'ಮುನಿರತ್ನ ರಾಜೀನಾಮೆ ಕೊಟ್ರೆ ಇವರಿಗೇ ದೊಡ್ಡ ಲಾಭ..' ರಾಜಕೀಯದಲ್ಲಿ ಜೋರಾಯ್ತು ಚರ್ಚೆ
ಜಾತಿ ನಿಂದನೆ, ಕೊಲೆ ಬೆದರಿಕೆ ಹಾಗೂ ಅತ್ಯಾಚಾರ ಕೇಸ್ಗಳಲ್ಲಿ ಲಾಕ್ ಆಗಿರುವ ಬಿಜೆಪಿ ಶಾಸಕ ಮುನಿರತ್ನ ಸದ್ಯ ಜೈಲು ಸೇರಿದ್ದಾರೆ. ಈ ಪ್ರಕರಣಗಳ ತನಿಖೆಗೆ ಸರ್ಕಾರ ಎಸ್ಐಟಿ ತಂಡವನ್ನೂ ರಚಿಸಿದೆ. ಈಗ ಎಲ್ಲೆಡೆಯಿಂದಲೂ ಮುನಿರತ್ನ ರಾಜೀನಾಮೆಗೆ ಒತ್ತಾಯ ಕೇಳಿಬಂದಿದ್ದು, ಆರೋಪ ನಿಜವಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಖುದ್ದು ಮುನಿರತ್ನ ಕೂಡ ಹೇಳಿದ್ದಾರೆ.
ಒಂದು ವೇಳೆ ಮುನಿರತ್ನ ರಾಜೀನಾಮೆ ನೀಡಿದ್ದೇ ಆದಲ್ಲಿ ಅದರಿಂದ ಲಾಭ ಅನೇಕರಿಗೆ ಆಗಲಿದೆ ಎಂದು ರಾಜಕೀಯ ವಲಯದಲ್ಲಿ ಗುಸುಗುಸು ಶುರುವಾಗಿದೆ. ಸದ್ಯ ಆರ್.ಆರ್.ನಗರ ಕ್ಷೇತ್ರದ ಶಾಸಕರಾಗಿ ಮುನಿರತ್ನ ತಮ್ಮ ಸ್ಥಾನದಿಂದ ಕೆಳಗಿಳಿದರೆ ಶಾಸಕ ಸ್ಥಾನ ಖಾಲಿಯಾಗಲಿದೆ.

ಇಲ್ಲಿ ಮತ್ತೊಮ್ಮೆ ಚುನಾವಣೆ ನಿಗದಿಯಾಗುವ ಸಾಧ್ಯತೆ ಇದ್ದು, ಮುನಿರತ್ನ ಜೈಲಿನಲ್ಲಿರುವುದರಿಂದ ಸಹಜವಾಗಿ ಆರ್.ಆರ್.ನಗರ ಕ್ಷೇತ್ರದ ಚುಕ್ಕಾಣಿ ಕೈತಪ್ಪಲಿದೆಯಂತೆ. ಕ್ಷೇತ್ರದಲ್ಲಿ ಮುನಿರತ್ನಗೆ ಟಕ್ಕರ್ ಕೊಡುತ್ತಲೇ ಇರುವ ಕುಸುಮಾ ಹನುಮಂತರಾಯಪ್ಪ ಅವರಿಗೆ ಈ ಅವಕಾಶ ವರದಾನವಾಗಲಿದ್ದು, ಮುಂದಿನ ಚುನಾವಣೆಯಲ್ಲೇ ಕುಸುಮಾ ಶಾಸರಾಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ.
ರಾಜರಾಜೇಶ್ವರಿ ಕ್ಷೇತ್ರದಲ್ಲಿ ಕುಸುಮಾ ಹಾಗೂ ಮುನಿರತ್ನ ಅವರ ನಡುವಿನ ಜಿದ್ದಾಜಿದ್ದಿ ಇಡೀ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಗಮನ ಸೆಳೆದಿದ್ದು ಗೊತ್ತೇ ಇದೆ. ಸತತ ನಾಲ್ಕು ಬಾರಿಯೂ ಶಾಸಕರಾಗಿ ಗೆದ್ದಿರುವ ಮುನಿರತ್ನ ಹಿಂದಿನ ಚುನಾವಣೆಗಳಲ್ಲಿ ಕುಸುಮಾ ಹನುಮಂತರಾಯಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಮುನಿರತ್ನ ಎದುರಾಳಿ ಸ್ಪರ್ಧಿಸಿ ಪೈಪೋಟಿ ನೀಡಿದ್ದರು. ಕಾಂಗ್ರೆಸ್ ಕೂಡ ಇದನ್ನು ಪ್ರತಿಷ್ಟೆಯ ಕ್ಷೇತ್ರ ಎಂದುಕೊಂಡಿತ್ತು.

2020ರಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾದಾಗ ಅಂದಿನ ಪ್ರಭಾವಿ ಸಚಿವ ಸ್ಥಾನದಲ್ಲಿದ್ದ ಮುನಿರತ್ನ ಅಭ್ಯರ್ಥಿಯಾಗಿ ಮತ್ತೆ ಕಣಕ್ಕಿಳಿದಿದ್ದರು. ಎದುರಾಳಿಯಾಗಿ ಕಾಂಗ್ರೆಸ್ ಕುಸುಮಾ ಅವರನ್ನು ಅಖಾಡಕ್ಕಿಳಿಸಿತ್ತು. ಆದರೆ ಮುನಿರತ್ನ ಮುನ್ನಡೆ ಸಾಧಿಸಿ, ಕಾಂಗ್ರೆಸ್ಗೆ ಮುಖಭಂಗ ಮಾಡಿದ್ದರು.
ಇಷ್ಟಕ್ಕೆ ಸುಮ್ಮನಾಗದ ಕಾಂಗ್ರೆಸ್ಪಕ್ಷವು ಮುಂದಿನ ಚುನಾವಣೆಗಾಗಿ ಕಾಯುತ್ತಲೇ ಇತ್ತು. ಅದರಂತೆ ಕಳೆದ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ರಾಜರಾಜೇಶ್ವರಿ ಕ್ಷೇತ್ರದಿಂದ ಮುನಿರತ್ನ ಎದುರು ಕುಸುಮಾ ಅವರನ್ನೇ ಮತ್ತೆ ನಿಲ್ಲಿಸಿ, ಬೆಂಬಲಕ್ಕೆ ನಿಂತಿತು. ಈ ವೇಳೆ ಈ ಕ್ಷೇತ್ರವು ರಣರಂಗವಾಗಿದ್ದಂತೂ ನಿಜ. ಅಭ್ಯರ್ಥಿಗಳಿಬ್ಬರೂ ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಂಡು ಪೊಲೀಸ್ ಠಾಣೆಗಳವರೆಗೆ ತಲುಪಿದ್ದರು.
ಚುನಾವಣೆಯಲ್ಲಿ ಮುನಿರತ್ನ ನಾಯ್ಡು ವಿರುದ್ಧ ಕಾಂಗ್ರೆಸ್ನ ಕುಸುಮಾ ಅವರು ಕೇವಲ 11,842 ಮತಗಳ ಅಂತರದಿಂದ ಸೋತಿದ್ದರು. ಅಂದರೆ ಮುನಿರತ್ನ ಅವರ ಸನಿಹಕ್ಕೆ ಕುಸುಮಾ ಅವರೂ ಲಗ್ಗೆ ಇಟ್ಟಿದ್ದರು. ಈಗಲೂ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿರುವ ಕುಸುಮಾ ಅವರು ಶಾಸಕಿಯಾಗುವ ಹಂಬಲದಲ್ಲಿದ್ದಾರೆ.
ಹಾಗಾಗಿ ಮುನಿರತ್ನ ರಾಜೀನಾಮೆಯಿಂದ ಮತ್ತೆ ಉಪ ಚುನಾವಣೆ ಘೋಷಣೆಯಾದೆ, ರಾಜರಾಜೇಶ್ವರಿ ನಗರದ ಮುಂದಿನ ಶಾಸಕಿ ಕುಸುಮಾ ಹನುಮಂತರಾಯಪ್ಪ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ. ಬಿಜೆಪಿಯಿಂದ ಬೇರೆ ಅಭ್ಯರ್ಥಿ ನಿಲ್ಲಿಸಿದರೆ ರಾಜರಾಜೇಶ್ವರಿ ನಗರದಲ್ಲಿ ಗೆಲುವು ಸಾಧಿಸುವುದು ಕಷ್ಟವಾಗಲಿದೆ. ಈಗಾಗಲೇ ಅಲ್ಲಿ ಸಕ್ರಿಯರಾಗಿರುವ ಕುಸುಮಾ ಅವರಿಗೆ ಗೆಲುವು ಸಿಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.












Click it and Unblock the Notifications