ಗಿಡ ಬೆಳೆಸಿ, ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ಪಡೆಯಿರಿ!
ಕೊಪ್ಪಳ, ಮೇ 23 : ಮನೆಯ ಮುಂದೆ ಗಿಡ ನೆಡಿ. ಉತ್ತಮವಾಗಿ ಅದನ್ನು ನೋಡಿಕೊಳ್ಳಿ. ಆಸ್ತಿ ತೆರಿಗೆಯಲ್ಲಿ ಶೇ 5ರಷ್ಟು ರಿಯಾಯಿತಿ ಪಡೆಯಿರಿ. ಕೊಪ್ಪಳ ಜಿಲ್ಲಾಡಳಿತ ಇಂತಹ ವಿನೂತನ ಅಭಿಯಾನವನ್ನು ಆರಂಭಿಸಿದ್ದು, ಹಸಿರು ಕ್ರಾಂತಿ ಮಾಡಲು ಮುಂದಾಗಿದೆ.
ಕೊಪ್ಪಳ ಜಿಲ್ಲಾಡಳಿತ ಸಾರ್ವಜನಿಕರು ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ 'ಹಸಿರು ಅಭಿಯಾನ' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾಮೂಹಿಕವಾಗಿ ಗಿಡ ನೆಡುವ ಈ ಅಭಿಯಾನಕ್ಕಾಗಿ ಈಗಿನಿಂದಲೇ ಗುಂಡಿಗಳನ್ನು ತೋಡಿ ಸಿದ್ಧ ವಾಗಿಟ್ಟುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. [ಚಿಂತೆ ಬಿಡಿ, ಗಿಡ ನೆಡಿ ಎಂದ ಮಲ್ಲಿಕಾರ್ಜುನ ಖರ್ಗೆ]

ಜನರು ತಮ್ಮ ಮನೆಗಳ ಮುಂದೆ ಹಾಗೂ ಹಿಂಭಾಗದಲ್ಲಿ ಗಿಡ ನೆಡಲು ಸೂಕ್ತ ಸ್ಥಳದಲ್ಲಿ ಈಗಲೇ ಅಗತ್ಯ ಗುಂಡಿ (ಪಿಟ್) ತೋಡಿ ಸಿದ್ಧವಾಗಿ ಇಟ್ಟುಕೊಳ್ಳಬೇಕು. ಮುಂಗಾರು ಮಳೆ ಆರಂಭವಾದ ತಕ್ಷಣ ಜಿಲ್ಲಾಡಳಿತದ ವತಿಯಿಂದ ಜನರಿಗೆ ಗಿಡಗಳನ್ನು ವಿತರಣೆ ಮಾಡಲಾಗುತ್ತದೆ. [ಬೆಂಗಳೂರು: ವಾಸ್ತುದೋಷ ಕಾರಣ, ನೇರಳೆ ಮರದ ಜೀವ ಹರಣ?]
ಮನೆಯ ಸುತ್ತ-ಮುತ್ತ ಹೆಚ್ಚು ಸ್ಥಳಾವಕಾಶ ಹೊಂದಿರುವವರಿಗೆ ಹೆಚ್ಚು ಗಿಡಗಳನ್ನು ಮಿತಿ ಇಲ್ಲದೆ ವಿತರಣೆ ಮಾಡಲಾಗುತ್ತದೆ. ಗಿಡಗಳನ್ನು ಉತ್ತಮವಾಗಿ ನೋಡಿಕೊಂಡು ಜೋಪಾನ ಮಾಡಿ ಬೆಳೆಸಬೇಕು. ಗಿಡಗಳನ್ನು ಉತ್ತಮವಾಗಿ ಜೋಪಾನ ಮಾಡಿದವರಿಗೆ ವರ್ಷದ ಆಸ್ತಿ ತೆರಿಗೆಯಲ್ಲಿ ಶೇ 5 ರಷ್ಟು ರಿಯಾಯಿತಿ ನೀಡಲಾಗುತ್ತದೆ. [ಕಾರಲ್ಲೇ ಉದ್ಯಾನವನ ತಕ್ಕಳೊಪ್ಪ!]
ಜನರು ಈ ಹಸಿರು ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಅಭಿಯಾನಕ್ಕೆ ಅಗತ್ಯ ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿ ಗೊಳಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. [ಮಾಹಿತಿ : ಕೊಪ್ಪಳ ವಾರ್ತೆ]












Click it and Unblock the Notifications