ದೇವೇಗೌಡರು ಕರೆದಿದ್ದ ಸಭೆ ದಿಢೀರ್ ಮುಂದೂಡಿದ್ದು ಏಕೆ?
ಬೆಂಗಳೂರು, ಮೇ 22 : 2019ರ ಲೋಕಸಭಾ ಚುನಾವಣೆ ಫಲಿತಾಂಶ ಘೋಷಣೆಗೆ ಒಂದು ದಿನ ಬಾಕಿ ಉಳಿದಿದೆ. ಕರ್ನಾಟಕದ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಜೆಡಿಎಸ್ ಪಾಳಯದಲ್ಲಿ ಫಲಿತಾಂಶ ಬಗ್ಗೆ ಚರ್ಚೆ ನಡೆಯುತ್ತಿದೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮೇ 21ರಂದು ಶಾಸಕರು ಮತ್ತು ಸಚಿವರ ಸಭೆಯನ್ನು ಕರೆದಿದ್ದರು. ದಿಢೀರ್ ಬೆಳವಣಿಗೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ. ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಎಲ್ಲರೂ ಬೆಂಗಳೂರಿನಲ್ಲಿದ್ದರೂ ಸಭೆ ನಡೆದಿಲ್ಲ.
ಕರ್ನಾಟಕ ಕಾಂಗ್ರೆಸ್ನಲ್ಲಿಯೂ ಹಲವು ಬೆಳವಣಿಗೆಗಳು ನಡೆಯುತ್ತಿವೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮಂಗಳವಾರ ರಾತ್ರಿ ಮಹತ್ವದ ಸಭೆ ನಡೆಸಿದ್ದಾರೆ.
ಮೇ 21ರಂದು ದೆಹಲಿಗೆ ತೆರಳಬೇಕಿದ್ದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಕೊನೆ ಕ್ಷಣದಲ್ಲಿ ಭೇಟಿ ರದ್ದು ಮಾಡಿದ್ದರು. ಮಂಗಳವಾರ ಮಧ್ಯಾಹ್ನದಿಂದ ರಾತ್ರಿಯ ತನಕ ಎಚ್.ಡಿ.ಕುಮಾರಸ್ವಾಮಿ ಅವರು ದೇವೇಗೌಡರ ಪದ್ಮನಾಭನಗರದ ನಿವಾಸದಲ್ಲಿಯೇ ಇದ್ದರು....

ದೇವೇಗೌಡರು ಕರೆದಿದ್ದ ಸಭೆ ಮುಂದೂಡಿಕೆ
ಮೇ 23ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ಹಿನ್ನಲೆಯಲ್ಲಿ ಮೇ 21ರಂದು ಎಚ್.ಡಿ.ದೇವೇಗೌಡ ಅವರು ಸಚಿವರು, ಶಾಸಕರ ಸಭೆ ಕರೆದಿದ್ದರು. ಆದರೆ, ಸಭೆಯನ್ನು ದಿಢೀರ್ ಆಗಿ ಮುಂದೂಡಲಾಗಿದೆ. ಜೆಡಿಎಸ್ ನಾಯಕರ ನಡೆ ಕುತೂಹಲಕ್ಕೆ ಕಾರಣವಾಗಿದೆ.

ಸಭೆ ಕರೆದೆ ಇಲ್ಲ ಅಂದ್ರು ಅಧ್ಯಕ್ಷರು
ಬೆಂಗಳೂರಿನಲ್ಲಿಯೇ ಇದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮಂಗಳವಾರ ಸಂಜೆ, 'ಯಾವುದೇ ಸಭೆಯನ್ನು ಕರೆದಿಲ್ಲ. ಸಭೆ ಕರೆದ ಬಗ್ಗೆ ನಿಮಗೆ ಮಾಹಿತಿ ನೀಡಿದ್ದು ಯಾರು?' ಎಂದು ಮಾಧ್ಯಮಗಳನ್ನೇ ಪ್ರಶ್ನೆ ಮಾಡಿದರು.

ಇಬ್ಬರು ಬೆಂಗಳೂರಿನಲ್ಲಿದ್ದರು
ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಬೆಂಗಳೂರಿನಲ್ಲಿದ್ದರು. ದೆಹಲಿ ಪ್ರವಾಸವನ್ನು ಮೊಟಕುಗೊಳಿಸಿ ಬೆಂಗಳೂರಿನಲ್ಲಿ ಉಳಿದಿದ್ದರು. ಆದರೆ, ಸಚಿವರು, ಶಾಸಕರ ಸಭೆಯನ್ನು ಮಾತ್ರ ನಡೆಸಲಿಲ್ಲ. ಸಭೆಯನ್ನು ಮುಂದೂಡಿದ್ದು ಏಕೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಚಂದ್ರಬಾಬು ನಾಯ್ಡು ಭೇಟಿ
ಆಂಧ್ರ ಪ್ರದೇಶದ ಮುಖ್ಯಮಂತ್ರ ಎನ್.ಚಂದ್ರಬಾಬು ನಾಯ್ಡು ಅವರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದರು. ಮಂಗಳವಾರ ಸಂಜೆ ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಪದ್ಮನಾಭನಗರದ ನಿವಾಸದಲ್ಲಿ ಭೇಟಿ ಮಾಡಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರು ಮಧ್ಯಾಹ್ನದಿಂದಲೇ ಎಚ್.ಡಿ.ದೇವೇಗೌಡರ ನಿವಾಸದಲ್ಲಿದ್ದರು.

HMT ಕ್ಷೇತ್ರಗಳ ಬಗ್ಗೆ ಚರ್ಚೆ
ಜೆಡಿಎಸ್ ನಾಯಕರು ಹಾಸನ, ಮಂಡ್ಯ ಮತ್ತು ತುಮಕೂರು ಕ್ಷೇತ್ರಗಳ ಚುನಾವಣಾ ಫಲಿತಾಂಶದ ಬಗ್ಗೆ ಸರಣಿ ಸಭೆಗಳನ್ನು ನಡೆಸಿ ಚರ್ಚೆ ಮಾಡುತ್ತಿದ್ದಾರೆ. ಎಚ್.ಡಿ.ದೇವೇಗೌಡರು ಮತ್ತು ಇಬ್ಬರು ಮೊಮ್ಮಕ್ಕಳ ಭವಿಷ್ಯ ಮೂರು ಕ್ಷೇತ್ರಗಳಲ್ಲಿ ಅಡಗಿದೆ.












Click it and Unblock the Notifications