Satish Jarkiholi Next CM: 2028ಕ್ಕೆ ಸಿಎಂ ಆಗುವೆ: ಡಿಕೆ ಶಿವಕುಮಾರ್ಗೆ ಶಾಕ್ ಕೊಟ್ಟ ಜಾರಕಿಹೊಳಿ
ಬೆಂಗಳೂರು ಸೆಪ್ಟೆಂಬರ್ 8:ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಬಡಿದಾಟ ಶುರುವಾಗಿದೆ. ದೊಡ್ಡವರು, ಹಿರಿಯರು, ಅನುಭವಸ್ಥರು ಎನ್ನುವ ಪೈಪೋಟಿ ಆರಂಭವಾಗಿದೆ. ಈ ನಡುವೆ ಸಿಎಂ ರೇಸ್ನಲ್ಲಿ ಸತೀಶ್ ಜಾರಕಿಹೊಳಿ ಹೆಸರು ಮುನ್ನಲೆಗೆ ಬಂದಿದ್ದು ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎನ್ನುವ ಅಭಿಯಾನ ಶುರುವಾಗಿದೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಂದರ್ಭ ಬಂದರೆ ಮುಂದಿನ ಸಿಎಂ ಯಾರು ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ. ಇದರ ಬೆನ್ನಲ್ಲೆ ಸತೀಶ್ ಜಾರಕಿಹೊಳಿ ಹೆಸರನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅಲ್ಲದೆ ಇದೇ ಸಮಯದಲ್ಲಿ ಸತೀಶ್ ಜಾರಕಿಹೊಳಿ ಕೂಡ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಬಂದಿದ್ದು, ಸಿಎಂ ಸ್ಥಾನದ ಬಗ್ಗೆ ಚರ್ಚೆ ನಡೆದಿರುವ ಅನುಮಾನಗಳು ಹುಟ್ಟಿಕೊಂಡಿವೆ. ಆದರೆ ಸತೀಶ್ ಜಾರಕಿಹೊಳಿ ಮಾತ್ರ ತಾವು ರಾಹುಲ್ ಗಾಂಧಿಯೊಂದಿಗೆ ಸಿಎಂ ಪಟ್ಟದ ಬಗ್ಗೆ ಚರ್ಚೆಗಳನ್ನು ಮಾಡಲಿಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಇದಕ್ಕಾಗಿ ಗುದ್ದಾಟ, ಕುಸ್ತಿ ಮಾಡೋ ಅವಶ್ಯಕತೆ ಇಲ್ಲ. ಅನೇಕರು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ. 2028ಕ್ಕೆ ಸಿಎಂ ಆಗುವ ತಯಾರಿ ಇದೆ ನಮ್ಮದು. ಅಲ್ಲಿಯವರೆಗೆ ಅಭಿಮಾನಿಗಳು ಕಾಯಬೇಕು. ನಾನು ಸಿಎಂ ಆಗುವ ವಿಚಾರದ ಬಗ್ಗೆ ಮುಂದೆ ನೋಡೋಣ ಎಂದಿದ್ದಾರೆ. 2028ಕ್ಕೆ ಈ ವಿಚಾರದ ಬಗ್ಗೆ ನೋಡೋಣ ಎಂದಿದ್ದಾರೆ.
ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ. ಅಲ್ಲದೆ ಆರ್ವಿ ದೇಶಪಾಂಡೆ, ಪರಮೇಶ್ವರ್, ಡಿಕೆ ಶಿವಕುಮಾರ್, ಎಂಬಿ ಪಾಟೀಲ್, ಶಿವಾನಂದ ಪಾಟೀಲ್ ಹಿರಿಯರಿದ್ದಾರೆ. ಅಲ್ಲರಿಗೂ ಸಿಎಂ ಆಗುವ ಆಸೆ ಇದ್ದೇ ಇರುತ್ತದೆ. ಹೀಗಾಗಿ ಸದ್ಯ ಈ ಪ್ರಶ್ನೆ ಉದ್ಬವಿಸಲ್ಲ. ಮುಂದೆ ನೋಡೋಣ ಎಂದು ಹೇಳಿದರು.

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪರ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಸಿಎಂ ಬದಲಾವಣೆ ಪ್ರಶ್ನೆ ಬರಲ್ಲ ಎನ್ನುವ ವಿಶ್ವಾಸ ನನಗಿದೆ. ಈಗ ಸಿಎಂ ಆಗುವ ಕನಸು ಕಂಡಿಲ್ಲ. ಯಾವುದೋ ಸಂದರ್ಭದಲ್ಲಿ ಹೇಳಿಕೆ ಕೊಟ್ಟಿರುತ್ತಾರೆ. ಎಲ್ಲಿಯೂ ನಾನೇ ಸಿಎಂ ಆಗ್ತೀನಿ ಅಂತಾ ಯಾರು ಹೇಳಿಲ್ಲ. 2028ಕ್ಕೆ ಸಿಎಂ ಆಗುವ ತಯಾರಿ ಇದೆ. ಅಲ್ಲಿವರೆಗೂ ಅಭಿಮಾನಿಗಳು ಕಾಯಬೇಕು. ಸದ್ಯಕ್ಕೆ ಅಂತಹ ಆಸೆ ನನಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈಗಾಗಲೇ ಸಿಎಂ ರೇಸ್ನಲ್ಲಿ ಡಿಕೆ ಶಿವಕುಮಾರ್ ಮುಂಚುಣಿಯಲ್ಲಿ ಇದ್ದಾರೆ. ಈ ಹಿಂದೆ ಸಿಎಂ ರೇಸ್ನ ಗುದ್ದಾಟದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಹೈಕಮಾಂಡ್ ಸಂದಾನ ಮಾಡಿತ್ತು. ಹೀಗಿರುವಾಗ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಡಿಕೆ ಶಿವಕುಮಾರ್ ಎನ್ನುವ ಮಾತುಗಳು ರಾಜ್ಯ ರಾಜಕೀಯ ವಲಯದಲ್ಲಿವೆ. ಆದರೆ ಸತೀಶ್ ಜಾರಕಿಹೊಳಿ ಹೆಸರು ಸಿಎಂ ರೇಸ್ನಲ್ಲಿ ಕೇಳಿ ಬರುತ್ತಿದ್ದು ಡಿಕೆ ಶಿವಕುಮಾರ್ಗೆ ಠಕ್ಕರ್ ಕೊಡುತ್ತಾರಾ ಎನ್ನುವ ಅನುಮಾನ ಹುಟ್ಟು ಹಾಕಿದೆ.
ಅಲ್ಲದೆ ಸಿದ್ದರಾಮಯ್ಯ ಇದು ಕೊನೆ ಚುನಾವಣೆ ಎಂದು ತಿಳಿಸಿದ್ದಾರೆ. ಈ ಮೂಲಕ ಅವರು ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಸಿಎಂ ಕುರ್ಚಿಗೆ ಡಿಕೆ ಶಿವಕುಮಾರ್ ಕಣ್ಣಿಟ್ಟು ಕಾದು ಕುಳಿತಿದ್ದಾರೆ. ಇದರ ನಡುವೆ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲವನ್ನು ಸೃಷ್ಟಿ ಮಾಡಿದೆ.












Click it and Unblock the Notifications