ಪುತ್ರನನ್ನು ಶಾಸಕನನ್ನಾಗಿಸಲು ಯಡಿಯೂರಪ್ಪ ಸೂಪರ್ ಪ್ಲಾನ್
Recommended Video
ಮೈಸೂರು, ಸೆಪ್ಟೆಂಬರ್ 25: ಸಿದ್ದರಾಮಯ್ಯ ಪುತ್ರ ಶಾಸಕರಾದ ಬೆನ್ನಲ್ಲೆ ಕುಮಾರಸ್ವಾಮಿ ಅವರು ತಮ್ಮ ಪುತ್ರನನ್ನು ಸಂಸದರನ್ನಾಗಿಸುವ ಯತ್ನಕ್ಕೆ ಕೈಹಾಕಿ ಕೈ ಸುಟ್ಟುಕೊಂಡರು. ಇದೀಗ ಯಡಿಯೂರಪ್ಪ ಅವರು ಸಹ ತಮ್ಮ ಪುತ್ರನನ್ನು ಶಾಸಕನನ್ನಾಗಿಸುವ ಕಾರ್ಯವನ್ನು ಆರಂಭಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರ ಎರಡನೇ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಕೆ.ಆರ್.ಪೇಟೆ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಯಡಿಯೂರಪ್ಪ ಅವರು ತೆರೆಮರೆಯಲ್ಲಿ ಲೆಕ್ಕಾಚಾರ ಪ್ರಾರಂಭಿಸಿದ್ದಾರೆ. ಬಿ.ವೈ.ರಾಘವೇಂದ್ರ ಈಗಾಗಲೇ ಸಂಸದರಾಗಿ ಎರಡನೇ ಬಾರಿ ಆಯ್ಕೆ ಆಗಿದ್ದಾರೆ.
ವಿಜಯೇಂದ್ರ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಸ್ಪರ್ಧೆ ಮಾಡಲು ತುದಿಗಾಲಲ್ಲಿ ನಿಂತಿದ್ದರು. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪುತ್ರನ ಎದುರಿಗೆ ಸ್ಪರ್ಧಿಸಲು ಅವರು ಅವಕಾಶ ಕೇಳಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಅವರಿಗೆ ಟಿಕೆಟ್ ನಿರಾಕರಿಸಿತ್ತು.
ಆದರೆ ಈ ಬಾರಿ ಉಪಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಯಡಿಯೂರಪ್ಪ ಅವರೇ ವಹಿಸಿಕೊಂಡಿದ್ದು, ಹೈಕಮಾಂಡ್ನ ಹಸ್ತಕ್ಷೇಪ ಇದರಲ್ಲಿ ಇಲ್ಲ. ಹಾಗಾಗಿ ವಿಜಯೇಂದ್ರಗೆ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.

ಕೆ.ಆರ್.ಪೇಟೆ ಕ್ಷೇತ್ರದಿಂದ ವಿಜಯೇಂದ್ರಗೆ ಟಿಕೆಟ್?
ಕೆ.ಆರ್.ಪೇಟೆ ಕ್ಷೇತ್ರದಿಂದ ವಿಜಯೇಂದ್ರಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ. ಇಲ್ಲಿನ ಜೆಡಿಎಸ್ ಶಾಸಕ ನಾರಾಯಣಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿರುವ ಕಾರಣ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ನಾರಾಯಣಗೌಡ ಅವರಿಗೇ ಇಲ್ಲಿನ ಟಿಕೆಟ್ ನೀಡಬೇಕು ಎಂಬ ಕೂಗು ಇದೆ. ಒಂದು ವೇಳೆ ಸುಪ್ರೀಂಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಬಂದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ಖಾಯಂ ಎನ್ನಲಾಗುತ್ತಿದೆ.

ಕೆ.ಆರ್.ಪೇಟೆ ಬಿಟ್ಟು ಬೇರೆ ಕ್ಷೇತ್ರಗಳ ಮೇಲೆಯೂ ಕಣ್ಣು
ವಿಜಯೇಂದ್ರ ಅವರಿಗೆ ಕೆ.ಆರ್.ಪೇಟೆ ಜೊತೆಗೆ ಇನ್ನೂ ಕೆಲವು ಕ್ಷೇತ್ರಗಳ ಮೇಲೆ ಕಣ್ಣಿಡಲಾಗಿದೆ. ಬೆಂಗಳೂರು ನಗರದ ಯಶವಂತಪುರ ಅಥವಾ ಮಹಾಲಕ್ಷ್ಮಿ ಲೇಔಟ್. ಚಿತ್ರದುರ್ಗದ ಹಿರೇಕೆರೂರು, ಅಥಣಿ ಕ್ಷೇತ್ರಗಳ ಮೇಲೂ ಯಡಿಯೂರಪ್ಪ ಕಣ್ಣಿದೆ ಎನ್ನಲಾಗಿದೆ.

ಆಪರೇಷನ್ ಕಮಲದಲ್ಲಿ ವಿಜಯೇಂದ್ರ ಪ್ರಮುಖ ಪಾತ್ರ
ವಿಜಯೇಂದ್ರ ಅವರು ಪ್ರಸ್ತುತ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಪ್ಪನ ಸ್ವಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುವ ಜೊತೆಗೆ, ಈ ಬಾರಿ ಆಪರೇಷನ್ ಕಮಲದಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದರು. ವಿಜಯೇಂದ್ರ ಅವರಿಗೆ ಸಕ್ರಿಯ ರಾಜಕೀಯದ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದು, ಅವರಿಗೆ ರಾಜಕೀಯ ನೆಲೆಯನ್ನು ಕಲ್ಪಿಸಲು ಯಡಿಯೂರಪ್ಪ ಅವರು ಬ್ಲೂಪ್ರಿಂಟ್ ತಯಾರಿಸಿದ್ದಾರೆ.

ನಾರಾಯಣಗೌಡ ಪತ್ನಿಗೂ ಇದೆ ಅವಕಾಶ
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಾರಾಯಣಗೌಡ ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ. ನಾರಾಯಣಗೌಡ ಅವರ ಪತ್ನಿ ದೇವಿಕಾ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿಯೂ ಹರಡಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿ ವಿಜಯೇಂದ್ರ ಹೆಸರು ಮುಂಚೂಣಿಗೆ ಬಂದಿದೆ.












Click it and Unblock the Notifications