ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರ್ಣನ ವೇಷದಲ್ಲಿ ಪಂಚಭೂತಗಳಲ್ಲಿ ಲೀನರಾದ ಯಕ್ಷರಾಜ ಚಿಟ್ಟಾಣಿ
ಕಾರವಾರ, ಸೆಪ್ಟೆಂಬರ್ 04: ಅಗಲಿದ ಯಕ್ಷಗಾನದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಅಂತ್ಯ ಸಂಸ್ಕಾರವು ಬುಧವಾರ ರಾತ್ರಿ ಮೃತರ ಹುಟ್ಟೂರು ಹೊನ್ನಾವರದ ಹೇರಂಗಡಿಯ ಗುಡ್ಡೆಕೇರಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಯಕ್ಷರಂಗಕ್ಕೆ ರಂಗುತಂದಿತ್ತ ಚಿಟ್ಟಾಣಿ: ಟ್ವಿಟ್ಟಿಗರ ಅಂತಿಮ ನಮನ
ಅವರಿಗೆ ಜಿಲ್ಲಾಧಿಕಾರಿಯ ಅನುಪಸ್ಥಿತಿಯಲ್ಲಿ ಭಟ್ಕಳ ಉಪವಿಭಾಗಾಧಿಕಾರಿ ಎಂ.ಎನ್.ಮಂಜುನಾಥ ಜಿಲ್ಲಾಡಳಿತದ ಪರವಾಗಿ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿದರು. ಸಶಸ್ತ್ರ ಮೀಸಲು ಪಡೆಯು ಮೂರು ಸುತ್ತು ಗುಂಡು ಹಾರಿಸಿ, ಬಂದೂಕು ತಲೆಕೆಳಗೆ ಮಾಡಿ ಮೌನ ಆಚರಿಸಿತು. ಬಳಿಕ ಅವರ ಮುಖಕ್ಕೆ ಯಕ್ಷ ಪ್ರಿಯರಿಂದ ಕರ್ಣನ ವೇಷ ಬಳಿಯುವ ಮೂಲಕ ಗೌರವ ಸಲ್ಲಿಸಲಾಯಿತು.
ಅವರ ಅಂತಿಮ ಸಂಸ್ಕಾರದಲ್ಲಿ ಎ.ಎಸ್ಪಿ ಗೋಪಾಲ ಬ್ಯಾಕೋಡ್, ಭಟ್ಕಳ ಶಾಸಕ ಮಂಕಾಳು ವೈದ್ಯ, ಕುಮಟಾದ ಮಾಜಿ ಶಾಸಕ ದಿನಕರ ಶೆಟ್ಟಿ, ಬಿಜೆಪಿಯ ಮುಖಂಡರಾದ ನಾಗರಾಜ ನಾಯಕ, ಸೂರಜ ನಾಯ್ಕ ಸೋನಿ, ಖ್ಯಾತ ಯಕ್ಷಗಾನ ಕಲಾವಿದರಾದ ಗಣಪತಿ ಹೆಗಡೆ ತೋಟಿ, ವಿದ್ಯಾಧರ ಜಲವಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಉಪನಿರ್ದೇಶಕ ರಾಮಕೃಷ್ಣ ನಾಯಕ ಸೇರಿದಂತೆ ಸಾವಿರಾರು ಗ್ರಾಮಸ್ಥರು ಭಾಗವಹಿಸಿ ಕಂಬನಿ ಮಿಡಿದರು.
ಹವ್ಯಕ ಬ್ರಾಹ್ಮಣ ವಿಧಿ ವಿಧಾನದಂತೆ ಮೃತರ ಅಂತ್ಯ ಸಂಸ್ಕಾರ ನಡೆಸಲಾಯಿತು. ಹಿರಿಯ ಮಗ ಸುಬ್ರಹ್ಮಣ್ಯ ಚಿಟ್ಟಾಣಿ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿದಾಯ ಹೇಳಿದರು.
English summary
Last rites of Padma shri awardee and well known Yakshagana artist Chittani Ramachandra Hegde took place on Oct 4th in his native Guddekere village in Honnavar.