ಸಿಬಿಐ ತೀರ್ಪು ಇಂದು ಸಾಧ್ಯತೆ: ಯಡಿಯೂರಪ್ಪ ಭವಿಷ್ಯ ನಿರ್ಧಾರ
ಬೆಂಗಳೂರು, ಅಕ್ಟೋಬರ್ 26: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕುಟುಂಬ ಸದಸ್ಯರ ವಿರುದ್ಧ ಇರುವ 40 ಕೋಟಿ ರುಪಾಯಿ ಭ್ರಷ್ಟಾಚಾರ ಹಗರಣದ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯವು ಪ್ರಕಟಿಸುವ ಸಾಧ್ಯತೆ ಇದೆ. ಬೆಳಗ್ಗೆ 11ಕ್ಕೆ ತೀರ್ಪು ಹೊರಬೀಳುವ ನಿರೀಕ್ಷೆ ಇದೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸರಕಾರಿ ಕೆಲಸ ಮಾಡಿಸಿಕೊಳ್ಳುವುದಕ್ಕೆ ಲಂಚ ನೀಡಲಾಗಿತ್ತು ಎಂಬುದು ಆರೋಪ. ಯಡಿಯೂರಪ್ಪ ಅವರ ಇಬ್ಬರು ಮಕ್ಕಳು, ಇಬ್ಬರು ಅಳಿಯಂದಿರು, ಜೆಎಸ ಡಬ್ಲ್ಯು ಸ್ಟೀಲ್ ಮತ್ತು ಇತರರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಅಕ್ಟೋಬರ್ 2012ರಲ್ಲಿ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು.[LIVE: ಕಿಕ್ ಬ್ಯಾಕ್ ಕೇಸ್, ಕೋರ್ಟ್ ಪ್ರವೇಶಿಸಿದ ಬಿಎಸ್ ವೈ]
ಇಪ್ಪತ್ತು ಕೋಟಿ ರುಪಾಯಿ ಬಿ.ವೈ.ರಾಘವೇಂದ್ರ, ವಿಜೇಂದ್ರ (ಯಡಿಯೂರಪ್ಪ ಅವರ ಮಕ್ಕಳು) ಮತ್ತು ಸೋಹನ ಕುಮಾರ್ (ಅಳಿಯ) ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಈ ಹಣವನ್ನು ಆಗಸ್ಟ್ ಮತ್ತು ಸೆಪ್ಟೆಂಬರ್ 2010ರ ಮಧ್ಯೆ ಹಾಕಲಾಗಿದೆ. ಇನ್ನೂ 20 ಕೋಟಿಯನ್ನು ಯಡಿಯೂರಪ್ಪ ಅವರ ಮಕ್ಕಳೇ ನಡೆಸುವ ಪ್ರೇರಣಾ ಎಜುಕೇಷನ್ ಟ್ರಸ್ಟ್ ಗೆ ವಂತಿಗೆ ರೂಪದಲ್ಲಿ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು.
ಗಣಿಗಾರಿಕೆಗೆ ಸಂಬಂಧಿಸಿದಂತೆ ಸರಕಾರಕ್ಕೆ ಇರುವ ಬಾಕಿ ಮನ್ನಾ ಮಾಡುವುದಕ್ಕೆ, ಗಣಿಗಾರಿಕೆಗೆ ಸಂಬಂಧಿಸಿದ ಲೀಸ್ ನ ಕಡತಗಳ ವಿಲೇವಾರಿಗಾಗಿ ಸೌತ್ ವೆಸ್ಟ್ ಮೈನಿಂಗ್ ಕಂಪನಿಯಿಂದ ಆ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಇದರ ಜತೆಗೆ ಬೆಂಗಳೂರಿನ ಬಳಿ ಸರಕಾರದಿಂದ ನೋಟಿಫೈ ಆದ ಜಾಗವನ್ನು ಯಡಿಯೂರಪ್ಪ ಮತ್ತು ಅವರ ಮಕ್ಕಳು ಇಪ್ಪತ್ತು ಕೋಟಿ ರುಪಾಯಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಸಹ ಮಾಡಲಾಗಿತ್ತು.[ಬಿಎಸ್ ವೈ ವಿರುದ್ಧದ ತನಿಖೆ, ಸಿಬಿಐ ಬಳಿ ವರದಿ ಕೇಳಿದ ಸುಪ್ರೀಂಕೋರ್ಟ್]
ಯಡಿಯೂರಪ್ಪ ಅವರ ಮುಖ್ಯಮಂತ್ರಿ ಸ್ಥಾನದ ದುರುಪಯೋಗ ಮಾಡಿಕೊಂಡು, ಭೂಮಿಯನ್ನು ಕಾನೂನುಬಾಹಿರವಾಗಿ ಪಡೆದಿದ್ದಾರೆ. ಉಕ್ಕಿನ ಕಂಪನಿಯಿಂದ ಪಡೆದ ಲಂಚದ ಹಣ ಗೊತ್ತಾಗದಿರಲಿ ಎಂದು ಈ ರೀತಿ ಮಾಡಲಾಗಿತ್ತು ಎಂದು ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಆದ್ದರಿಂದ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.