ಪರಿಷತ್ ಮೈತ್ರಿ : ಕುಮಾರಸ್ವಾಮಿಯನ್ನು ಚರ್ಚೆಗೆ ಆಹ್ವಾನಿಸಿದ ಜಮೀರ್!
ಬೆಂಗಳೂರು, ನವೆಂಬರ್ 26 : ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಮಾಡಿಕೊಳ್ಳುವ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಜಮೀರ್ ಅಹಮದ್ ಖಾನ್ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ. ಮೈತ್ರಿ ಬಗ್ಗೆ ನಾಲ್ಕು ದಿನ ಕಾದು ನೋಡುವಂತೆ ದೇವೇಗೌಡರು ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಮಾಡಿಕೊಳ್ಳುವ ಕುರಿತು ಬಗ್ಗೆ ಮಾತುಕತೆಗಳು ಆರಂಭವಾಗಿವೆ. ಆದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿ ಬಗ್ಗೆ ಅಸಮಾಧಾನಗೊಂಡಿದ್ದಾರೆ. [ಕುಮಾರಸ್ವಾಮಿ ರಾಜೀನಾಮೆ ಮಾತಾಡಿದ್ದು ಏಕೆ?]
ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರ ಜೊತೆ ಈಗಾಗಲೇ ಮೈತ್ರಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಪಕ್ಷದ ಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳುವ ಚರ್ಚೆ ನಡೆದಿಲ್ಲ ಎಂದು ಹೇಳುತ್ತಿದ್ದಾರೆ. ['ಪರಿಷತ್ ಚುನಾವಣೆಗೆ ರಮ್ಯಾಗೆ ಟಿಕೆಟ್ ಕೊಡಬೇಡಿ']
ಸದ್ಯ, ಎಲ್ಲಾ ಗೊಂದಲಗಳಿಗೆ ಜಮೀರ್ ಅಹಮದ್ ಖಾನ್ ಮತ್ತು ಚೆಲುವರಾಯಸ್ವಾಮಿ ಅವರು ತೆರೆ ಎಳೆದಿದ್ದು, 'ಪಕ್ಷದ ನಾಯಕರ ಸೂಚನೆ ಸಿಕ್ಕಮೇಲೆ ಮೈತ್ರಿ ಮಾತುಕತೆ ನಡೆಸಿದ್ದೇವೆ. ಒಂದು ವೇಳೆ ಕುಮಾರಸ್ವಾಮಿ ಅವರು ಒಪ್ಪಿಗೆ ನೀಡದಿದ್ದರೆ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ' ಎಂದು ಸ್ಪಷ್ಟಪಡಿಸಿದ್ದಾರೆ....... ಜಮೀರ್ ಮತ್ತು ಚೆಲುವರಾಯಸ್ವಾಮಿ ಹೇಳಿದ್ದೇನು? ಚಿತ್ರಗಳಲ್ಲಿ ನೋಡಿ....

ಮಾತುಕತೆಗೆ ಬನ್ನಿ ಅಂದ್ರು ಜಮೀರ್ ಅಹಮದ್
ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಬಗ್ಗೆ ಗುರುವಾರ ಮಾತನಾಡಿರುವ ಶಾಸಕ ಜಮೀರ್ ಅಮಹದ್ ಖಾನ್ ಅವರು, 'ಪಕ್ಷದ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕವೇ ದಿಗ್ವಿಜಯ್ ಸಿಂಗ್ ಜೊತೆ ಮೈತ್ರಿ ಬಗ್ಗೆ ಚರ್ಚೆ ನಡೆಸಿದ್ದೇವೆ. ಈ ಬಗ್ಗೆ ಕುಮಾರಸ್ವಾಮಿ ಅವರು ಬೇಕಾದರೆ ಚರ್ಚೆಗೆ ಬರಲಿ' ಎಂದು ಹೇಳಿದರು.

'ನಾವು ಮಾತ್ರ ಹೇಗೆ ಹೋಗಲು ಸಾಧ್ಯ'
'ಚುನಾವಣೆಯಲ್ಲಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ನಾವು ಮಾತ್ರ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಪಕ್ಷದ ನಾಯಕರು ಈ ಬಗ್ಗೆ ಸೂಚನೆ ನೀಡಿದ ಬಳಿಕವೇ ಚರ್ಚೆ ನಡೆಸಿದ್ದೇವೆ. ಸಿಂಗ್ ಈ ಕುರಿತು ಕೆಪಿಸಿಸಿ ಅಧ್ಯಕ್ಷರ ಜೊತೆ ಚರ್ಚೆ ನಡೆಸಿ ನಂತರ ಹೇಳುತ್ತೇವೆ' ಎಂದು ತಿಳಿಸಿದ್ದಾರೆ ಎಂದು ಜಮೀರ್ ಅಹಮದ್ ಖಾನ್ ಹೇಳಿದರು.

4 ದಿನ ಕಾದು ನೋಡಲು ಸಲಹೆ
'ಮೈತ್ರಿ ಮಾತುಕತೆಯ ಬಗ್ಗೆ 4 ದಿನ ಕಾದು ನೋಡಿ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. 'ದೇವೇಗೌಡರು ಕುಮಾರಸ್ವಾಮಿ ಅವರ ಮನವೊಲಿಸಲಿದ್ದಾರೆ. ಕುಮಾರಸ್ವಾಮಿ ಅವರು ಒಪ್ಪದಿದ್ದರೆ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ' ಎಂದು ಚೆಲುವರಾಯಸ್ವಾಮಿ ಹೇಳಿದರು.

ಮೈತ್ರಿಗೆ ಕುಮಾರಸ್ವಾಮಿ ಒಪ್ಪಿಗೆ ಇಲ್ಲ?
ಮೈತ್ರಿ ಮಾತುಕತೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದು ಪಕ್ಷದ ಮೂಲಗಳ ಮಾಹಿತಿ. 'ಮೈತ್ರಿ ಮಾಡಿಕೊಂಡರೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವೆ' ಎಂದು ಕುಮಾರಸ್ವಾಮಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.

ಮೈತ್ರಿ ಬಗ್ಗೆ ಸ್ಪಷ್ಟನೆ ನೀಡಿದ ದೇವೇಗೌಡ
ಗುರುವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಮಾತನಾಡಿರುವ ಎಚ್.ಡಿ.ದೇವೇಗೌಡರು, 'ನನ್ನ ಅನುಮತಿ ನಂತರವೇ ಜಮೀರ್ ಅಹಮದ್ ಅವರು ದಿಗ್ವಿಜಯ್ ಸಿಂಗ್ ಜೊತೆ ಮಾತುಕತೆ ನಡೆಸಿದ್ದಾರೆ. ಆದರೆ, ಕುಮಾರಸ್ವಾಮಿ ಅವರನ್ನು ಬಿಟ್ಟು ನಾವು ಯಾವುದೇ ನಿರ್ಧಾರವನ್ನು ಕೈಗೊಳ್ಳುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ಘೋಷಣೆಯಾಗಿದೆ
ಶಿಕ್ಷಕರ, ಪದವೀಧರರ ಕ್ಷೇತ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ 25 ಸದಸ್ಯರ ಆಯ್ಕೆಗೆ ನಡೆಯುವ ಚುನಾವಣೆಯ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. ಡಿಸೆಂಬರ್ 27ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 30ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications