ದೇಶದ ರಫ್ತಿನ ಶೇ.17.8 ರಷ್ಟು ಪಾಲನ್ನು ರಾಜ್ಯ ಹೊಂದಿದೆ: ಬಿಎಸ್ವೈ

ಬೆಂಗಳೂರು, ಆಗಸ್ಟ್ 6, 2019: ರಾಜ್ಯದಲ್ಲಿ ಕೈಗಾರಿಕಾಭಿವೃದ್ದಿಗೆ ಪೂರಕ ವಾತಾವರಣ ನಿರ್ಮಿಸಲು ರಾಜ್ಯ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಹೇಳಿದರು. ಉದ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಿದ ಉದ್ಯಮಗಳಿಗೆ ಮತ್ತು ವ್ಯಕ್ತಿಗಳಿಗೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರ್.ಎಂ.ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದನಾ ಪ್ರಶಸ್ತಿಗಳನ್ನು ಮತ್ತು ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳನ್ನು ವಿತರಿಸಿ ಗೌರವಿಸಿದರು.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ವಿತರಿಸಿದರು. ನಂತರ ಮಾತಾನಾಡಿದ ಅವರು, ಕರ್ನಾಟಕ ರಾಜ್ಯ ಮೊದಲಿನಿಂದಲೂ ಕೈಗಾರಿಕೆಗಳ ಅಭಿವೃದ್ದಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಸರಕು ಕ್ಷೇತ್ರ, ಉದ್ಯಮ, ಕೈಗಾರಿಕೆ ಹಾಗೂ ಐಟಿ ಬಿಟಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿಶಿಷ್ಠ ಹೆಸರನ್ನು ಪಡೆದುಕೊಂಡಿರುವ ನಗರ ಬೆಂಗಳೂರು. ಈ ನಗರದಿಂದಲೇ ಚಂದ್ರಯಾನ ನಿರ್ವಹಣೆಯನ್ನು ಮಾಡಲಾಗುತ್ತಿರುವುದು ಬಹಳ ಸಂತಸದ ವಿಷಯ ಎಂದು ಹೇಳೀದರು.

ದೇಶದ ಆರ್ಥಿಕತೆಯ ಅಭಿವೃದ್ದಿಗೆ ಕೈಗಾರಿಕಾ ಕ್ಷೇತ್ರದ ಕೊಡುಗೆ ಅಪಾರ. ಕೈಗಾರಿಕಾ ನೀತಿಯನ್ನು ರೂಪಿಸಿದ ಮೊದಲ ರಾಜ್ಯ ನಮ್ಮದು ಎನ್ನುವ ಹೆಗ್ಗಳಿಕೆಯೂ ಇದೆ. ಕೈಗಾರಿಕಾ ನೀತಿಯಲ್ಲಿ ಆಗಬೇಕಾಗಿರುವ ಅನೇಕ ಅಂಶಗಳನ್ನು ಗಣನೆಗೆ ತಗೆದುಕೊಂಡು, ಕೈಗಾರಿಕಾ ಸಂಸ್ಥೆಗಳು ಹಾಗೂ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಹೊಸ ಕೈಗಾರಿಕಾ ನೀತಿ 2019 ನ್ನು ಶೀಘ್ರದಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯತತ್ಪರವಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ವಿವಿಧ ಉದ್ಯಮಗಳ ಪ್ರತಿನಿಧಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಈ ವೇಳೆ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಡಿ ವಿ ಸದಾನಂದಗೌಡ, ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ಸರಕಾರದ ಕಾರ್ಯದರ್ಶಿಗಳಾದ ಎಂ ಮಹೇಶ್ವರ್‌ ರಾವ್‌, ಕೈಗಾರಿಕಾ ಅಭಿವೃದ್ದಿ ಹಾಗೂ ನಿರ್ದೇಶಕರು, ಬೃಹತ್‌ ಮತತು ಮೆಗಾ ಕೈಗಾರಿಕೆಗಳ ನಿರ್ದೇಶನಾಲಯ ಶ್ರೀಮತಿ ಗುಂಜನ್‌ ಕೃಷ್ಣ ಸೇರಿದಂತೆ ಹಲವಾರು ಗಣ್ಯರು ಇದ್ದರು.

ಕೈಮಗ್ಗ ನೇಕಾರರ ಸಾಲಮನ್ನಾ ಮಾಡಲಾಗಿದೆ

ಕೈಮಗ್ಗ ನೇಕಾರರ ಸಾಲಮನ್ನಾ ಮಾಡಲಾಗಿದೆ

ಈಗಾಗಲೇ ಕೈಮಗ್ಗ ನೇಕಾರರ ಸಾಲವನ್ನು ಮನ್ನಾ ಮಾಡಿದ್ದೇವೆ. ಈ ಕ್ಷೇತ್ರಕ್ಕೆ ಹೆಚ್ಚಿನ ಬಲ ನೀಡುವ ನಿಟ್ಟಿನಲ್ಲಿ ಹೊಸ ಜವಳೀ ನೀತಿಯನ್ನೂ ಜಾರಿಗೊಳಿಸಲಾಗುತ್ತಿದೆ. ಮುಂದಿನ 15 - 20 ದಿನಗಳಲ್ಲಿ ಕಲಬುರ್ಗಿ ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಿಗಳಾದ ನರೇಂದ್ರ ಮೋದಿ ಯವರು ಉದ್ಘಾಟಿಸಲಿದ್ದಾರೆ. ಕೈಗಾರಿಕೆಗಳಿಗೆ ಹಾಗೂ ಕೈಗಾರಿಕೋದ್ಯಮಿಗಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ಕೈಗಾರಿಕಾ ವಸಹಾತುಗಳಲ್ಲಿ ಮೂಲಭೂತ ಸೌಕರ್ಯ ಹೆಚ್ಚಳಕ್ಕೂ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯದ ಭೌಗೋಳಿಕ ಕಲೆಗಳು ನಶಿಸಿ ಹೋಗುತ್ತಿದ್ದು ಅವುಗಳ ಕಾಯಕಲ್ಪಕ್ಕೂ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಫ್ತು ಹಾಗೂ ಉತ್ಪಾದನಾ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿರುವ ಉದ್ಯಮಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ರಾಜ್ಯದ ಆರ್ಥಿಕ ಅಭಿವೃದ್ದಿಗೆ ನಿಮ್ಮ ಕೊಡುಗೆ ಅಪಾರ. ಇದೇ ರೀತಿ ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಆ ಜನಗಳು ಹಾಗೂ ಗ್ರಾಮಗಳ ಪುನರ್‌ ನಿರ್ಮಾಣಕ್ಕೆ ತುಂಬು ಹಸ್ತದಿಂದ ಕೊಡುಗೆ ನೀಡಿ ಎಂದು ಕೋರಿದರು.

ಎಫ್ ಡಿಐಗೆ ಹೆಚ್ಚಿನ ಆದ್ಯತೆ, ಅಗತ್ಯ ನೀತಿ ಜಾರಿ

ಎಫ್ ಡಿಐಗೆ ಹೆಚ್ಚಿನ ಆದ್ಯತೆ, ಅಗತ್ಯ ನೀತಿ ಜಾರಿ

ದೇಶದ ವಾಣಿಜ್ಯ ಮತ್ತು ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಸರ್ಕಾರ ಮುಂಚೂಣಿಯಲ್ಲಿದ್ದು, ಇದಕ್ಕೆ ಅಗತ್ಯವಾದ ನೀತಿ ನಿರೂಪಣೆ ಮಾಡುತ್ತಾ ಬಂದಿದ್ದು, ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿರುವ ರಫ್ತುದಾರ ಕಂಪನಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ.

ಹಲವಾರು ಹೊಸ ಹೊಸ ನೀತಿಗಳನ್ನು ತರುವಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ಮೊದಲ ರಾಜ್ಯವೆನಿಸಿದೆ. ಅದರಲ್ಲಿ ಪ್ರಮುಖವಾಗಿ ಎಲೆಕ್ಟ್ರಿಕಲ್ ವಾಹನ ನೀತಿ, ಆಗ್ರೋ ಬ್ಯುಸಿನೆಸ್ ನೀತಿ, ಸ್ಟಾರ್ಟಪ್ ನೀತಿ, ಎನ್‍ಆರ್‍ಐ ನೀತಿ, ರೀಟೇಲ್ ಟ್ರೇಡ್ ನೀತಿ ಸೇರಿದಂತೆ ಹಲವಾರು ನೀತಿಗಳನ್ನು ಜಾರಿಗೊಳಿಸುವ ಮೂಲಕ ಕರ್ನಾಟಕ ಉದ್ಯಮಗಳ ಬೆಳವಣಿಗೆಗೆ ಪೂರಕವಾದ ಹಲವಾರು ನೀತಿಗಳನ್ನು ಘೋಷಿಸಿದೆ.

ಹೊಸ ಹೊಸ ಕೈಗಾರಿಕೆ ನೀತಿ

ಹೊಸ ಹೊಸ ಕೈಗಾರಿಕೆ ನೀತಿ

ಇದಲ್ಲದೇ, ಕಾಲಕಾಲಕ್ಕೆ ತಕ್ಕಂತೆ ಹೊಸ ಹೊಸ ಕೈಗಾರಿಕೆ ನೀತಿಗಳನ್ನು ಪ್ರಕಟಿಸುವ ಮೂಲಕ ಕೈಗಾರಿಕಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಈ ಮೂಲಕ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸಾಲಿನಲ್ಲಿ ನಿಂತಿದೆ.

ಕರ್ನಾಟಕವು ರಫ್ತಿನಲ್ಲಿ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. 2018-19 ನೇ ಸಾಲಿನಲ್ಲಿ ಕರ್ನಾಟಕ 95,180 ದಶಲಕ್ಷ ಯುಎಸ್ ಡಾಲರ್‍ನಷ್ಟು ರಫ್ತು ಮಾಡಿದ್ದು, ದೇಶದ ಒಟ್ಟಾರೆ ರಫ್ತಿನ ಶೇ.17.8 ರಷ್ಟು ಪಾಲನ್ನು ಹೊಂದಿದೆ.

ಕರ್ನಾಟಕವು ಕಾಫಿ, ಗೋಡಂಬಿ, ರೇಷ್ಮೆ ಮತ್ತು ಅಗರ್‍ಬತ್ತಿಗಳನ್ನು ರಫ್ತು ಮಾಡುವ ರಾಜ್ಯವೆನಿಸಿದೆ. ಇದೀಗ ಕರ್ನಾಟಕ ರಾಜ್ಯ ಸರ್ಕಾರ ಹೊಸ ರಫ್ತು ನೀತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮುನ್ನಡಿ ಇಟ್ಟಿದ್ದು, ಈ ಮೂಲಕ ರಫ್ತುದಾರರಿಗೆ ಹಲವಾರು ಸೌಲಭ್ಯಗಳನ್ನು ನೀಡುವುದರೊಂದಿಗೆ ರಫ್ತು ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಕೈಗಾರಿಕೆ ಇಲಾಖೆ ಸಚಿವರಾದ ಜಗದೀಶ್ ಶೆಟ್ಟರ್

ಕೈಗಾರಿಕೆ ಇಲಾಖೆ ಸಚಿವರಾದ ಜಗದೀಶ್ ಶೆಟ್ಟರ್

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸಚಿವರಾದ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಬೆಂಗಳೂರು ಹೊರತುಪಡಿಸಿ ಇನ್ನಿತರೆ ಜಿಲ್ಲೆಗಳಲ್ಲಿಯೂ ಕೈಗಾರಿಕೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಪ್ರಾರಂಭಗೊಳಿಸಲು ಮುಂದಾಗುವ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು. 63 ರಾಜ್ಯ ಶ್ರೇಷ್ಠ ರಫ್ತುಗಳ ಪ್ರಶಸ್ತಿಗಳು ಹಾಗೂ 47 ಉದ್ಯಮಿಗಳೀಗೆ ಸರ್‌ ಎಂ ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದನಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ.

4 ನೇ ಕೈಗಾರಿಕಾ ಕ್ರಾಂತಿಯಲ್ಲಿ ರಾಜ್ಯ ಪ್ರಮುಖ ಕೇಂದ್ರವಾಗಿ ಹೊರ ಹೊಮ್ಮಲಿದೆ. ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಸುವ ದೃಷ್ಟಿಯಿಂದ ಹೊಸ ಕೈಗಾರಿಕಾ ನೀತಿಯನ್ನು ನವೆಂಬರ್‌ ತಿಂಗಳಲ್ಲಿ ಜಾರಿಗೊಳಿಸಲಾಗುವುದು. ಇಡೀ ರಾಷ್ಟ್ರಕ್ಕೆ ಮಾದರಿ ಕೈಗಾರಿಕಾ ನೀತಿಯನ್ನು ರಚಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದರು. ಎಮ್ ಎಸ್‌ ಎಂ ಇ ಗಳಿಗೆ ಉತ್ತೇಜನ ನೀಡಲು ಕ್ರಮ, ಪ್ರತ್ಯೇಕ ಲಾಜಿಸ್ಟಿಕ್‌ ನೀತಿಯನ್ನು ಹೊರ ತರಲಾಗುತ್ತಿದೆ ಎಂದು ಹೇಳಿದರು. 25 ವರ್ಷಗಳ ನಂತರ ಕೇಂದ್ರ ಸರಕಾರ ಹಾಗೂ ರಾಜ್ಯದಲ್ಲೂ ಒಂದೇ ಪಕ್ಷ ಅಧಿಕಾರಕ್ಕೆ ಬಂದಿದ್ದು, ಕೈಗಾರಿಕೆಗಳ ಅಭಿವೃದ್ದಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+