‘ಕೇಂದ್ರ ಸರ್ಕಾರದಿಂದ ಲೋನ್ ಪಡೆಯಿರಿ’ ಸಚಿವರು ನೀಡಿದ ಸಲಹೆ ಏನು?
ಭಾರತ ವೇಗವಾಗಿ ಬೆಳೆಯುತ್ತಿದೆ, ಭಾರತದ ಆರ್ಥಿಕ ವೇಗಕ್ಕೆ ಬೇರೆ ಯಾವುದೇ ದೇಶಗಳೂ ಸಾಟಿಯಾಗಿ ನಿಲ್ಲಲು ಆಗುತ್ತಿಲ್ಲ. ಭಾರತ ಈಗ ಜಗತ್ತಿನ ಟಾಪ್-5 ಆರ್ಥಿಕತೆ ಹೊಂದಿರುವ ದೇಶಗಳ ಪೈಕಿ ಒಂದಾಗಿದ್ದು, ಇನ್ನೇನು ಕೆಲವೇ ವರ್ಷದಲ್ಲಿ ಟಾಪ್-3 ಸ್ಥಾನಕ್ಕೂ ಭರ್ಜರಿ ಎಂಟ್ರಿ ಕೊಡಲಿದೆ. ಈ ಸಮಯದಲ್ಲಿ '2047ರ ಒಳಗೆ ಭಾರತ ಪವರ್ ಫುಲ್' ಅಂತಿದ್ದಾರೆ ಇವರು. ಹಾಗೇ ಜನರ ಆರ್ಥಿಕ ಅಭಿವೃದ್ಧಿಗೆ ಕೇಂದ್ರದ ಸವಲತ್ತುಗಳನ್ನ ಬಳಸಲು ಸಲಹೆ ನೀಡಿದ್ದಾರೆ.
ಹೌದು, ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಭಾರತವೂ ಸೇರ್ಪಡೆ ಆಗಲಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಕಲ್ಪ ಮಾಡಿದ್ದು, ಭಾರತ ಸಹ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. 2047 ರ ಒಳಗೆ ಅಭಿವೃದ್ಧಿ ಹೊಂದಿದ ದೇಶವಾಗಿಸಲು ನಾನು ಕೂಡ ಬದ್ಧನಿದ್ದೇನೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ & ಕಲ್ಲಿದ್ದಲು ಸಚಿವರು ಹೇಳಿದ್ದಾರೆ. ಹಾಗೇ ಇದೇ ವೇಳೆ ಕೇಂದ್ರದಿಂದ ಜನರಿಗೆ ಸಿಗುತ್ತಿರುವ ಸೌಲಭ್ಯಗಳನ್ನೂ ವಿವರಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಲೋನ್ ಅವಕಾಶ!
ಇಂದು ಹುಬ್ಬಳ್ಳಿಯ ವರೂರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ, 'ವಿಕಸಿತ ಭಾರತ ಸಂಕಲ್ಪ ಯಾತ್ರೆ' ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು. ಅಂದಹಾಗೆ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆಯಬೇಕು. ಜನರಿಗೆ ಖಾಯಿಲೆ ಬಂದಾಗ ಚಿಕಿತ್ಸೆಗೆ ಹೆಚ್ಚು ಹಣ ಅಗತ್ಯ. ಆಗ ಸರ್ಕಾರದ ಯೋಜನೆ ಸಹಾಯಕ. ಆಯುಷ್ಮಾನ್ ಭಾರತ ಯೋಜನೆ ಅಡಿ ಚಿಕಿತ್ಸೆ ಪಡೆಯಬಹುದು. ವ್ಯಾಪಾರ ಆರಂಭಿಸಲು ಮುದ್ರಾ ಯೋಜನೆಯಡಿ, ಲೋನ್ ಪಡೆದುಕೊಳ್ಳಲು ಅವಕಾಶವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಲಹೆ ನೀಡಿದರು.
603 ರೂಪಾಯಿಗೆ ಅಡುಗೆ ಅನಿಲ
ರಾಸಾಯನಿಕ ಗೊಬ್ಬರ ಹಾಕಲಾರದೆ ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆಯಬೇಕು. ಹಾಗೇ ಬ್ಯಾಂಕಿನಿಂದ ಆರ್ಥಿಕ ಸಹಾಯ ಕೂಡಲೆ ದೊರೆಯಲಿದ್ದು, ಅದರ ಉಪಯೋಗ ಪಡೆಯಿರಿ. ಉಜ್ವಲ್ ಯೋಜನೆ ಅಡಿಯಲ್ಲಿ, 603 ರೂಪಾಯಿಗೆ ಅಡುಗೆ ಅನಿಲವನ್ನು ಪಡೆಯಬಹುದು. ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ, 2 ಲಕ್ಷ 70 ಸಾವಿರ ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. ಕೇಂದ್ರ ಯೋಜನೆ ಸದುಪಯೋಗವನ್ನ ಎಲ್ರೂ ಪಡೆದುಕೊಳ್ಳಬೇಕು. ಭಾರತ ಆರ್ಥಿಕವಾಗಿ ಸಬಲವಾಗ್ತಿದೆ ಎಂದು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ತಿಳಿಸಿದರು.

ಕೇಂದ್ರದ ಯೋಜನೆಗಳ ಬಗ್ಗೆ ಮಾಹಿತಿ
ಉಜ್ವಲ್ ಯೋಜನೆ, ಪೋಷಣ ಅಭಿಯಾನ, ಸ್ವಸಹಾಯ ಗುಂಪುಗಳಿಗೆ ಸಾಲ ಮಂಜೂರಾತಿ, ಆಯುಷ್ಮಾನ್ ಭಾರತ, ಕಿಸಾನ್ ಕ್ರೇಡಿಟ್ ಕಾರ್ಡ್, ಮುದ್ರಾ, ಸ್ವನಿಧಿ, ಕಿಸಾನ್ ಸಮ್ಮಾನ & ಪ್ರಧಾನ ಮಂತ್ರಿ ಅವರ ಆವಾಸ್ ಯೋಜನೆ ಸೇರಿ, ಹಲವಾರು ಜನಪರ ಯೋಜನೆಗಳ ಲಾಭ ಪಡೆದುಕೊಂಡ ಫಲಾನುಭವಿಗಳು ಭಾಗವಹಿಸಿದ್ದರು. ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ಕೂಡ ನಡೆಯಿತು. ಹಾಗೂ ಈ ವೇಳೆ ಸಂಕೇತ ತಂಡದವರ ವತಿಯಿಂದ ಡ್ರೋನ್ ಪ್ರದರ್ಶನ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧೆಡೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ, ಫಲಾನುಭವಿಗಳ ಜೊತೆ ಸಂವಾದ ನಡೆಸಿದ್ರು. ತುಮಕೂರಿನ ಮುಖೇಶ ಅವರು ಪ್ರಧಾನಮಂತ್ರಿ ಅವರ ಜೊತೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿ, ಮುದ್ರಾ ಯೋಜನೆ ಅಡಿ 4.50 ಲಕ್ಷ ರೂಪಾಯಿ ಲೋನ್ ತೆಗೆದುಕೊಂಡು ಕೆಲಸ ಪ್ರಾರಂಭಿಸಿದ್ದೆನೆ. ಈಗ 3 ಜನಕ್ಕೆ ಉದ್ಯೋಗವನ್ನ ನೀಡಿದ್ದೇನೆ ಎಂದು ಮುಖೇಶ್ ತಿಳಿಸಿದರು. ಆಗ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳೆಯಿರಿ, ಯುವ ಜನರಿಗೆ ಮತ್ತಷ್ಟು ಸಹಾಯ ಮಾಡುವಂತೆ ಆಗಿ ಎಂದು ಪ್ರಧಾನಿ ಮೋದಿ ಅವರು ಇದೇ ವೇಳೆ ಶುಭ ಹಾರೈಸಿದರು.












Click it and Unblock the Notifications