ಕಂಬಳ ನಿಷೇಧ ತೆರವು; ಎರಡು ವಾರ ವಿಚಾರಣೆ ಮುಂದೂಡಿದ ಹೈಕೋರ್ಟ್
ಕಂಬಳ ತೆರವಿಗಾಗಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಎರಡು ವಾರಗಳ ಕಾಲ ಮುಂದೂಡಿದೆ. ಸುಪ್ರಿಂ ಕೋರ್ಟಿನ ಜಲ್ಲಿಕಟ್ಟು ಆದೇಶವನ್ನು ಕಾದು ನೋಡುವಂತೆ ಕಂಭಲ ಸಮಿತಿಯವರಿಗೆ ಹೇಳಿದೆ.
ಬೆಂಗಳೂರು, ಜನವರಿ 30: ಕಂಬಳದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಎರಡು ವಾರಗಳ ಕಾಲ ಮುಂದೂಡಿದೆ. ಜಲ್ಲಿಕಟ್ಟು ಕ್ರೀಡೆಯ ಮೇಲೆ ಸುಪ್ರಿಂ ಕೋರ್ಟಿನಲ್ಲಿರುವ ತಡೆ ಆದೇಶ ಏನಾಗಲಿದೆ ಎಂಬುದನ್ನು ಕಾದು ನೋಡುವಂತೆ ಮುಖ್ಯ ನ್ಯಾಯಮೂರ್ತಿ ಎಸ್.ಕೆ ಮುಖರ್ಜಿ ನೇತೃತ್ವದ ನ್ಯಾಯಪೀಠ ಅರ್ಜಿದಾರರಿಗೆ ಸೂಚಿಸಿದೆ.
ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡುವುದಿಲ್ಲ ಎಂಬ ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ ಮುಖರ್ಜಿ, "ಕೋಣಗಳ ಬದಲು ನಿಮ್ಮನ್ನು ಓಡುವಂತೆ ಮಾಡಬೇಕು," ಎಂದು ಚಟಾಕಿ ಹಾರಿಸಿದರು. ವಿಚಾರಣೆ ಮುಂದೂಡುವ ಮೊದಲು 'ಓಟಕ್ಕೆ ಮೊದಲು ಕೋಣಗಳ ಮೇಲೆ ಮೆಣಸಿನ ಪುಡಿ ಎರಚಲಾಗುತ್ತದೆ,' ಎಂಬುದನ್ನೂ ಮುಖರ್ಜಿ ಪ್ರಸ್ತಾಪಿಸಿದ್ದಾರೆ.[ಕಂಬಳ ಎಂದರೇನು? ಕಂಬಳ ನಮಗೇಕೆ ಬೇಕು?]

2014ರಲ್ಲಿ ಕಂಬಳವನ್ನೂ ಸೇರಿಸಿ ಸುಪ್ರಿಂ ಕೋರ್ಟ್ ಪ್ರಾಣಿಗಳನ್ನು ಬಳಸುವ ಕ್ರೀಡೆಗಳಿಗೆ ನಿಷೇಧ ಹೇರಿತ್ತು. ನಂತರ 2015ರಲ್ಲಿ ಕರ್ನಾಟಕ ಹೈಕೋರ್ಟ್ ಕಂಬಳ ನಡೆಸಲು ಷರತ್ತು ಬದ್ದ ಅವಕಾಶ ನೀಡಿತ್ತು. ಆದರೆ ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಪೇಟಾ, ಕಂಬಳ ಕಾನೂನು ಬಾಹಿರ ಎಂದು ಮತ್ತೆ 2016ರಲ್ಲಿ ಹೈ ಕೋರ್ಟ್ ಮೊರೆ ಹೋಗಿತ್ತು. ಆ ಸಂದರ್ಭದಲ್ಲಿ ಕಂಬಳಕ್ಕೆ ಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಈ ತಡೆ ತೆರವುಗೊಳಿಸುವಂತೆ ಸಮಿತಿ ಈಗ ಹೈಕೋರ್ಟ್ ಮೊರೆ ಹೋಗಿದೆ.[ಇದು ಕಂಬಳದ ಅನಭಿಷಕ್ತ ದೊರೆಯ ಇಂಟೆರೆಸ್ಟಿಂಗ್ ಕಥೆ..!]
ಇದೀಗ ವಿಭಾಗಿಯ ಪೀಠ ಅರ್ಜಿದಾರರಿಗೆ ಎರಡು ವಾರಗಳ ಕಾಲ ಕಾಯಲು ಸೂಚಿಸಿದೆ. ಸುಪ್ರಿಂ ಕೋರ್ಟ್ ಜಲ್ಲಿಕಟ್ಟಿಗೆ ಸಂಬಂಧಿಸಿದಂತೆ ನೀಡುವ ಆದೇಶ ನೋಡಿಕೊಂಡು ಮರಳಿ ಬರುವಂತೆ ಪೀಠ ಹೇಳಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications