'ಸಿದ್ದರಾಮುಲ್ಲಾಖಾನ್' ಎಂದವರಿಗೆ ಬಿಸಿ ಮುಟ್ಟಿಸುತ್ತಾರಾ ಸಿದ್ದರಾಮಯ್ಯ?
ರಾಜ್ಯದಲ್ಲಿ ಸ್ಪಷ್ಟಬಹುಮತದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಸಿಎಂ ಆಯ್ಕೆ ಮಾಡುವುದರಲ್ಲಿ ನಿರತವಾಗಿದೆ. ಇತ್ತ ಕಾಂಗ್ರೆಸ್ ನಾಯಕರ ವಿರುದ್ಧ ಈವರೆಗೆ ಮಾತನಾಡಿದ ಬಿಜೆಪಿ ನಾಯಕರಲ್ಲಿ ಕಳವಳ ಶುರುವಾಗಿದೆ. ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದವರು, ಸಿದ್ದರಾಮಯ್ಯ ಅವರನ್ನು 'ಸಿದ್ದರಾಮುಲ್ಲಾಖಾನ್' ಎಂದು ಹೇಳಿದವರು ಇವತ್ತು ಸೋತು ಸುಣ್ಣವಾಗಿದ್ದಾರೆ. ಇದರಲ್ಲಿ ಸಿಟಿ ರವಿ ಪ್ರಮುಖರಾಗಿದ್ದಾರೆ.
ಸಿದ್ದರಾಮಯ್ಯ ಈ ಬಾರಿ ಗೆಲ್ಲೋದೇ ಇಲ್ಲ. ಅವರಿಗೆ ಒಂದು ಸ್ಥಿರವಾದ ಕ್ಷೇತ್ರವೇ ಇಲ್ಲ. ಹೀಗಂತ ಅನೇಕ ಬಿಜೆಪಿ ನಾಯಕರು ಟೀಕೆ ಮಾಡಿದ್ದರು. ಅಷ್ಟೇ ಅಲ್ಲ. ಕೆಲ ಬಿಜೆಪಿಗರು ಈ ಬಾರಿ ಕಾಂಗ್ರೆಸ್ 70 ಗಡಿ ದಾಟಿದರೆ ನನ್ನ ಕೈ ಬೆರಳನ್ನು ಕಟ್ ಮಾಡಿಕೊಳ್ತೀನಿ ಅಂತನೂ ಅಬ್ಬರಿಸಿದ್ದರು. ಆದರೆ ಕಾಂಗ್ರೆಸ್ ಸುನಾಮಿ ಮುಂದೆ ಕಮಲ ಕೊಚ್ಚಿ ಹೋಗಿದೆ. ಸಿದ್ದರಾಮಯ್ಯ ವರ್ಚಸ್ಸು ಹಾಗೂ ಜನ ಬೆಂಬಲದ ಮುಂದೆ ವಿ ಸೋಮಣ್ಣ ಎರಡೂ ಕ್ಷೇತ್ರದಲ್ಲಿ ಸೋತು ಮನೆ ಸೇರಿದ್ದಾರೆ.

ಸೋಮಣ್ಣ ಜೊತೆಗೆ ನಿಂತು ಬಿಜೆಪಿ ಗೆಲುವಿಗೆ ಬಲ ನೀಡಿದ್ದ ಪ್ರತಾಪ್ ಸಿಂಹ ಫಲಿತಾಂಶದ ದಿನ (ಮೇ 13) ಅಡ್ರೆಸ್ ಇಲ್ಲದಂತೆ ಕಾಣೆಯಾಗಿದ್ದರು. ಬಳಿಕ ಟ್ವೀಟ್ ಮಾಡಿದ ಪ್ರತಾಪ್ ಸಿಂಹ ಕಾರ್ಯಕರ್ತರಿಗೆ ಸಮಾಧಾನದ ಮಾತುಗಳನ್ನಾಡಿದ್ದಾರೆ. 'ನನ್ನ ಪ್ರೀತಿಯ ಬಿಜೆಪಿ ಕಾರ್ಯಕರ್ತರೇ, ಅಧೀರರಾಗಬೇಡಿ, ಮತದಾರರನ್ನು ದೂಷಿಸಬೇಡಿ. ಮತದಾರ ನಮಗಿಂತ ಬುದ್ಧಿವಂತ. ನಮ್ಮನ್ನು ಎರಡು ಸಲ ಅಧಿಕಾರಕ್ಕೆ ತಂದವರು ಅವರೇ. ಅವರಿಗೆ ಶರಣಾಗಿ ಮತ್ತೆ ವಿಶ್ವಾಸ ಗಳಿಸೋಣ' ಎಂದು ಧೈರ್ಯ ನೀಡಿದ್ದಾರೆ.
ಆದರೆ ಪ್ರಥಾಪ್ ಸಿಂಹ ಅವರ ಟ್ವೀಟ್ಗೆ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. 'ನೀವು ಪ್ರತಿನಿಧಿಸುತ್ತಿರುವ ಕ್ಷೇತ್ರ ಫುಲ್ ಹೊಗೆ ಅಂತೆ' ಎಂದು ಪ್ರತಿಕ್ರಿಯಿಸಿ ವ್ಯಂಗ್ಯವಾಡಿದ್ದಾರೆ.

ಜೊತೆಗೆ ವರುಣ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಸೋತು ಸುಣ್ಣವಾಗಿರುವ ವಿ ಸೋಮಣ್ಣ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 'ಸೋತ್ವಿ ಏನ್ ಮಾಡಲಿಕ್ಕೆ ಆಗುತ್ತೆ. ಹೈಕಮಾಂಡ್ ಹೇಳಿದ್ರು ಹೋಗಿದ್ವಿ. ಪ್ರತಿಯೊಂದಕ್ಕೂ ಕಾಲವೇ ಉತ್ತರ ಕೊಡುತ್ತೆ' ಎಂದು ಹೇಳಿದ್ದಾರೆ.
ಇನ್ನೂ ಸಿದ್ದರಾಮಯ್ಯ ಅವರನ್ನು ಪದೇ ಪದೇ 'ಸಿದ್ದರಾಮುಲ್ಲಾಖಾನ್' ಎಂದು ಹಂಗಿಸುತ್ತಿದ್ದ ಸಿಟಿ ರವಿ ತಮ್ಮ ಕ್ಷೇತ್ರದಲ್ಲೇ ಸೋಲನ್ನು ಕಂಡಿದ್ದಾರೆ. ಇಷ್ಟು ದಿನ ಸಿದ್ದರಾಮಯ್ಯ ಸೋಲ್ತಾರೆ ಎಂದು ಹಂಗಿಸುತ್ತಿದ್ದ ಸಿಟಿ ರವಿಗೆ ಮತದಾರರು ಶಾಕ್ ಕೊಟ್ಟಿದ್ದಾರೆ. ಇಲ್ಲಿಯವರೆಗೆ ನಾವು ಸೋಲೋದೇ ಇಲ್ಲ ಎಂದು ಮಾತನಾಡುತ್ತಿದ್ದ ಸಿಟಿ ರವಿ ಸದ್ಯ ರಾಜಕೀಯದಲ್ಲಿ ಸೋಲು ಗೆಲುವು ಕಾಮನ್ ಅಂತಿದ್ದಾರೆ. 'ನನ್ನ ಸೋಲು ಸಿದ್ದಾಂತದ ಸೋಲಲ್ಲ, ವೈಯಕ್ತಿಕ ಸೋಲು. ಜನಾದೇಶಕ್ಕೆ ತಲೆ ಬಾಗುತ್ತೇನೆ' ಎಂದು ಕ್ಷೇತ್ರದ ಜನರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಇತ್ತ ಡಾ.ಕೆ ಸುಧಾಕರ್ ಟ್ವೀಟ್ ಒಂದನ್ನು ಮಾಡಿದ್ದು ಅದನ್ನೊಮ್ಮೇ ನೀವೇ ಓದಿ ಬಿಡಿ. 'ಸನ್ಮಾನ್ಯ ಎಸ್.ಎಂ.ಕೃಷ್ಣ ಅವರ ನಂತರ ಒಕ್ಕಲಿಗ ಸಮುದಾಯದ ನಾಯಕರೊಬ್ಬರು ಸ್ಪಷ್ಟ ಬಹುಮತದೊಂದಿಗೆ ನಾಡಿನ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ವಿಶ್ವಾಸದಿಂದ ಈ ಬಾರಿ ಒಕ್ಕಲಿಗ ಸಮಾಜ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿದ್ದು, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನ 5% ಮತಗಳು ಕಾಂಗ್ರೆಸ್ ಪಕ್ಷಕ್ಕೆ ವರ್ಗಾವಣೆಯಾಗಿರುವುದೇ ಇದಕ್ಕೆ ಸಾಕ್ಷಿ.
ಒಕ್ಕಲಿಗ ಸಮುದಾಯದ ಈ ನಿರೀಕ್ಷೆಯನ್ನ ಕಾಂಗ್ರೆಸ್ ಪಕ್ಷ ಹುಸಿಯಾಗಿಸುವುದಿಲ್ಲ, ನಾಡಿಗೆ ಅನ್ನ ನೀಡುವ ಅನ್ನದಾತರ ಸಮುದಾಯವಾದ ಒಕ್ಕಲಿಗ ಸಮಾಜ ಕಾಂಗ್ರೆಸ್ ಪಕ್ಷದ ಮೇಲಿಟ್ಟಿರುವ ಈ ನಂಬಿಕೆಗೆ ದ್ರೋಹ ಎಸಗುವುದಿಲ್ಲ ಎಂದು ಭಾವಿಸುತ್ತೇನೆ' ಎಂದು ಟ್ವೀಟ್ ಮಾಡುವ ಮೂಲಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅದೇನೇ ಇರಲಿ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ವಿ ಸೋಮಣ್ಣ, ಸಿಟಿ ರವಿ ಸೋತು ಸುಣ್ಣವಾಗಿದ್ದಾರೆ. ಸಂಸದ ಪ್ರತಾಪ್ಸಿಂಹ ಅವರಂತೂ ಫುಲ್ ಸೈಲೆಂಟ್ ಆಗಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಆದರೆ ಅಸಲಿ ಪಿಚ್ಚರ್ ತೋರಿಸ್ತಾರಾ? 40% ಕಮಿಷನ್ ಹೊತ್ತ ಎಲ್ಲಾ ಹಗರಣಗಳನ್ನು ಹೊರತೆಗೆಯುತ್ತಾರಾ? ಎನ್ನುವ ಕುತೂಹಲ ಮೂಡಿದೆ.











Click it and Unblock the Notifications