Z+ ಭದ್ರತೆಗಾಗಿ ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ
ಬೆಂಗಳೂರು, ಮಾರ್ಚ್ 16 : ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ z+ ಶ್ರೇಣಿ ಭದ್ರತೆಗಾಗಿ ಬೇಡಿಕೆ ಇಟ್ಟಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಈ ಕುರಿತು ಸಿದ್ದರಾಮಯ್ಯ ಪತ್ರವನ್ನು ಬರೆದಿದ್ದಾರೆ.
ಸೋಮವಾರ ಸಿದ್ದರಾಮಯ್ಯ ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ. "ನನಗೆ ಒದಗಿಸಲಾಗಿದ್ದ z+ ಶ್ರೇಣಿ ಭದ್ರತೆಯನ್ನು ಮುಂದುವರೆಸಲು ಸಂಬಂಧಪಟ್ಟವರಿಗೆ ಸೂಚಿಸುವಂತೆ ಕೋರುತ್ತೇನೆ" ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ದಿನದಿಂದ ಅವರಿಗೆ z+ ಶ್ರೇಣಿ ಭದ್ರತೆಯನ್ನು ನೀಡಲಾಗಿತ್ತು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗಲೂ ಸಿದ್ದರಾಮಯ್ಯಗೆ ಇದ್ದ ಭದ್ರತೆಯನ್ನು ವಾಪಸ್ ಪಡೆದಿರಲಿಲ್ಲ. ಈಗ ಭದ್ರತೆ ವಾಪಸ್ ಪಡೆದಿದ್ದರಿಂದ ಅವರು ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ.
ಕರ್ನಾಟಕ ಸರ್ಕಾರ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರಿಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆದಿತ್ತು. ಮೈತ್ರಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದವರಿಗೆ 'ಬಿ' ಭದ್ರತಾ ಶ್ರೇಣಿಯನ್ನು ನೀಡಲಾಗಿತ್ತು. ಇದನ್ನು ವಾಪಸ್ ಪಡೆಯಲಾಗಿತ್ತು.

ಪತ್ರದಲ್ಲಿ ಏನಿದೆ?
ಮಾನ್ಯ ಶ್ರೀ ಯಡಿಯೂರಪ್ಪ ನವರೆ, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಯಾದ ನನಗೆ z+ ಶ್ರೇಣಿ ಭದ್ರತೆ ಒದಗಿಸಲಾಗಿದ್ದು, ನಾನು ರಾಜ್ಯಾದ್ಯಂತ ನಿರಂತರ ಪ್ರವಾಸ ಕೈಗೊಳ್ಳುತ್ತಿರುತ್ತೇನೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜೀವ ಬೆದರಿಕೆ ಪತ್ರಗಳು ಬಂದಿವೆ
ರಾಜ್ಯ ಪ್ರವಾಸದ ಸಂದರ್ಭದಲ್ಲಿ ಅಸಂಖ್ಯಾತ ಜನರನ್ನು ಭೇಟಿಯಾಗುತ್ತಿರುತ್ತೇನೆ. ಅಲ್ಲದೇ ಕೆಲವು ಜೀವ ಬೆದರಿಕೆ ಪತ್ರಗಳು ಬಂದಿರುತ್ತವೆ. ಆದುದರಿಂದ ನನಗೆ ಪೊಲೀಸ್ ಮುಂಗಾವಲು/ಬೆಂಗಾವಲು ಪಡೆಯ ರಕ್ಷಣೆ ಅಗತ್ಯವಾಗಿ ಬೇಕಾಗಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಭದ್ರತೆ ಮುಂದುವರೆಸಲು ಕೋರುತ್ತೇನೆ
ಆದುದರಿಂದ ನನಗೆ ಒದಗಿಸಲಾಗಿದ್ದ z+ ಶ್ರೇಣಿ ಭದ್ರತೆಯನ್ನು ಮುಂದುವರೆಸಲು ಸಂಬಂಧಪಟ್ಟವರಿಗೆ ಸೂಚಿಸುವಂತೆ ಕೋರುತ್ತೇನೆ. ವಂದನೆಗಳೊಂದಿಗೆ ಸಿದ್ದರಾಮಯ್ಯ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಭದ್ರತೆ ನೀಡಲಿದೆಯೇ ಸರ್ಕಾರ?
ಸಿದ್ದರಾಮಯ್ಯ 'ಕಾವೇರಿ' ನಿವಾಸದಲ್ಲಿಯೇ ಇರಲು ಯಡಿಯೂರಪ್ಪಗೆ ಮನವಿ ಮಾಡಿದ್ದರು. ಆದರೆ, ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿರಲಿಲ್ಲ. ಈಗ z+ ಶ್ರೇಣಿ ಭದ್ರತೆ ನೀಡಲು ಒಪ್ಪಿಗೆ ನೀಡಲಿದ್ದಾರೆಯೇ? ಎಂದು ಕಾದು ನೋಡಬೇಕು.











Click it and Unblock the Notifications