ಡೆಲಿವರಿ ಬಾಯ್ನಿಂದ ಯುವತಿ ಮೇಲೆ ಹಲ್ಲೆ: ಯಾರದ್ದು ಸರಿ, ಯಾರದ್ದು ತಪ್ಪು?
ಬೆಂಗಳೂರು, ಮಾರ್ಚ್ 11: ಆಹಾರ ಡೆಲಿವರಿ ವಿಳಂಬವಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಯುವತಿ ಮೇಲೆ ಹಲ್ಲೆ ನಡೆಸಿದ ಜೊಮ್ಯಾಟೊ ಡೆಲಿವರಿ ಬಾಯ್ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ.
ಮಂಗಳವಾರ ಮಧ್ಯಾಹ್ನ ಆಹಾರ ಆರ್ಡರ್ ಮಾಡಿ ತುಂಬಾ ಸಮಯವಾಗಿದ್ದರೂ ಡೆಲಿವರಿ ಆಗಿರಲಿಲ್ಲ. ಹೀಗಾಗಿ ಆರ್ಡರ್ ಕ್ಯಾನ್ಸಲ್ ಮಾಡುವುದಕ್ಕಾಗಿ ಗ್ರಾಹಕ ಸೇವಾ ಕೇಂದ್ರಕ್ಕೆ ಫೋನ್ ಮಾಡುವ ವೇಳೆ ಡೆಲಿವರಿ ಬಾಯ್ ಕಾಮರಾಜ್, ಸಂತ್ರಸ್ತೆ ಹಿತೇಶಾ ಚಂದ್ರಾನಿ ಮನೆಗೆ ಬಂದಿದ್ದ. ತಡವಾಗಿದ್ದರಿಂದ ಕೋಪಗೊಂಡಿದ್ದ ಯುವತಿ, ಜೊಮ್ಯಾಟೊದಿಂದ ಕರೆ ಬರುವವರೆಗೂ ಇಲ್ಲಿಯೇ ಇರಿ ಎಂದಿದ್ದಕ್ಕೆ ಆತ ಕೋಪದಿಂದ ಹಲ್ಲೆ ನಡೆಸಿದ್ದಾಗಿ ಯುವತಿ ಅರೋಪಿಸಿದ್ದಾಳೆ.
ಯಾಕಿಷ್ಟು ತಡ ಎಂದು ಕೇಳಿದ್ದಕ್ಕೆ ಯುವತಿಯ ಮೂಗು ಮುರಿದ ಜೊಮ್ಯಾಟೊ ಡೆಲಿವರಿ ಬಾಯ್
ಈ ಘಟನೆಯಿಂದ ಜೊಮ್ಯಾಟೋ ಜನರ ಆಕ್ರೋಶಕ್ಕೆ ತುತ್ತಾಗಿದೆ. ಈ ಬಗ್ಗೆ ತನಿಕೆ ನಡೆಸಿ. ಗ್ರಾಹಕರ ಜತೆ ಹೇಗೆ ನಡೆದುಕೊಳ್ಳಬೇಕು ಎಂದು ನಿಮ್ಮ ಡೆಲಿವರಿ ಬಾಯ್ಗಳಿಗೆ ಕಲಿಸಿಕೊಡಿ. ನಿಮ್ಮ ಆಪ್ಅನ್ನು ತೆಗೆದುಹಾಕಲು ಇದಕ್ಕಿಂತ ಕಾರಣ ಬೇಕಿಲ್ಲ ಎಂದೆಲ್ಲ ಕಿಡಿಕಾರಿದ್ದಾರೆ.
ವಿಡಿಯೋ ಮಾಡಿದ್ದ ಹಿತೇಶಾ
ತಮ್ಮ ಮೇಲೆ ಡೆಲಿವರಿ ಬಾಯ್ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ಹಿತೇಶಾ ಅವರು ಮೂಗಿನಿಂದ ರಕ್ತ ಸುರಿಯುತ್ತಿರುವಾಗಲೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಈ ಪ್ರಕರಣಕ್ಕೆ ಕ್ಷಮೆಯಾಚಿಸಿ ಜೊಮ್ಯಾಟೋ ಪ್ರತಿಕ್ರಿಯೆ ನೀಡಿದೆ.
ಸಹಾಯ ಮಾಡಲಿದ್ದಾರೆ
'ಹಿತೇಶಾ ಅವರೇ, ನಮ್ಮೊಂದಿಗೆ ಮಾತನಾಡಿದ್ದಕ್ಕೆ ಧನ್ಯವಾದ. ನಮ್ಮ ಡೆಲಿವರಿ ಉದ್ದೇಶವು ಈ ಅನುಭವವನ್ನು ನೀಡುವುದಕ್ಕೆ ಇರುವುದಲ್ಲ ಎಂಬ ಭರವಸೆ ಕೊಡುತ್ತೇವೆ. ಶೀಘ್ರದಲ್ಲಿಯೇ ನಮ್ಮ ಸ್ಥಳೀಯ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸಲಿದ್ದು, ಪೊಲೀಸ್ ತನಿಖೆಯಲ್ಲಿ ನಿಮಗೆ ಸಹಾಯ ಮಾಡಲಿದ್ದಾರೆ' ಎಂದು ಅವರ ವಿಡಿಯೋಕ್ಕೆ ಪ್ರತಿಕ್ರಿಯಿಸಿದೆ.
ಯುವತಿ ಮೂಗು ಮುರಿದಿದ್ದ ಜೊಮ್ಯಾಟೊ ಡೆಲಿವರಿ ಬಾಯ್ ಬಂಧನ
ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ
'ನಮ್ಮ ಪ್ರತಿನಿಧಿಯು ಅಗತ್ಯ ವೈದ್ಯಕೀಯ ನೆರವು ಒದಗಿಸಲಿದ್ದಾರೆ. ನಾವು ಈ ಘಟನೆ ಬಗ್ಗೆ ಎಷ್ಟು ಬೇಸರಗೊಂಡಿದ್ದೇವೆ ಎಂದು ಹೇಳಲಾಗುತ್ತಿಲ್ಲ. ಅದರಾಚೆಗೆ, ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡುತ್ತೇವೆ' ಎಂದು ಜೊಮ್ಯಾಟೋ ತಿಳಿಸಿತ್ತು.
ಡೆಲಿವರಿ ಬಾಯ್ ಅಮಾನತು
'ಕಂಪೆನಿಯ ಅಧಿಕಾರಿಗಳು ಹಿತೇಶಾ ಅವರೊಂದಿಗೆ ಮಾತನಾಡಿದ್ದಾರೆ. ಅವರಿಗೆ ಸಂಪೂರ್ಣ ನೆರವು ನೀಡುವುದಾಗಿ ತಿಳಿಸಿದ್ದಾರೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ನಮ್ಮ ನಿಯಮದಂತೆ ವಿಚಾರಣೆ ಮುಗಿಯುವವರೆಗೂ ಡೆಲಿವರಿ ಬಾಯ್ನನ್ನು ಅಮಾನತು ಮಾಡಲಾಗಿದೆ. ನಮ್ಮ ತಂಡವು ಆತನಿಂದ ಎಲ್ಲ ಮಾಹಿತಿ ಪಡೆಯುತ್ತಿದೆ. ಮುಂದಿನ ಕ್ರಮಗಳನ್ನು ಅನುಸರಿಸಲಾಗುವುದು' ಎಂದು ಕಂಪೆನಿ ತಿಳಿಸಿದೆ.
ಯಾರದು ಸರಿ, ಯಾರದು ತಪ್ಪು?
ಇದೇ ವೇಳೆ ಅನೇಕರು ಜೊಮ್ಯಾಟೋದಿಂದ ತಮಗೆ ಆದ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅದರೆ ಅನೇಕರು ಜೊಮ್ಯಾಟೋ ಹಾಗೂ ಅದರ ಡೆಲಿವರಿ ಬಾಯ್ ಪರ ಧ್ವನಿ ಎತ್ತಿದ್ದಾರೆ. ಆಕೆಯ ಹೇಳುವುದು ಒಂದು ಆಯಾಮದ ಕಥೆ. ವಾಸ್ತವ ಬೇರೆಯೀ ಇರಬಹುದು. ಎಷ್ಟೋ ಗ್ರಾಹಕರು ಡೆಲಿವರಿ ಬಾಯ್ಗಳನ್ನು ಕೀಳಾಗಿ ನೋಡುತ್ತಾರೆ. ದೂರದ ಸ್ಥಳಗಳಿಗೆ ಟ್ರಾಫಿಕ್ ನಡುವೆ ಹೇಳಿದ ಸಮಯಕ್ಕೆ ಆಹಾರ ತಲುಪಿಸುವುದು ಸುಲಭವಲ್ಲ. ಗ್ರಾಹಕರು ಮತ್ತು ಕಂಪೆನಿಯ ಒತ್ತಡದ ಕಾರಣದಿಂದ ಸಿಗ್ನಲ್ ಜಂಪ್ನಂತಹ ಪ್ರಕರಣಗಳಲ್ಲಿ ಸಿಲುಕಿ ದಂಡ ತೆರುವ ಡೆಲಿವರಿ ಬಾಯ್ಗಳ ಸಹಾಯಕ್ಕೆ ಯಾರೂ ಬರುವುದಿಲ್ಲ ಎಂದಿದ್ದಾರೆ.
Recommended Video
ಡೆಲಿವರಿ ಬಾಯ್ ಹೇಳಿದ್ದೇನು?
ಹಿತೇಶಾ ಅವರು ತನಗೆ ಚಪ್ಪಲಿಯಿಂದ ಹೊಡೆದಿದ್ದಾಗಿ ಮತ್ತು ತಾನು ಆತ್ಮರಕ್ಷಣೆಯ ಪ್ರಯತ್ನ ಮಾಡಿದಾಗ ಆಕೆಗೆ ಬಾಗಿಲು ತಾಗಿ ಗಾಯವಾಗಿದೆ ಎಂದು ಡೆಲಿವರಿ ಬಾಯ್ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಇದಕ್ಕೆ ವಿರುದ್ಧವಾಗಿ ಹಿತೇಶಾ ಹೇಳಿಕೆ ನೀಡಿದ್ದು, ಆತ ಬಲವಂತವಾಗಿ ಮನೆಯ ಒಳಗೆ ಬಂದಾಗ ಆತ್ಮರಕ್ಷಣೆಗಾಗಿ ತಾನು ಚಪ್ಪಲಿ ತೆಗೆದು ಹೊಡೆಯಲು ಹೋಗಿದ್ದು, ಆಗ ಆತ ಮುಖಕ್ಕೆ ಗುದ್ದಿದ್ದಾನೆ ಎಂದು ಆರೋಪಿಸಿದ್ದಾರೆ.