ಜನವರಿ 8ರ ಭಾರತ್ ಬಂದ್; ಯಾರ ಬೆಂಬಲವಿಲ್ಲ
ಬೆಂಗಳೂರು, ಜನವರಿ 06 : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಜನವರಿ 8ರ ಬುಧವಾರ ಭಾರತ್ ಬಂದ್ಗೆ ಕರೆ ನೀಡಲಾಗಿದೆ. ಕರ್ನಾಟಕದ ಹಲವು ಸಂಘಟನೆಗಳು ಬಂದ್ಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿವೆ.
ದೇಶದ 10 ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ಗೆ ಕರೆ ಕೊಟ್ಟಿವೆ. ಕೇಂದ್ರ ಕಾರ್ಮಿಕ ಇಲಾಖೆಯ ಸಚಿವರ ಜೊತೆ ಸಭೆ ನಡೆಸಿದ ಬಳಿಕ ಸಂಘಟನೆಗಳು ಮುಷ್ಕರ ನಡೆಸುವ ತೀರ್ಮಾನವನ್ನು ಕೈಗೊಂಡಿವೆ. ಕಾರ್ಮಿಕರ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.
ಸುಮಾರು 14 ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಭಾರತ್ ಬಂದ್ ಸಂಪೂರ್ಣ ಯಶಸ್ವಿಯಾಗಲಿದೆಯೇ? ಎಂದು ಕಾದು ನೋಡಬೇಕು. ಹಲವು ಸಂಘಟನೆಗಳು ಬೆಂಬಲ ನೀಡಿದ್ದರೆ, ಕೆಲವು ಬೆಂಬಲ ಘೋಷಣೆ ಮಾಡಿಲ್ಲ.
ಕರ್ನಾಟಕದಲ್ಲಿ ಹಲವಾರು ಸಂಘಟನೆಗಳು ಭಾರತ್ ಬಂದ್ಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿವೆ. ಬಂದ್ ನಡೆಸುತ್ತಿರುವ ಉದ್ದೇಶವೂ ತಿಳಿದಿಲ್ಲ ಎಂದು ಹೇಳಿವೆ. ಆದ್ದರಿಂದ, ಬಂದ್ ರಾಜ್ಯದಲ್ಲಿ ಯಶಸ್ವಿಯಾಗುವ ಸಾಧ್ಯತೆ ಕಡಿಮೆ ಇದೆ.

ಕನ್ನಡದ ಒಕ್ಕೂಟದ ಬೆಂಬಲ?
ಜನವರಿ 8ರಂದು ನಡೆಯುವ ಭಾರತ್ ಬಂದ್ಗೆ ಕನ್ನಡ ಪರ ಸಂಘಟನೆಗಳು ಬೆಂಬಲ ಘೋಷಣೆ ಮಾಡಿಲ್ಲ. ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ಬಂದ್ ಬೆಂಬಲಿಸುವುದಿಲ್ಲ. ಪ್ರವೀಣ್ ಶೆಟ್ಟಿ ಬಣ ಇನ್ನೂ ಈ ಕುರಿತು ತೀರ್ಮಾನ ಮಾಡಿಲ್ಲ. ಆದ್ದರಿಂದ, ಕನ್ನಡ ಒಕ್ಕೂಟ ಬಂದ್ನಿಂದ ದೂರ ಉಳಿಯಲಿದೆ.

ಹೋಟೆಲ್ ಮಾಲೀಕರ ಬೆಂಬಲವಿಲ್ಲ
ಕರ್ನಾಟಕ ಬಂದ್, ಭಾರತ್ ಬಂದ್ ಆದರೆ ಹೊರಗೆ ಊಟ ತಿಂಡಿ ಮಾಡುವವರು ಚಿಂತಿಸಬೇಕು. ಆದರೆ, ಬುಧವಾರದ ಬಂದ್ಗೆ ಹೋಟೆಲ್ ಮಾಲೀಕರ ಸಂಘ ಬಾಹ್ಯ ಬೆಂಬಲ ಮಾತ್ರ ನೀಡಲಿದೆ. ಹೋಟೆಲ್ ಬಂದ್ ಮಾಡುವುದಿಲ್ಲ.

ಪೆಟ್ರೋಲ್ ಬಂಕ್ ಓಪನ್
10 ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿರುವ ಭಾರತ್ ಬಂದ್ಗೆ ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಬೆಂಬಲ ನೀಡಿಲ್ಲ. "ಬಂದ್ ಬೆಂಬಲಿಸುವುದಿಲ್ಲ" ಎಂದು ಅಸೋಸಿಯೇಷನ್ ಅಧ್ಯಕ್ಷ ಬಾಲಾಜಿ ಹೇಳಿದ್ದಾರೆ.

ಮಂಗಳವಾರ ತೀರ್ಮಾನ
ಭಾರತ್ ಬಂದ್ ದಿನ ಖಾಸಗಿ ಶಾಲೆಗಳಿಗೆ ರಜೆ ನೀಡುವ ಬಗ್ಗೆ ಮಂಗಳವಾರ ತೀರ್ಮಾನ ಕೈಗೊಳ್ಳಲಾಗುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಆಯಾ ಶಾಲೆಗಳ ಮುಖ್ಯಸ್ಥರು ರಜೆ ನೀಡುವ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ.

ಟ್ರಾವೆಲ್ ಮಾಲೀಕರ ಸಂಘ
ಜನವರಿ 8ರ ಬಂದ್ಗೆ ಬಾಹ್ಯ ಬೆಂಬಲ ನೀಡಲು ಕರ್ನಾಟಕ ರಾಜ್ಯ ಟ್ರಾವೆಲ್ ಮಾಲೀಕರ ಸಂಘ ತೀರ್ಮಾನಿಸಿದೆ. ಆರ್ಥಿಕ ನಷ್ಟದಲ್ಲಿರುವ ಉದ್ಯಮಕ್ಕೆ ಬಂದ್ನಿಂದ ಮತ್ತಷ್ಟು ನಷ್ಟವಾಗಲಿದೆ. ಆದ್ದರಿಂದ ಸೇವೆಗಳನ್ನು ಸ್ಥಗಿತಗೊಳಿಸುವುದಿಲ್ಲ ಸೇವೆ ಎಂದಿನಂತೆ ಇರುತ್ತದೆ.











Click it and Unblock the Notifications