ಯಡಿಯೂರಪ್ಪಗೆ ಸರ್ಕಾರಿ ಬಂಗಲೆ ಸಿಕ್ತು, ರೇವಣ್ಣ ನೆರೆಹೊರೆ!
Recommended Video

ಬೆಂಗಳೂರು, ಡಿಸೆಂಬರ್ 05 : ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊನೆಗೂ ಸರ್ಕಾರಿ ಬಂಗಲೆ ಸಿಕ್ಕಿದೆ. ಜುಲೈನಲ್ಲಿ ಸರ್ಕಾರಿ ಬಂಗಲೆ ನೀಡಿದಾಗ ಯಡಿಯೂರಪ್ಪ ಅಲ್ಲಿಗೆ ಹೋಗಲು ನಿರಾಕರಿಸಿದ್ದರು.
ಕರ್ನಾಟಕ ಸರ್ಕಾರ ಬೆಂಗಳೂರಿನ ಗಾಂಧಿ ಭವನದ ಹಿಂಭಾಗದಲ್ಲಿನ ನಂ.4ರ ಬಂಗಲೆಯನ್ನು ಯಡಿಯೂರಪ್ಪ ಅವರಿಗೆ ನೀಡಿದೆ. ಹಿಂದೆ ವಿಧಾನ ಪರಿಷತ್ ಸಭಾಪತಿಯಾಗಿದ್ದ ಡಿ.ಎಚ್.ಶಂಕರಮೂರ್ತಿ ಅವರು ಈ ನಿವಾಸದಲ್ಲಿದ್ದರು.
ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಬಂಗಲೆಯನ್ನು ನೀಡಿದ್ದು, ನವೀಕರಣ ಕಾರ್ಯ ನಡೆಯಿತ್ತಿದೆ. ಬೆಳಗಾವಿ ಅಧಿವೇಶನ ಮುಗಿದ ಬಳಿಕ ಯಡಿಯೂರಪ್ಪ ಅವರು ಹೊಸ ಬಂಗಲೆಗೆ ಗೃಹ ಪ್ರವೇಶ ಮಾಡಲಿದ್ದಾರೆ.

ಜುಲೈ ತಿಂಗಳಿನಲ್ಲಿ ಯಡಿಯೂರಪ್ಪ ಅವರಿಗೆ ರೇಸ್ಕೋರ್ಸ್ ರಸ್ತೆಯ ನಿವಾಸ ನಿಗದಿ ಮಾಡಲಾಗಿತ್ತು. ಆದರೆ, ಅವರು ನಂ.2ರ ಬಂಗಲೆ ಬೇಕು ಎಂದು ಹೇಳಿದ್ದರು. ಆ ಬಂಗಲೆ ಸಿಗದ ಕಾರಣ ಡಾಲರ್ಸ್ ಕಾಲೋನಿಯ ನಿವಾಸದಲ್ಲಿಯೇ ಉಳಿದಿದ್ದರು.
ಗಾಂಧಿ ಭವನದ ಹಿಂಭಾಗದಲ್ಲಿನ ನಂ.4ರ ಬಂಗಲೆಯಲ್ಲಿ ಯಡಿಯೂರಪ್ಪ ಅವರಿಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ನೆರೆಹೊರೆಯಾಗಿದ್ದಾರೆ. ಈ ನಿವಾಸಕ್ಕೆ ಸಮೀಪದಲ್ಲಿಯೇ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರ ನಿವಾಸವಿದೆ.
ಯಡಿಯೂರಪ್ಪ ಬೇಡಿಕೆ ಇಟ್ಟಿದ್ದ ನಂ.2ರ ಬಂಗಲೆಯಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇದ್ದಾರೆ. ನಂ.2 ಬಂಗಲೆ ಯಡಿಯೂರಪ್ಪ ಪಾಲಿಗೆ ಅದೃಷ್ಟದ ಬಂಗಲೆಯಾಗಿದ್ದು, ಅದಕ್ಕಾಗಿ ಅವರು ಬೇಡಿಕೆ ಇಟ್ಟಿದ್ದರು.
2006ರಲ್ಲಿ ಉಪ ಮುಖ್ಯಮಂತ್ರಿ, ಹಣಕಾಸು ಸಚಿವರಾದಾಗ, 2008ರಿಂದ 2011ರ ತನಕ ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ನಂ.2 ಬಂಗಲೆಯಲ್ಲಿಯೇ ವಾಸ್ತವ್ಯ ಹೂಡಿದ್ದರು.












Click it and Unblock the Notifications