯಸ್ಸಾದವರು ಅನುಮತಿ ಪಡೆಯಬೇಕು
ಉಳಿದಂತೆ, ಹಳೆಯ ಆದೇಶದಲ್ಲಿದ್ದಂತೆ, ಯಾವುದೇ ಕಾರಣಕ್ಕಾಗಿ ಭಟ್ಕಳ ಉಪವಿಭಾಗಾಧಿಕಾರಿ ಅಥವಾ ಸಹಾಯಕ ಪೊಲೀಸ್ ಅಧೀಕ್ಷಕರ ಪೂರ್ವಾನುಮತಿ ಪಡೆಯದೇ 70 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು, ಗರ್ಭಿಣಿಯರು, ಬಹು ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಿಂದ ಹೊರಗೆ ಬರುವಂತಿಲ್ಲ.

ಫೀವರ್ ಕ್ಲಿನಿಕ್ ನಲ್ಲಿ ತಪಾಸಣೆ ಕಡ್ಡಾಯ
ಕೋವಿಡ್- 19 ರೋಗ ಲಕ್ಷಣ ಹೊಂದಿದ್ದವರು ಕಡ್ಡಾಯವಾಗಿ ಸರ್ಕಾರವು ನಿರ್ದಿಷ್ಟಪಡಿಸಿದ ಫೀವರ್ ಕ್ಲಿನಿಕ್ ಗಳಿಗೆ ತೆರಳಿ ತಪಾಸಣೆಯನ್ನು ಮಾಡಿಕೊಳ್ಳಬೇಕು. ತಪ್ಪಿದಲ್ಲಿ ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಎಲ್ಲಾ ರೀತಿಯ ಸಭೆ, ಸಮಾರಂಭಗಳು, ಸಾರ್ವಜನಿಕ ಮತ್ತು ಖಾಸಗಿ ಕಾರ್ಯಕ್ರಮಗಳನ್ನು (ಧಾರ್ಮಿಕ ಕಾರ್ಯಕ್ರಮಗಳನ್ನೂ ಒಳಗೊಂಡಂತೆ) ಭಟ್ಕಳ ಉಪವಿಭಾಗೀಯ ಆಡಳಿತದ ಮತ್ತು ಅಧಿಕಾರಿಗಳ ಉಪಸ್ಥಿತಿಯಲ್ಲಿಯೇ ಆಯೋಜಿಸಬೇಕು.

ಗಡಿಯೊಳಗೆ ಆಗಮನ, ನಿರ್ಗಮನ ನಿಯಂತ್ರಣ
ಕಾರ್ಯಕ್ರಮಗಳಿಗೆ ನಿಯಮಾನುಸಾರ ಅನುಮತಿ ಪಡೆಯಬೇಕು. ಭಟ್ಕಳ ಪುರಸಭೆ ವ್ಯಾಪ್ತಿಯ ಗಡಿಯೊಳಗೆ ಎಲ್ಲಾ ರೀತಿಯ ಸಾರ್ವಜನಿಕರ ಆಗಮನ ಮತ್ತು ನಿರ್ಗಮನವನ್ನು ನಿಯಂತ್ರಿಸಿದೆ. ಆದರೆ, ಇದು ಅಗತ್ಯ ಸರಂಜಾಮುಗಳ ಸಾಗಾಣಿಕೆ ಮತ್ತು ಅಧಿಕೃತ ಸರ್ಕಾರಿ ಪರವಾನಗಿ ಹೊಂದಿದವರಿಗೆ ಅನ್ವಯಿಸುವುದಿಲ್ಲ.












Click it and Unblock the Notifications