ಕರಿಯ ತಂದ ಕುತ್ತು; ಜಮೀರ್ ವಿರುದ್ಧ ಕ್ರಮ: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ನವೆಂಬರ್18: ಕುಮಾರಸ್ವಾಮಿ ವಿರುದ್ಧ ಆ ರೀತಿಯ ಪದ ಪ್ರಯೋಗ ಸರಿ ಅಲ್ಲ ಎಂದು ಸಚಿವ ಜಮೀರ್ ಅವರ ವಿರುದ್ಧ ಸ್ವಪಕ್ಷವದವರೇ ಸಿಡಿದೆದ್ದಿದ್ದಾರೆ. ಜಮೀರ್ ಹೇಳಿಕೆ ಎಫೆಕ್ಟ್ ಚನ್ನಪಟ್ಟಣ ಚುನಾವಣೆ ಮೇಲು ಬಿದ್ದಿದೆ ಎಂದು ಇತ್ತೀಚೆಗೆ ಸಿಪಿ ಯೋಗೇಶ್ವರ್ ಆರೋಪ ಮಾಡಿದ್ದು, ಜಮೀರ್ ಹೇಳಿಕೆ ತಪ್ಪು ಅವರನ್ನ ತಿದ್ದುವ ಕೆಲಸ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಕುಮಾರಸ್ವಾಮಿ ಅವರ ಬಗ್ಗೆ ಸಚಿವ ಜಮೀರ್ ಅವರು ಕರಿಯ ಎಂದು ಪದ ಬಳಸಿರುವುದು ತಪ್ಪು. ಅವರನ್ನು ತಿದ್ದುತ್ತೇವೆ. ಕ್ರಮ ತೆಗೆದುಕೊಳ್ಳುವ ಬಗ್ಗೆ ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಜಮೀರ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೆಪಿಸಿಸಿ ಉಪಾಧ್ಯಕ್ಷ ಎ.ಆರ್.ಎಂ. ಹುಸೇನ್ ಅವರು ಪತ್ರ ಬರೆದಿದ್ದು, ಜಮೀರ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಿರ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರಿಬ್ಬರ ಆಂತರಿಕ ವಿಚಾರ. ಆದರೂ ಜಮೀರ್ ಅವರು ಕುಮಾರಸ್ವಾಮಿ ಬಗ್ಗೆ ಕಪ್ಪು, ಬಿಳುಪು ಹಾಗೂ ಆಸ್ತಿ ವಿಚಾರವನ್ನೆಲ್ಲ ಮಾತನಾಡಬಾರದಿತ್ತು. ಜಮೀರ್ ಅವರು ಪ್ರೀತಿಯಿಂದ, ಸಲಿಗೆಯಿಂದ ಮಾತನಾಡಿದ್ದಾರೋ ಗೊತ್ತಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿ ಅವರು ಮಾತನಾಡಿದ್ದು ತಪ್ಪು ಎಂದು ಹೇಳುತ್ತಿದ್ದೇನೆ. ಇದನ್ನು ಅವರಿಗೆ ಆಂತರಿಕವಾಗಿ ಹೇಳಿದ್ದೀವೆ. ಅದಕ್ಕೆ ಅವರು ಈಗಾಗಲೇ ಕ್ಷಮೆ ಕೇಳಿದ್ದಾರೆ ಎಂದು ಹೇಳಿದ್ದಾರೆ.
ಜಮೀರ್ ಅವರನ್ನು ಕುಮಾರಸ್ವಾಮಿ ಅವರು ಕೊಚ್ಚೆ ಎಂದು ಕರೆದಿರುವ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ನಾನು ಮೊದಲೇ ಹೇಳಿದಂತೆ ಇದು ಅವರಿಬ್ಬರಿಗೆ ಬಿಟ್ಟ ವಿಚಾರ. ಅವರು ಕೊಚ್ಚೆ ಎಂದು, ಇವರು ಕರಿಯ ಎಂದು ಕರೆದಿದ್ದನ್ನು ಜನರು ನೋಡಿದ್ದಾರೆ. ಅವರು ಇದನ್ನು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.












Click it and Unblock the Notifications