ಮಲ್ಲಿಕಾರ್ಜುನ ಖರ್ಗೆ ಹೇಳಿದಂತೆ ಕೇಳುತ್ತೇವೆ: ರಮೇಶ್ ಜಾರಕಿಹೊಳಿ
ಬೆಂಗಳೂರು, ಸೆಪ್ಟೆಂಬರ್ 12: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ನಾಯಕರು, ಗುರುಗಳು. ಅವರು ನಮಗೆ ತಂದೆ ಸಮಾನರು. ಅವರು ಹೇಳಿದಂತೆ ಕೇಳುತ್ತೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದೇವೆ. ಅವರು ತೆಗೆದುಕೊಳ್ಳುವ ತೀರ್ಮಾನವನ್ನು ಪಾಲಿಸುತ್ತೇವೆ ಎಂದರು.
ಕೆಲವು ಗೊಂದಲಗಳು ಇರುವುದು ಸಹಜ. ಆದರೆ, ರಾಜ್ಯ ಕಾಂಗ್ರೆಸ್ನಲ್ಲಿ ಸಮಸ್ಯೆಗಳಿಲ್ಲ. ಇದ್ದರೆ ಅದನ್ನು ಪಕ್ಷದ ನಾಯಕರು ಸರಿಪಡಿಸುತ್ತಾರೆ. ಸರ್ಕಾರ ಪತನ ಮಾಡುವ ಸುದ್ದಿಗಳು ಸುಳ್ಳು ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ಸೋಲಿನಿಂದ ಮುಖಭಂಗ ಆಗಿಲ್ಲ
ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಸೋಲಿನಿಂದ ನಮಗೆ ಮುಖಭಂಗ ಆಗಿದೆ ಎನ್ನುವುದು ಸುಳ್ಳು. ಹಾಗೊಮ್ಮೆ ನಮಗೆ ಹಿನ್ನಡೆ ಆಗಿದ್ದರೆ ಆಗಲೇ ರಾಗೀನಾಮೆ ನೀಡುತ್ತಿದ್ದೆವು. ಪರಮೇಶ್ವರ್ ಮತ್ತು ದಿನೇಶ್ ಗುಂಡೂರಾವ್ ಜತೆ ಮಾತುಕತೆ ನಡೆಸಿದ್ದೇನೆ. ಭಿನ್ನಾಭಿಪ್ರಾಯಗಳು ಇರುವುದು ನಿಜ. ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಸಚಿವ ಸ್ಥಾನಕ್ಕೆ ಬೇಡಿಕೆ
ಮೂರು ಜಿಲ್ಲೆಗಳಲ್ಲಿ ನಮ್ಮ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಳ್ಳಾರಿ, ರಾಯಚೂರು ಮತ್ತು ಚಿತ್ರದುರ್ಗಗಳಲ್ಲಿಯೂ ಸಮುದಾಯದ ಜನರು ಹೆಚ್ಚಾಗಿದ್ದಾರೆ, ಅವರು ಯಾವುದೇ ಕಷ್ಟದಲ್ಲಿದ್ದರೂ ಭಾಗಿಯಾಗುವುದುದು ನಮ್ಮ ಕರ್ತವ್ಯ. ನಮ್ಮ ಸಮಾಜದವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ನಾಯಕರಿಗೆ ಕೇಳಿದ್ದೇವೆ. ಯಾರು ಸಚಿವರಾಗಬೇಕೆಂಬುದನ್ನೂ ವಿವರಿಸಿದ್ದೇವೆ ಎಂದಿದ್ದಾರೆ.

ಸರ್ಕಾರ ಬೀಳುವುದು ಊಹಾಪೋಹ
ಬೆಳಗಾವಿ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇರುವುದು ನಿಜ. ಇದರಿಂದ ಬೇಸರವಾಗಿದೆ. ಆದರೆ, ಸಮ್ಮಿಶ್ರ ಸರ್ಕಾರ ಬೀಳುವಂಥದ್ದು ಏನೂ ಆಗಿಲ್ಲ. ಸರ್ಕಾರ ಪತನಗೊಳ್ಳುವ ವರದಿಗಳು ಊಹಾಪೋಹ ಮಾತ್ರ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬಿಜೆಪಿ ಹಗಲುಕನಸು
ಜಾರಕಿಹೊಳಿ ಸಹೋದರರ ಗೊಂದಲದ ಬಗ್ಗೆ ಗೊತ್ತಿಲ್ಲ. ಅವರ ಜತೆ ಚರ್ಚೆ ನಡೆಸಿ, ಗೊಂದಲಗಳಿದ್ದರೆ ಬಗೆಹರಿಸುತ್ತೇನೆ. ಸರ್ಕಾರ ಪತನವಾಗಲಿದೆ, ತಾವು ಅಧಿಕಾರಕ್ಕೆ ಬರಬಹುದು ಎಂದು ಬಿಜೆಪಿ ನಾಯಕರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸದಾಶಿವನಗರದ ನಿವಾಸದಲ್ಲಿ ವ್ಯಂಗ್ಯವಾಡಿದ್ದಾರೆ.

ಆಕ್ಷನ್-ರಿಯಾಕ್ಷನ್ ಅಷ್ಟೇ
ಇಲ್ಲಿ ನಡೆಯುತ್ತಿರುವುದು ಕೇವಲ ಆಕ್ಷನ್ ಮತ್ತು ರಿಯಾಕ್ಷನ್ ಅಷ್ಟೇ. ಅಲ್ಲಿ ಆಕ್ಷನ್ನೂ ಇಲ್ಲ ರಿಯಾಕ್ಷನ್ನೂ ಇಲ್ಲ. ಸಮ್ಮಿಶ್ರ ಸರ್ಕಾರದ ಉಳಿವಷ್ಟೇ ಇರುವುದು, ಅದಕ್ಕೆ ಅಳಿವಿಲ್ಲ. ಬೆಳಗಾವಿ, ಬಳ್ಳಾರಿಯ ರಾಜಕಾರಣ ಆ ಜಿಲ್ಲೆಗಳಿಗಷ್ಟೇ ಸೀಮಿತ. ಅಲ್ಲಿಂದ ಬೇರೆಡೆಗೆ ಬರಲಾರದು. ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ ಎಂದು ಸಚಿವ ಎನ್. ಮಹೇಶ್ ಹೇಳಿದ್ದಾರೆ.












Click it and Unblock the Notifications