'ದಂಗೆ' ಹೇಳಿಕೆಗೆ ಕುಮಾರಸ್ವಾಮಿ ಸ್ಪಷ್ಟನೆ ಬಿಜೆಪಿ ಆಕ್ರೋಶ, ರಾಜಕೀಯ
Recommended Video
ಬೆಂಗಳೂರು, ಸೆಪ್ಟೆಂಬರ್ 21 : 'ನಾಡಿನ ಜನರಿಗೆ ಬಿಜೆಪಿ ವಿರುದ್ದ ದಂಗೆ ಏಳಲು ಕರೆ ಕೊಡುತ್ತೇನೆ' ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ತಮ್ಮ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಬಿಜೆಪಿ ಮುಖ್ಯಮಂತ್ರಿಗಳ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದೆ. ಶುಕ್ರವಾರ ಸಂಜೆ ರಾಜ್ಯಪಾಲರಿಗೆ ಈ ಕುರಿತು ದೂರು ನೀಡಲು ಮುಂದಾಗಿದೆ. ಮತ್ತೊಂದು ಕಡೆ ಪಕ್ಷದ ವಿವಿಧ ನಾಯಕರು ಎಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿದ್ದಾರೆ.
ಯಡಿಯೂರಪ್ಪ ಮನೆ ಮುಂದೆ ಪ್ರತಿಭಟನೆ ಯಾರು, ಏನು ಹೇಳಿದರು?
'ಹಿಂದೆ ಯಡಿಯೂರಪ್ಪ ಅವರು ಸರ್ಕಾರದ ವಿರುದ್ಧ ದೊಣ್ಣೆ, ಬಡಿಗೆ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದ್ದರು. ಇದಕ್ಕಿಂತ ಕೆಟ್ಟ ಪದವನ್ನು ನಾನು ಬಳಸಿಲ್ಲ. ಬಿಜೆಪಿ ಮುಖಂಡರು ಭೂಗತ ವ್ಯಕ್ತಿಗಳ ಸಂಪರ್ಕ ಇಟ್ಟುಕೊಂಡು ಹಣ ಶೇಖರಣೆ ಮಾಡಿಕೊಂಡು, ಸರ್ಕಾರ ಕಡೆವಲು ಮುಂದಾದರೆ ಮೌನವಾಗಿ ಕುಳಿತುಕೊಳ್ಳಲು ಆಗುತ್ತಾ?' ಎಂದು ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
'ದಂಗೆ' ಹೇಳಿಕೆಗೆ ಬಿಜೆಪಿ ಆಕ್ರೋಶ, ಪ್ರಕರಣ ದಾಖಲಿಸಲು ನಿರ್ಧಾರ
ಗುರುವಾರ ರಾತ್ರಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಕುಮಾರಸ್ವಾಮಿ ಅವರ ಹೇಳಿಕೆ, ಆಪರೇಷನ್ ಕಮಲದ ಬಗ್ಗೆ ಚರ್ಚೆ ನಡೆಯಿತು. ಮುಖ್ಯಮಂತ್ರಿಗಳ ಹೇಳಿಕೆ ಖಂಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿದೆ....
'ದಂಗೆ' ಹೇಳಿಕೆ ಮೂಲಕ ಸರ್ಕಾರ ಕೆಡವಲು ಬಿಜೆಪಿ ಬಳಿ ಇದೆ 4 ಬ್ರಹ್ಮಾಸ್ತ್ರ!
ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ
ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಭಾರಿ ಟೀಕೆಗಳು ಬಂದ ಬಳಿಕ ಅವರು ಸ್ಪಷ್ಟನೆ ನೀಡಿದ್ದಾರೆ. 'ದಂಗೆ ಅಂದರೆ ಜನರ ಪ್ರತಿಭಟನೆ ಇದರಲ್ಲಿ ತಪ್ಪೇನಿದೆ?. ಬಿಜೆಪಿ ಮುಖಂಡರು ಭೂಗತ ವ್ಯಕ್ತಿಗಳ ಸಂಪರ್ಕ ಇಟ್ಟುಕೊಂಡು ಹಣ ಶೇಖರಣೆ ಮಾಡಿಕೊಂಡು, ಸರ್ಕಾರ ಕಡೆವಲು ಮುಂದಾದರೆ ಮೌನವಾಗಿ ಕುಳಿತುಕೊಳ್ಳಲು ಆಗುತ್ತಾ?' ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಸಂವಿಧಾನದ ಮೇಲೆ ನಂಬಿಕೆ ಇದೆಯೇ?
'ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಾನೂನು, ಸಂವಿಧಾನದ ಮೇಲೆ ನಂಬಿಕೆ ಇದೆಯೇ ಎಂದು ಮೊದಲು ತಿಳಿಸಲಿ. ದಂಗೆ ಏಳಬೇಕು ಎಂದು ಕರೆಕೊಟ್ಟ ಬಳಿಕ ಯಡಿಯೂರಪ್ಪ ಮನೆ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಇಂತಹ ಹೇಳಿಕೆಯನ್ನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಪ್ರಜಾಪ್ರಭುತ್ವದಲ್ಲಿ ನಿಮಗೆ ನಂಬಿಕೆ ಇದ್ದರೆ ರಾಜ್ಯದ ಜನರ ಕ್ಷಮೆ ಕೇಳಿ' ಎಂದು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಒತ್ತಾಯಿಸಿದ್ದಾರೆ.
ಇಂದು ಹಾಗೆ ಹೇಳಿಲ್ಲ ಅಂತಾರೆ
'ರಾಜ್ಯದಲ್ಲಿ ದಂಗೆ ಎಬ್ಬಿಸಿ ಕುಮಾರಸ್ವಾಮಿ ಅವರು ಇಂದು ನಾನು ಹಾಗೆ ಹೇಳಿಲ್ಲ ಎಂದು ಹೇಳುತ್ತಿದ್ದಾರೆ. ಗುರುವಾರ ಯಡಿಯೂರಪ್ಪ ಮನೆ ಮುಂದೆ ನಡೆದ ದಾಳಿಯೇ ಅವರ ಹೇಳಿಕೆಗೆ ಸಾಕ್ಷಿ. ರಾಜ್ಯಪಾಲರ ಭೇಟಿಗೆ ಸಮಯಾವಕಾಶ ಕೇಳಿದ್ದೇವೆ. ಸಮಯ ಸಿಕ್ಕರೆ ಇಂದು ಕುಮಾರಸ್ವಾಮಿ ಅವರ ವಿರುದ್ಧ ದೂರು ನೀಡುತ್ತೇವೆ' ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕ್ರೂರ ಮುಖ್ಯಮಂತ್ರಿ
'ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಜನರಿಗೆ ದಂಗೆ ಏಳಿ ಎಂದು ಕರೆ ನೀಡುವ ಕುಮಾರಸ್ವಾಮಿ ಅವರು ಕ್ರೂರ ಮುಖ್ಯಮಂತ್ರಿ. ಮುಖ್ಯಮಂತ್ರಿ ಸ್ಥಾನಕ್ಕೇರಿದ ಮೂರು ತಿಂಗಳಿನಲ್ಲಿಯೇ ಆ ಸ್ಥಾನದ ಗೌರವ ಹಾಳು ಮಾಡಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಕೂಡಲೇ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು' ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.